ಗಣೇಶ ಚತುರ್ಥಿ ತಿಂಡಿ ತಿನಿಸು ತಯಾರಿ ಸಂಭ್ರಮ
Team Udayavani, Sep 1, 2019, 5:38 AM IST
ಕಾಸರಗೋಡು: ರಾಷ್ಟ್ರೀಯ ಹಬ್ಬವಾಗಿರುವ ಗಣೇಶೋತ್ಸವ ಬಂತೆಂದರೆ ಮನೆ ಮನೆಗಳಲ್ಲೂ ಸಂಭ್ರಮ, ಸಡಗರ. ಸಂಭ್ರಮದ ಜತೆಗೆ ತಿಂಡಿ ತಿನಿಸುಗಳೂ ಮಹತ್ತರವಾದ ಪಾತ್ರವಹಿಸುತ್ತದೆ. ಅದರಲ್ಲಂತೂ ಚಕ್ಕುಲಿಗೆ ವಿಶೇಷ ಮನ್ನಣೆ. ಗಣೇಶ ಚತುರ್ಥಿ ಹಬ್ಬ ಬಂದಾಗ ಮನೆಮನೆಗಳಲ್ಲೂ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸುವುದು ರೂಢಿ.
ಕಾಸರಗೋಡು ನಗರದ ಸೂರ್ಲಿನಲ್ಲಿರುವ ಅನಂತ ಕಾಮತ್ ಅವರು ಕಳೆದ 40 ವರ್ಷಗಳಿಂದ ಚಕ್ಕುಲಿ ತಯಾರಿ ಮಾಡುತ್ತಿದ್ದಾರೆ. ಗಣೇಶ ಚತುರ್ಥಿಗೆ ಇಲ್ಲಿ ತಯಾರಾಗುವ ಚಕ್ಕುಲಿಗೆ ಹೆಚ್ಚಿನ ಬೇಡಿಕೆ ಇದೆ. ಅನಂತ ಕಾಮತ್ ಅವರಿಗೆ ಅವರ ಪುತ್ರ ವಿನಾಯಕ ಹೆಗಲುಕೊಟ್ಟು ಸಹಕರಿಸುತ್ತಾರೆ. ಹಿಂದೆ ವಿನಾಯಕ ಅವರ ಅಜ್ಜಿ ಸುನಂದ ಪ್ರಭು ಅವರು ಚಕ್ಕುಲಿಯನ್ನು ತಯಾರಿಸುತ್ತಿದ್ದರು. ಸುನಂದ ಅವರು ತಯಾರಿಸುತ್ತಿದ್ದ ಚಕ್ಕುಲಿ ಕಾಯಕವನ್ನು ಅವರ ಪುತ್ರ ಅನಂತ ಕಾಮತ್ ಮುಂದುವರಿಸಿಕೊಂಡು ಹೋಗಿದ್ದು, ಇದೀಗ 40 ವರ್ಷಗಳಾಯಿತು.ಗಣೇಶ ಚತುರ್ಥಿ ಆಚರಿಸಲು ಹಲವು ಮನೆಗಳಿಗೆ ಇಲ್ಲಿಂದಲೇ ಚಕ್ಕುಲಿ ಹೋಗುತ್ತಿದೆ. ವರ್ಷದ ಎಲ್ಲ ದಿನಗಳಲ್ಲೂ ಚಕ್ಕುಲಿ ಲಭ್ಯವಾಗುತ್ತಿದ್ದರೂ, ಗಣೇಶ ಚತುರ್ಥಿಯಂದು ಚಕ್ಕುಲಿ ವಿಶೇಷತೆಯನ್ನು ಪಡೆದುಕೊಂಡು ಎಲ್ಲಾ ಮನೆಗಳಲ್ಲೂ ಕಂಡು ಬರುತ್ತಿದೆ.
ಚಿತ್ರ: ಶ್ರೀಕಾಂತ್ ಕಾಸರಗೋಡು