ಈಗಿನ ಸ್ಪರ್ಧೆ ವಿಧಾನಸಭೆ ಚುನಾವಣೆಗೆ ಅಡಿಪಾಯ
Team Udayavani, Apr 22, 2019, 6:00 AM IST
ಬಹು ಭಾಷಾ ನಟ ಕಮಲ್ಹಾಸನ್ ಈಗ ರಾಜಕಾರಣಿಯಾಗಿ ಬದಲಾಗಿದ್ದಾರೆ. ಮಕ್ಕಳ್ ನೀದಿ ಮಯ್ಯಂ ಪಕ್ಷ ಸ್ಥಾಪಿಸಿ, ತಮಿಳುನಾಡಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
ರಾಜಕೀಯ ಪ್ರವೇಶ ಮಾಡುವ ನಿಮ್ಮ ನಿರ್ಧಾರ ಎಷ್ಟು ಕಷ್ಟವಾಗಿತ್ತು?
ಕಷ್ಟವೇನೂ ಆಗಿರಲಿಲ್ಲ. ಹಾಗೆ ನೋಡಿದರೆ ಸಿನಿಮಾ ಕ್ಷೇತ್ರವೇ ಕಷ್ಟದ್ದು. ಬಿಸಿಲು, ಪ್ರಯಾಣ, ಖಳನಾಯಕನ ಜತೆಗೆ ಹೊಡೆದಾಟ, ನಾಯಕಿಯ ಜತೆಗೆ ಡ್ಯಾನ್ಸ್…ಇತ್ಯಾದಿ ಶೆಡ್ನೂಲ್ ಇರುತ್ತದೆ. ರಾಜಕೀಯದಲ್ಲಿ ಖಳನಾಯಕರ ಜತೆಗೆ ಸದ್ದಿಲ್ಲದೆ ಹೊಡೆದಾಟ ನಡೆಯುತ್ತದೆ. ಜನರಿಂದ ದೊರಕುವ ಪ್ರೀತಿಯಿಂದ ನೋವು ಮರೆಯುವಂತಾಗುತ್ತದೆ.
ಇದು ನಿಮ್ಮ ಭವಿಷ್ಯದ ಪರೀಕ್ಷೆ ಆಗಲಿದೆಯೇ?
ಟ್ವಿಟರ್ನಿಂದ ರಾಜಕೀಯಕ್ಕೆ ಬಂದಾಗಲೇ ಪರೀಕ್ಷೆ ಶುರುವಾಗಿತ್ತು.
ನಿಮ್ಮ ಪಕ್ಷದ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?
ನಾವು ತಳಮಟ್ಟದಲ್ಲಿ ಎಲ್ಲರನ್ನು ತಲುಪಿದ್ದೇವೆ ಎಂಬ ವಿಶ್ವಾಸ ನನ್ನದು. ರಾಜಕೀಯ ವಿಶ್ಲೇಷಕರು ಹೇಳುವಂತೆ ಶೇ.5ರಷ್ಟು ಬೆಂಬಲ, ಮತ ಸಿಕ್ಕಿತು ಎಂದಾದರೆ ನಾವು ರಾಜಕೀಯ ಕ್ಷೇತ್ರದ ಮುಖ್ಯ ವಾಹಿನಿಯಲ್ಲಿದ್ದೇವೆ ಎನ್ನುವುದು ಸಾಬೀತಾಗುತ್ತದೆ. ಅಷ್ಟು ಮಾತ್ರಕ್ಕೆ ತೃಪ್ತಿ ಹೊಂದುವವನು ನಾನಲ್ಲ. ನಾನು ಜನರಿಗೆ ಕವರ್ನಲ್ಲಿ ಹಣ ಹಂಚದೆ ಮುಂದೆ ಸಾಗಲು ಬಯಸುವಾತ. ಆ ಪ್ರಯತ್ನ ಮಾಡುತ್ತಿದ್ದೇನೆ. ಹೀಗಾಗಿ, ಶೇ.10ರಷ್ಟು ಜನರ ಬೆಂಬಲ, ಮತ ಸಿಕ್ಕೀತು ಎಂದುಕೊಂಡಿದ್ದೇನೆ.
ಶೇ.10ರಷ್ಟು ಅಂದರೆ ಜಯಶಾಲಿಯಾಗುವುದಿಲ್ಲ. ಆದರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ನಿಮ್ಮ ಪಕ್ಷ ಪ್ರಮುಖವಾಗಿ ಹೊರಹೊಮ್ಮಲಿದೆ. ಯಾವ ಪಕ್ಷದ ಜತೆಗಾದರೂ ಮೈತ್ರಿ ಒಪ್ಪಿಕೊಳ್ಳುವಿರಾ?
ಯಾರ ಜತೆಗೆ ಮೈತ್ರಿ ಮಾಡಿಕೊಳ್ಳುತ್ತೇನೆ ಎನ್ನುವುದನ್ನು ಮುಂದೆ ನಿರ್ಧರಿಸಲಾಗುತ್ತದೆ. ಎಡಪಕ್ಷಗಳ ಬಗ್ಗೆ ನನಗೆ ಗೌರವ ಇದೆ. ಆದರೆ ತಮಿಳುನಾಡಿನಲ್ಲಿ ಚುನಾವಣಾ ಮೈತ್ರಿ ಗಾಗಿ ಅವರು ಮಾಡಿದ ಆಯ್ಕೆ ಸರಿಯಾಗಿಲ್ಲ. ಅವರು ನನ್ನ ಜತೆಗೆ ಇರಬೇಕಾಗಿತ್ತು. ರಾಜಕೀಯದಲ್ಲಿ ಯಾರೂ ಮಿತ್ರ ರಲ್ಲ, ಶತ್ರುಗಳಲ್ಲ ಎನ್ನುತ್ತಾರೆ. ಡಿಎಂಕೆ, ಎಐಎಡಿಎಂಕೆ ಜತೆಗೆ ಮೈತ್ರಿಗೆ ಸಲಹೆಯೂ ಇದೆ. ಆದರೆ ಅವರಿಂದ ದೂರ ಇರಲು ನಿರ್ಧರಿಸಿದ್ದೇನೆ.
ರಾಜಕೀಯಕ್ಕೆ ಬರುವುದರ ಮೊದಲು ಈಗ ಡಿಎಂಕೆ ಅಧ್ಯಕ್ಷರಾಗಿರುವ ಎಂ.ಕೆ.ಸ್ಟಾಲಿನ್ ಜತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಿರಿ. ಅವರ ಜತೆಗೆ ಈಗ ನಿಮ್ಮ ಬಾಂಧವ್ಯ ಹೇಗಿದೆ?
ಅವರ ತಂದೆಯವರ ಜತೆಗೆ ಇದ್ದಷ್ಟು ಆತ್ಮೀಯತೆ ಸ್ಟಾಲಿನ್ ಜತೆಗೆ ಇಲ್ಲ. ಹಾಗೆಂದ ಮಾತ್ರಕ್ಕೆ ನಾನು ಸ್ನೇಹಿತರನ್ನು ಕಳೆದುಕೊಂಡಿದ್ದೇನೆ ಎಂದು ಅರ್ಥವಲ್ಲ. ದಿ.ಎಂ.ಕರುಣಾನಿಧಿಯವರ ಜತೆಗಿನ ಭೇಟಿಗೆ ಹೋಲಿಕೆ ಮಾಡಿದರೆ, ಸ್ಟಾಲಿನ್ರನ್ನು ಕಂಡು, ಮಾತಾಡಿದ್ದು ಕಡಿಮೆ.
ಚುನಾವಣ ಪ್ರಚಾರ ಎಂದರೆ ವೆಚ್ಚದಾಯಕ. ಡಿಎಂಕೆ, ಎಐಎಡಿಎಂಕೆಯಂಥ 2 ದೊಡ್ಡ ಪಕ್ಷಗಳ ಜತೆಗೆ ಹೇಗೆ ನಿಭಾಯಿಸುತ್ತೀರಿ?
ಅವರಂತೆ ನಾವು ಸರ್ಕಸ್ ಕಂಪೆನಿಯನ್ನು ನಡೆಸುತ್ತಿಲ್ಲ. ಸರಿಯಾದ ರೀತಿಯಲ್ಲಿ ಎಲ್ಲವನ್ನೂ ನಿರ್ವಹಿಸುವ ಸಣ್ಣ ಗುಂಪು ನಮ್ಮದು. ಮಿತಿಗಿಂತ ಕಡಿಮೆಯೇ ನಮ್ಮ ಅಭ್ಯರ್ಥಿಗಳು ಖರ್ಚು ಮಾಡುತ್ತಿದ್ದಾರೆ.
ಶೇ.10 ಅಥವಾ ಶೇ.5ಕ್ಕಿಂತ ಜನಬೆಂಬಲ ಕಡಿಮೆಯಾದರೆ ಏನು ಮಾಡುತ್ತೀರಿ?
ಮುಂದಿನ ಜೀವನದ ಅವಧಿಯನ್ನು ರಾಜಕೀಯದಲ್ಲಿಯೇ ಕಳೆಯಲಿದ್ದೇನೆ. ಕೇವಲ ಅಲ್ಪಕಾಲಕ್ಕಾಗಿ ನಾನು ರಾಜಕೀಯಕ್ಕೆ ಬಂದವನಲ್ಲ. ಈ ಚುನಾವಣೆ ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ವಿಶೇಷವಾಗಿ ನನ್ನ ಪಕ್ಷಕ್ಕೆ ಅಡಿಪಾಯವಾಗಲಿದೆ.
(ಸಂದರ್ಶನ ಕೃಪೆ: ದ ಟೈಮ್ಸ್ ಆಫ್ ಇಂಡಿಯಾ)