ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವುದು ಹೇಗೆ?
Team Udayavani, Aug 31, 2019, 7:02 PM IST
ಗಣೇಶ ಚತುರ್ಥಿ ಅಂದರೆ ಮೂರ್ತಿ ಇಲ್ಲದೆ ಸಡಗರವೇ ಇಲ್ಲ, ದೇಶಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ,ಪೂಜಿಸುವ ಸಂಪ್ರದಾಯವಿದೆ. ಆದರೆ ಗಣೇಶ ಮೂರ್ತಿ ವಿಸರ್ಜನೆ ವಿಚಾರದಲ್ಲಿ ದೇಶಾದ್ಯಂತ ಕೆರೆಗಳು, ನದಿಗಳು ಕಲುಷಿತಗೊಳ್ಳುತ್ತಲೇ ಇವೆ, ಅಬ್ಬರದ ಸಂಗೀತ ಇತ್ಯಾದಿಗಳಿಂದ ಶಬ್ದಮಾಲಿನ್ಯವೂ ಆಗುತ್ತಿದೆ. ವರ್ಷವೂ ಈ ಬಗ್ಗೆ ಜಾಗೃತಿ ಮೂಡಿಸುವ ಯತ್ನವಾಗುತ್ತಿದ್ದರೂ, ಮೂರ್ತಿ ತಯಾರಿಕೆಗೆ ಬಳಕೆಯಾಗುವ ವಿಷಕಾರಿ ರಾಸಾಯನಿಕಗಳು ಪರಿಸರವನ್ನು ಸೇರುತ್ತಲೇ ಇವೆ. ಪೂರ್ಣ ಮಣ್ಣಿಂದಲೇ ಮಾಡಿದ, ಹಾನಿಕರ ರಾಸಾಯನಿಕಗಳಿಲ್ಲದ ಗಣೇಶನನ್ನು ಪೂಜಿಸುವುದು ಇಂದಿನ ತುರ್ತು ಅಗತ್ಯ. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವುದು ಹೇಗೆ? ಗಣೇಶ ಮೂರ್ತಿಯಿಂದ ಪರಿಸರಕ್ಕೇನು ಅಪಾಯ ಇತ್ಯಾದಿಗಳ ಬಗ್ಗೆ ವಿವರಗಳು ಇಲ್ಲಿವೆ.
ಗಣೇಶ ವಿಸರ್ಜನೆ ಎಚ್ಚರ..
ಗಣೇಶನನ್ನು ಪೂಜಿಸಿ, ನೀರಿಗೆ ವಿಸರ್ಜನೆ ಮಾಡಬೇಕು ಎಂದಷ್ಟೇ ಗೊತ್ತಿರುತ್ತದೆ. ಆದರೆ ಹೀಗೆ ಮಾಡುವುದರಿಂದ ನೀರು ಕಲುಷಿತವಾಗುತ್ತದೆ. ನೀರಿನ ಮೂಲಕ್ಕೂ ಧಕ್ಕೆಯಾಗುತ್ತದೆ. ನೀರಿನಲ್ಲಿನ ಜೀವಿಗಳಿಗೂ ಹಾನಿಯಾಗುತ್ತದೆ. ಕುಡಿವ ನೀರಿನ ಮೂಲವಾದರೆ, ಮನುಷ್ಯರಿಗೂ, ಪಶುಗಳಿಗೂ ಕಂಟಕವಾಗುತ್ತದೆ. ಆದ್ದರಿಂದ ಪ್ರತ್ಯೇಕ ತೊಟ್ಟಿ ಅಥವಾ ಸೂಚಿತ ಕೆರೆಗಳಲ್ಲೇ ಗಣೇಶ ವಿಸರ್ಜನೆ ಒಳ್ಳೆಯದು.
ವಿದ್ಯುತ್ ಮಿತವಾಗಿ ಬಳಸಿ:
ಗಣೇಶನ ಪೆಂಡಾಲ್ಗೆ ಝಗಮಗಿಸುವ ದೀಪ, ಟ್ಯೂಬ್ಲೈಟ್, ಅಲಂಕಾರಿಕ ಬಲ್ಬ್ ಗಳನ್ನು ಜೋಡಿಸಲಾಗುತ್ತದೆ. ಇದರಿಂದ ವ್ಯಾಪಕವಾಗಿ ವಿದ್ಯುತ್ ವೆಚ್ಚವಾಗುತ್ತದೆ. ವಿದ್ಯುತ್ ಅಮೂಲ್ಯ ಸಂಪನ್ಮೂಲವಾದ್ದರಿಂದ ಹೆಚ್ಚು ಆಡಂಬರ ಮಾಡ ದೇ ಮಿತವ್ಯಯ ಸಾಧಿಸುವುದು ಉತ್ತಮ.
ಪ್ಲಾಸ್ಟಿಕ್ ಬಳಕೆ ಬೇಡ:
ಗಣೇಶನ ಪೂಜೆಗೆ ಬರುವವರು ಹಣ್ಣುಕಾಯಿ, ಪ್ರಸಾದ ಎಂದು ರಾಶಿ ರಾಶಿ ಪ್ಲಾಸ್ಟಿಕ್ ತಂದು ಸುರಿಯುತ್ತಾರೆ. ಪರಿಣಾಮ ಸಾರ್ವಜನಿಕ ಗಣೇಶ ಪೆಂಡಾಲ್ ಪಕ್ಕವೇ ಪ್ಲಾಸ್ಟಿಕ್ ರಾಶಿ ಸೃಷ್ಟಿಯಾಗುತ್ತದೆ. ಪ್ಲಾಸ್ಟಿಕ್ ಬ್ಯಾಗ್ಗಳ ಬದಲಿಗೆ ಬಟ್ಟೆಯ ಬ್ಯಾಗ್,ಕೈಚೀಲಗಳನ್ನು ಉಪಯೋಗಿಸಿ. ಇದರೊಂದಿಗೆ ಹೂವು, ಬಣ್ಣದ ಕಾಗದ, ಅಲಂಕಾರಿಗಳನ್ನು ಕಂಡಕಂಡಲ್ಲಿ ಎಸೆದು ಮಾಲಿನ್ಯ, ಸೌಂದರ್ಯ ಹಾನಿ ಮಾಡುವ ಬದಲು ಶುಚಿತ್ವಕ್ಕೆ ಆದ್ಯತೆ ಉತ್ತಮ.
ಶಬ್ದಮಾಲಿನ್ಯ ಬೇಡ:
ಚೌತಿ ಅಂದರೆ ಸಂಭ್ರಮವೇನೋ ಹೌದು. ಆದರೆ ಕಿವಿ ತಮಟೆ ಹರಿದುಹೋಗುವಂತೆ ಲೌಡ್ಸ್ಪೀಕರ್, ಹಾಕುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ವೃದಟಛಿರಿಗೆ, ಪುಟಾಣಿಗಳಿಗೆ, ವಿವಿಧ ಕಾಯಿಲೆ ಕಸಾಲೆ ಇದ್ದವರಿಗೆ ಕಷ್ಟ ಇನ್ನು ಜೀವಿಗಳ ಪಾಡು ಸಂಕಷ್ಟ. ಆದ್ದರಿಂದ ಸ್ಪೀಕರ್ ಬೇಡ. ಒಂದು ವೇಳೆ ಇದ್ದರೂ ಕಿರಿಕಿರಿಯಾಗದಂತೆ, ರಾತ್ರಿ 8ರೊಳಗೆ ಮುಕ್ತಾಯಗೊಳಿಸುವುದು ಎಲ್ಲರಿಗೂ ಉತ್ತಮ.
ಗಣೇಶ ಮೂರ್ತಿ ಅಷ್ಟೊಂದು ವಿಷಕಾರಿಯೇ? ಮಣ್ಣು ಮತ್ತು ಪರಿಸರ ಸ್ನೇಹಿ ಬಣ್ಣ ಗಳಿಂದ ಮಾಡಿದ ಮೂರ್ತಿಯ ಹೊರತಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್, ಥರ್ಮಕೋಲ್, ರಾಸಾಯನಿಕ ಬಳಿದ ಮೂರ್ತಿಗಳು, ಅಂಟು ವಸ್ತುಗಳಿಂದ ಮಾಡಿದ, ಪ್ಲಾಸ್ಟಿಕ್ನಿಂದ ಮಾಡಿದ ಮೂರ್ತಿಗಳೆಲ್ಲವೂ ತೀವ್ರ ಹಾನಿಕರ ಮತ್ತು ವಿಷಕಾರಿ. ಕಾರಣ ಇವುಗಳು ನೀರಲ್ಲಿ ಕರಗುವುದಿಲ್ಲಲ. ಸಂಯೋಜಿತ ಬಣ್ಣಗಳಲ್ಲಿ ಅಪಾಯಕಾರಿ ಭಾರ ಲೋಹಗಳಾದ ಸತು, ಕ್ರೋಮಿಯಂ, ಸೀಸ, ನಿಕಲ್, ಕ್ಯಾಡ್ಮಿಯಂ ಸತು ಇತ್ಯಾದಿಗಳಿರುತ್ತವೆ. ಇವುಗಳು ಮನುಷ್ಯರು, ಪ್ರಾಣಿ, ಸಸ್ಯಗಳಿಗೆ ತೀವ್ರ ಹಾನಿಕರ. ಇನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ಕ್ಯಾನ್ಸರ್ ಕಾರ ಅಸ್ಬೆಸ್ಟಾಸ್ ಇರುತ್ತದೆ. ಇದಕ್ಕೆ ಬಳಿಯುವ ಆಯಿಲ್ ಪೈಂಟ್ಗಳಲ್ಲೂ ರಾಸಾಯನಿಕಗಳಿದ್ದು, ಗಣಪತಿ ವಿಸರ್ಜನೆ ಮಾಡಿದ ಕರೆ, ನದಿ ನೀರನ್ನು ಬಳಸುವುದರಿಂದ ಆರೋಗ್ಯದ ಮೇಲೆ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಣಾಮ ಬೀರಬಹುದು!
ಪರಿಸರ ಸ್ನೇಹಿ ಹಬ್ಬ ಹೇಗೆ?: ಪರಿಸರ ಸ್ನೇಹಿ ಮೂರ್ತಿ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಮುಖ್ಯವಾಗಿ ಮೂರ್ತಿ ಆಯ್ಕೆಯೂ ಮಹತ್ವದ್ದು. ಮಣ್ಣಿನ ಮೂರ್ತಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು. ಹಾನಿಕಾರಕ ರಾಸಾಯನಿಕ, ಪೈಂಟ್ಗಳನ್ನುಬಳಸದೇ, ಪ್ಲಾಸ್ಟರ್ ಆಫ್ ಪ್ಯಾರಿಸ್, ಥರ್ಮಾಕೋಲ್, ಪ್ಲಾಸ್ಟಿಕ್ ಇತ್ಯಾದಿಗಳಿಂದ ಮಾಡಿದ ಗಣೇಶನನ್ನು ಬಳಸಲೇ ಬಾರದು. ಇದರೊಂದಿಗೆ ರಂಗೋಲಿ, ಕುಂಕುಮ ಇತ್ಯಾದಿ ರಾಸಾಯನಿಕಗಳಿಂದ ಮಾಡಿದ ಉತ್ಪನ್ನಗಳನ್ನು ಬಳಸದೇ ಆದಷ್ಟೂ, ಸಸ್ಯ ಜನ್ಯ ವಸ್ತುಗಳಿಂದ ಮಾಡಿದ ವಸ್ತುಗಳನ್ನು ಬಳಸಬೇಕು.