ಬಿಎಸ್ವೈ ಸಿಎಂ ಆಗಲೆಂದು ಪ್ರಾರ್ಥನೆ, ಪೂಜೆ
Team Udayavani, Jul 26, 2019, 5:30 AM IST
ಶಿಕಾರಿಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಪ್ರಾರ್ಥಿಸಿ ತಾಲೂಕಿನ ಕಾಳೇನಹಳ್ಳಿಯ ಶಿವಯೋಗಮಂದಿರದಲ್ಲಿನ ಲಿಂ| ರುದ್ರಮುನಿ ಮಹಾಸ್ವಾಮಿಗಳ ಗದ್ದುಗೆ ಬಳಿ ಗುರುವಾರ ರುದ್ರಾಭಿಷೇಕ ಜಪ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.
ಪೀಠಾಧಿಪತಿ ಶ್ರಿ ಮ|ನಿ|ಪ್ರ| ರೇವಣಸಿದ್ದ ಮಹಾಸ್ವಾಮಿಗಳ ನೇತೃತ್ವದಲ್ಲಿ ಯಡಿಯೂರಪ್ಪನವರ ಸ್ಥಳೀಯ ಅಭಿಮಾನಿಗಳು, ಆಪ್ತರು ಪೂಜೆ ಹಮ್ಮಿಕೊಂಡಿದ್ದರು. ಬೆಳಗಿನ ಜಾವದಿಂದ ಸತತ ರುದ್ರಾಭಿಷೇಕ ನಡೆಯಿತು. ಪೀಠಾಧ್ಯಕ್ಷ ಶ್ರೀ ಮನಿಪ್ರ ರೇವಣಸಿದ್ದ ಮಹಾಸ್ವಾಮಿಗಳು ಮೃತ್ಯುಂಜಯ ಜಪ ನಡೆಸಿ, ಸಕಲ ಸಂಕಷ್ಟಗಳು ಪರಿಹಾರವಾಗಿ ನಾಡಿನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಕೂಡಲೇ ಅಧಿಕಾರ ವಹಿಸಿಕೊಳ್ಳುವಂತೆ ಪ್ರಾರ್ಥಿಸಿದರು.