ಜಳಕದ ಪುಳಕಕ್ಕಾಗಿ ಕಾದಿಹ ಮಂದಸ್ಮಿತ
Team Udayavani, Feb 17, 2018, 6:00 AM IST
ಬೆಂಗಳೂರು: ಸಾವಿರಾರು ವರ್ಷಗಳಿಂದ ತ್ಯಾಗ, ಅಹಿಂಸೆ, ಶಾಂತಿಯ ಪ್ರತೀಕವಾಗಿ ವಿಂಧ್ಯಗಿರಿಯ ತುದಿಯಲ್ಲಿ ತಲೆಯೆತ್ತಿನಿಂತಿರುವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ. 88ನೇ ಮಹಾಮಜ್ಜನಕ್ಕಾಗಿ ಭಕ್ತರು ಕಾತರರಾಗಿದ್ದು, ಶನಿವಾರ ನಡೆಯುವ ಐತಿಹಾಸಿಕ ಘಳಿಗೆಯನ್ನು ಕಣ್ತುಂಬಿ ಕೊಳ್ಳುವ ನಿರೀಕ್ಷೆಯಿಂದ ಪುಳಕಗೊಂಡಿದ್ದಾರೆ.
21ನೇ ಶತಮಾನದ ಎರಡನೇ ಮಹಾಮಸ್ತಕಾ ಭಿಷೇಕ ಮಹೋತ್ಸವಕ್ಕೆ ಶ್ರೀ ಕ್ಷೇತ್ರ ಬೆಳಗೊಳ ಸರ್ವ ರೀತಿಯಲ್ಲಿ ಸಜ್ಜಾಗಿದ್ದು, ವಿಶೇಷ ಕಳೆಯೊಂದಿಗೆ ಕಂಗೊಳಿಸುತ್ತಿದೆ.
ಐತಿಹಾಸಿಕವೂ ಅಪೂರ್ವವೂ ಎನಿಸಿರುವ ಮಹಾಮಸ್ತಕಾಭಿಷೇಕಕ್ಕೆ ಸಾಕ್ಷಿಯಾಗುವ ದೊಡ್ಡ ಬೆಟ್ಟದ ಮೂರ್ತಿಯತ್ತ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು, ಪ್ರವಾಸಿಗರ ದೃಷ್ಟಿ ನೆಟ್ಟಿದೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತ ಕಾಭಿಷೇಕವನ್ನು ಸಂಪ್ರದಾಯಬದ್ಧವಾಗಿ, ಶಾಸೊOಉàಕ್ತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಯನ್ನು ಶ್ರವಣಬೆಳಗೊಳ ಮಠ ಮಾಡಿಕೊಂಡಿದೆ. ಶನಿವಾರ ನಸುಕಿನ ಐದು ಗಂಟೆಗೆ ಆರಂಭವಾಗುವ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹಾಮಸ್ತಕಾ ಭಿಷೇಕ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ. ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ 108 ಕಲಶಗಳಿಂದ ಜಲಾಭಿಷೇಕದೊಂದಿಗೆ 12 ವರ್ಷಗಳ ಬಳಿಕ ಬಾಹುಬಲಿ ಮೂರ್ತಿಯ ಮಸ್ತಕಾಭಿಷೇಕ ವಿದ್ಯುಕ್ತವಾಗಿ ಆರಂಭವಾಗುತ್ತದೆ. ಮಧ್ಯಾಹ್ನ 3.30ರಿಂದ 5.30ರವರೆಗೆ ಪಂಚಾಮೃತ ಅಭಿಷೇಕ ನಡೆಯಲಿದ್ದು, ನಂತರ ಸಂಜೆ 5.30ರಿಂದ 6ರವರೆಗೆ ಅಷ್ಟದ್ರವ್ಯ ಪೂಜೆ, ಮಹಾಮಂಗಳಾರತಿಯಾಗುತ್ತಿದ್ದಂತೆ ಮೊದಲ ದಿನದ ಮಸ್ತಕಾಭಿಷೇಕಕ್ಕೆ ತೆರೆ ಬೀಳುತ್ತದೆ.
ಮಹೋತ್ಸವದ ಹಿನ್ನೆಲೆಯಲ್ಲಿ ಬೆಳಗೊಳದ ಗುಡಿ ಗೋಪುರ, ಬಸದಿಗಳು ವಿಶೇಷವಾಗಿ ಅಲಂಕೃತಗೊಂಡಿದ್ದರೆ, ದೊಡ್ಡ ಬೆಟ್ಟದ ಮೆಟ್ಟಿಲಿನ ಸಾಲು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ವಿಶೇಷ ಮೆರುಗು ಪಡೆದಿದೆ.
ಬಾಹುಬಲಿ ಮೂರ್ತಿಯ ಹಿಂಬದಿ ಅಳವಡಿಸಿರುವ ಅಟ್ಟಣಿಗೆಗೆ ಧಾರ್ಮಿಕ ಸಂಕೇತ, ಆಕರ್ಷಕ ಮೇಲು ಫಲಕಗಳು ಕಳೆ ಹೆಚ್ಚಿಸಿದೆ. ಈಗಾಗಲೇ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಮುನಿಗಳು, ಆಚಾರ್ಯರು, ಭಕ್ತರು ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಬೆಳಗೊಳದ ಸ್ಥಳೀಯರು, ಸುತ್ತಮುತ್ತಲ ಗ್ರಾಮ ಸ್ಥರು, ತಾಲೂಕು, ಜಿಲ್ಲಾ ಕೇಂದ್ರ ಮಾತ್ರವಲ್ಲದೇ ರಾಜ್ಯ ಮತ್ತು ರಾಷ್ಟ್ರದ ನಾನಾ ಭಾಗದ ಭಕ್ತರು, ಪ್ರವಾಸಿಗರು ವಿಂಧ್ಯಗಿರಿಯತ್ತ ಮುಖ ಮಾಡಿದ್ದಾರೆ.
ಸಾಕಷ್ಟು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ದೇಶದ ಐತಿಹಾಸಿಕ ಮಹೋತ್ಸವದಲ್ಲಿ ಭಾಗಿಯಾಗಲು ಈಗಾಗಲೇ ಬೆಳಗೊಳದಲ್ಲಿ ಬೀಡುಬಿಟ್ಟಿದ್ದಾರೆ. ಬಹಳಷ್ಟು ವಿದೇಶಿ ಪ್ರವಾಸಿಗರು ಈಗಾಗಲೇ ಕ್ಷೇತ್ರದಲ್ಲಿ ನೆಲೆಯೂರಿ ಜೈನ ಸಂಸ್ಕೃತಿ, ಪರಂಪರೆಯ ಅಧ್ಯಯನದಲ್ಲಿ ತೊಡಗಿದ್ದು, ಶನಿವಾರ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾದಿದ್ದಾರೆ.
58 ಅಡಿ ಎತ್ತರದ ಏಕಶಿಲಾ ಬಾಹುಬಲಿ ಮೂರ್ತಿಗೆ ದಿನನಿತ್ಯ ಪಾದಪೂಜೆಯಷ್ಟೇ ನೆರವೇರುತ್ತದೆ. 12 ವರ್ಷಕ್ಕೊಮ್ಮೆಯಷ್ಟೇ ಇಡೀ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಪುನಸ್ಕಾರಗಳು ನಡೆಯುವುದರಿಂದ ಸಹಜವಾ ಗಿಯೇ ಐತಿಹಾಸಿಕ ಮಹತ್ವ ಹೆಚ್ಚಿಸಿದೆ. ಒಟ್ಟಾರೆ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ದೊರೆಯುತ್ತಿದ್ದಂತೆ “1008 ಗೊಮ್ಮಟೇಶ್ವರ ಬಾಹುಬಲಿ ಭಗವಾನ್ಕಿ ಜೈ’ ಎಂದು
ಉದ್ಘೋಷಿಸಲು ಭಕ್ತ ಸಮೂಹ ಕಾತುರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ
Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ