ವರ್ಣ ಕುಟೀರ: ಪರಿಸ್ನೇಹಿ ಗಣಪನ ಕಲಾಕೃತಿ ಪ್ರದರ್ಶನ
Team Udayavani, Sep 2, 2019, 4:22 AM IST
ನಗರ : ಗಣೇಶ ಚೌತಿ ಹಬ್ಬ ಹತ್ತಿರ ಬರುತ್ತಿದ್ದಂತೆ ಪರಿಸರ ಸ್ನೇಹಿ ಗಣಪತಿ ಪೂಜೆಯ ಜಾಗೃತಿ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ. ಗಣೇಶನ ಹಬ್ಬದಲ್ಲಿ ಎಲೆಕ್ಟ್ರಾನಿಕ್ಸ್, ಚಾಕ್ಪೀಸ್ ಮೊದಲಾದ ಪರಿಸರ ಸ್ನೇಹಿ ಗಣಪನ್ನು ಬಹು ಆಯಾಮದ ಕಲ್ಪನೆಯಲ್ಲಿ ಮೂಡಿಸಿ ರವಿವಾರ ಕೆ.ಪಿ. ಕಾಂಪ್ಲೆಕ್ಸ್ನ ಕೊಠಡಿಯೊಂದರಲ್ಲಿ ಸಾರ್ವಜನಿಕರಿಗಾಗಿ ಪ್ರದರ್ಶಿಸಲಾಯಿತು.
ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ವತಿಯಿಂದ ಏಕ ವ್ಯಕ್ತಿ ಕರ -ಕುಶಲ ಪ್ರದರ್ಶನದಲ್ಲಿ ವಿವಿಧ ಮಾದರಿಯ ಗಣಪತಿ ಕಲಾಕೃತಿಗಳು ಶಿಕ್ಷಣ ಸಂಸ್ಥೆಯ ಪ್ರವೀಣ್ ವರ್ಣಕುಟೀರ ಅವರಿಂದ ಪ್ರದರ್ಶನಗೊಂಡಿತು.
ಫೋಮ್ ಶೀಟ್, ನೂಲು, ಬೆಂಕಿಕಡ್ಡಿ, ಬಿದಿರು, ಅಕ್ಕಿಕಾಳು, ಐಸ್ಕ್ಯಾಂಡಿ ಕಡ್ಡಿ, ಚಾಕ್ಪೀಸ್, ಪೆನ್ಸಿಲ್, ಪೆನ್ ರಿಫೀಲ್, ವೆಲ್ಡ್ಮೆಶ್, ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳಾದ ಕಂಡೆನ್ಸರ್, ಕೆಪಾಸಿಟ್, ಐಸಿ, ಅಲ್ಯೂಮಿನಿಯಂ ಪ್ಲೇಟ್ ಹೀಗೆ ಹತ್ತು ಹಲವು ವಸ್ತುಗಳಿಂದ ತಯಾರಿಸಿದ ವಿವಿಧ ಭಂಗಿಯ ಗಣಪನ ಕಲಾಕೃತಿಗಳು ಗಮನ ಸೆಳೆದವು.
ಹದಿನಾಲ್ಕು ವರ್ಷಗಳಿಂದ ತನ್ನ ಕಲ್ಪನೆಗೆ ಹೊಳೆದ ವಿವಿಧ ವಸ್ತುಗಳಿಂದ ಗಣಪನ ಕಲಾಕೃತಿ ರಚನೆಯಲ್ಲಿ ಪ್ರವೀಣ್ ಅವರು ತೊಡಗಿಸಿಕೊಂಡಿದ್ದಾರೆ. ಈ ಬಾರಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳಿಂದ ಗಣಪತಿ ರಚಿಸಿರುವುದು ವಿಶೇಷತೆಯಾಗಿದೆ.