ರಾಜ್ಯ ಶಾಲಾ ಕಲೋತ್ಸವಕ್ಕೆ ಅದ್ದೂರಿ ಚಾಲನೆ
Team Udayavani, Nov 29, 2019, 5:49 AM IST
ಕಾಸರಗೋಡು: ಇಡೀ ರಾಜ್ಯದ ಪ್ರತಿಭಾವಂತ ಮಕ್ಕಳು ಒಂದೇ ಛಾವಣಿ ಯಡಿ ಸೇರಿ ಪ್ರತಿಭಾ ಪ್ರದರ್ಶನ ನಡೆಸುವ ವೇದಿಕೆ ಜಿಲ್ಲೆಯಲ್ಲಿ ತೆರೆದುಕೊಂಡಿತು. ರಾಜ್ಯ ಮಟ್ಟದ ಶಾಲಾ ಕಲೋತ್ಸವ ಈ ಮೂಲಕ ನ.28 ಆರಂಭಗೊಂಡಿತು.
ಏಷ್ಯಾದಲ್ಲೇ ಅತೀ ದೊಡ್ಡ ಮಕ್ಕಳ ಕಲೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವಕ್ಕೆ ವಿವಿಧ ಭಾಷೆಗಳ ಸಂಗಮ ಭೂಮಿಯಾದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ನ ಐಂಗೋತ್ನಲ್ಲಿ ಬೆಳಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಜೀವನ್ ಬಾಬು ಧ್ವಜಾರೋಹಣಗೈದರು. ಒಟ್ಟು ನಾಲ್ಕು ದಿನಗಳು ನಡೆಯುವ ಉತ್ಸವದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ರಾಜ್ಯ ವಿಧಾನಸಭೆ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಕಲೋತ್ಸವಕ್ಕೆ ಚಾಲನೆ ನೀಡಿದರು.
ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದರು. ಬಂದರು ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಮುಖ್ಯ ಅತಿಥಿಯಾಗಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ರಾದ ಕೆ. ಕುಂಞಿರಾಮನ್, ಎನ್.ಎ. ನೆಲ್ಲಿಕುನ್ನು, ಎಂ. ರಾಜಗೋಪಾಲನ್, ಎಂ.ಸಿ. ಕಮರುದ್ದೀನ್, ಜಿಲ್ಲಾ ಪಂಚಾ ಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್, ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ವಿವಿಧ ನಗರಸಭೆ ಅಧ್ಯಕ್ಷರಾದ ವಿ.ವಿ. ರಮೇಶನ್, ಬಿಫಾತಿಮಾ ಇಬ್ರಾಹಿಂ, ಪ್ರೊ| ಕೆ.ಪಿ.ಜಯರಾಜನ್, ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಪಿ.ಗೌರಿ, ವಿ.ಪಿ. ಜಾನಕಿ, ಪಿ.ರಾಜನ್, ಸಿ.ಎಚ್.ಮಹಮ್ಮದ್ ಕುಂಞಿ ಚಾಯಿಂಡಡಿ, ಓಮನಾ ರಾಮಚಂದ್ರನ್, ಕೆ.ಎನ್.ಅಶ್ರಫ್, ಎಸ್.ಸಿ.ಆರ್.ಡಿ. ನಿರ್ದೇ ಶಕ ಡಾ| ಎ.ಪ್ರಸಾದ್, ಸಮಗ್ರ ಶಿಕ್ಷಣ ಕೇರಳ ನಿರ್ದೇಶಕ ಎ.ಪಿ.ಕುಟ್ಟಿಕೃಷ್ಣನ್, ಕೈಟ್ ಸಿ.ಇ.ಒ.ಅನ್ವರ್ ಸಾದತ್, ಸಿಮ್ಯಾಟ್ ನಿರ್ದೇಶಕ ಡಾ.ಎಂ.ಎ.ಲಾಲ್, ಎಸ್. ಐ.ಇ.ಟಿ. ನಿರ್ದೇಶಕ ಬಿ.ಬಾಬುರಾಜ್, ಜನಪ್ರತಿನಿಧಿಗಳು ಮೊದಲಾದವರು ಉಪ ಸ್ಥಿತರಿದ್ದರು. ಮಲೆಯಾಳ ಸಿನಿಮಾನಟ ಜಯಸೂರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗಮನ ಸೆಳೆದರು.ಸಂಗೀತ ರತ್ನ ಕಾಂಞಂಗಾಡ್ ರಾಮ ಚಂದ್ರನ್ ನೇತೃತ್ವದಲ್ಲಿ ಮಣಿಕಂಠದಾಸ್ ರಚಿಸಿದ ಸ್ವಾಗತ ಹಾಡು ನೃತ್ಯ ನಡೆಯಿತು.
60 ನೇ ರಾಜ್ಯ ಶಾಲಾ ಕಲೋತ್ಸವದ ಅಂಗವಾಗಿ 60 ಮಂದಿ ಅಧ್ಯಾಪಕರು ಮತ್ತು ಅಧ್ಯಾಪಿಕೆಯರು ಸೇರಿ ಸ್ವಾಗತ ಹಾಡನ್ನು ಆಲಾಪಿಸಿದರು.
ಡಿ.1ರಂದು ಸಂಜೆ ನಡೆಯುವ ಸಮಾ ರೋಪ ಸಮಾರಂಭವನ್ನು ಪ್ರತಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ ಉದ್ಘಾಟಿಸುವರು. ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ವಿಜೇತರಿಗೆ ಬಹುಮಾನ ವಿತರಿಸಿ, ಕಲೋತ್ಸವದ ಕರಡು ದಾಖಲೆಗಳನ್ನು ಬಿಡುಗಡೆಗೊಳಿಸುವರು.
ಇಡೀ ರಾಜ್ಯದಿಂದ 13 ಸಾವಿರಕ್ಕೂ ಅ ಧಿಕ ಪ್ರತಿಭೆಗಳಿಂದ 28 ವೇದಿಕೆಗಳಲ್ಲಿ ಕಲಾಪ್ರಸ್ತುತಿಗಳು ನಡೆಯಲಿವೆ. “ಸಾಬರ್ಮತಿ’ ಎಂಬ ನಾಮಧೇಯದಲ್ಲಿ ಬೃಹತ್ ಭೋಜನಾಲಯ ಸಿದ್ಧಗೊಳಿಸಲಾಗಿದೆ.
ಕಲೋತ್ಸವ ಸಂಬಂಧ ಲೋವರ್ ಅಪೀಲು ಸಮಿತಿ ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಹೈಯರ್ ಅಪೀಲು ಸಮಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಜೀವನ್ ಬಾಬು ಅವರ ನೇತೃತ್ವದಲ್ಲಿ ಲಿಟಲ್ ಪ್ಲವರ್ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಚಟುವಟಿಕೆ ನಡೆಸಲಿವೆ.
ಜಾರಿಯಲ್ಲಿ ಡಿಡಿಇ ಗಳು 280 ಅಪೀಲ್ ಮಂಜೂರು ಮಾಡಿದ್ದಾರೆ. ಕಲೋತ್ಸವದ ತೀರ್ಪುಗಾರರ ಚಟುವಟಿಕೆಗಳು ವಿಜಿಲೆನ್ಸ್ ದಳದ ನಿಗಾದಲ್ಲಿರುವುವು.
ಈ ಕಲಾಮೇಳದಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೂ ಟ್ರಾಫಿಗಳನ್ನು ವಿತರಿಸಲಾಗುವುದು. ಶಿಸ್ತು ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ. ಎಕ್ಸಿಬಿಷನ್ ಸಹಿತ 30 ವೇದಿಕೆಗಳು ಕಲೋತ್ಸವ ಸಂಬಂಧ ಸಿದ್ಧವಾಗಿವೆ. ಪ್ಲಸ್-ಟು ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಕೆರಿಯರ್ ಎಕ್ಸ್ಪೋ “ದಿಶ’ ಬಲ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
239 ವಿಭಾಗ
ಒಟ್ಟು 28 ವೇದಿಕೆಗಳಲ್ಲಿ 239 ವಿಭಾಗದ ಸ್ಪರ್ಧೆಗಳು ನಡೆಯಲಿದೆ. ಹತ್ತು ಸಾವಿರದಷ್ಟು ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ.
ಹೈಸ್ಕೂಲ್ ವಿಭಾಗದಲ್ಲಿ 96, ಹೈಯರ್ ಸೆಕೆಂಡರಿ ವಿಭಾಗದಲ್ಲಿ 105, ಸಂಸ್ಕೃತ, ಅರೆಬಿಕ್ ವಿಭಾಗಗಳಲ್ಲಿ ತಲಾ 19 ಎಂಬಂತೆ ಸ್ಪರ್ಧೆಗಳು ನಡೆಯಲಿವೆ. 717 ತೀರ್ಪುಗಾರರಿದ್ದು, 200 ಮಂದಿಯನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ.
ತೆಂಗಿನ ಗರಿಯ
ಡಸ್ಟ್ಬಿನ್ ಹಸ್ತಾಂತರ
ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಅಂಗವಾಗಿ ವೇದಿಕೆ ಹಾಗು ಪರಿಸರದ ತ್ಯಾಜ್ಯ ಸಂಗ್ರಹಿಸಲು ಹರಿತ ಕೇರಳಂ ಮಿಷನ್ನ ನೇತೃತ್ವದಲ್ಲಿ ತೆಂಗಿನ ಗರಿಯಿಂದ ತಯಾರಿಸಿದ ಡಸ್ಟ್ಬಿನ್ ಬಳಸಲಾಗುತ್ತಿದೆ.
ತೆಂಗಿನ ಗರಿಯ ಡಸ್ಟ್ಬಿನ್ ಅನ್ನು ಮಡಿಕೈ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಅವರು ಕಾಂಞಂಗಾಡ್ ಸಬ್ ಕಲೆಕ್ಟರ್ ಅರುಣ್ ಕೆ.ವಿಜಯನ್ ಅವರಿಗೆ ಹಸ್ತಾಂತರಿಸಿದರು. 300 ಡಸ್ಟ್ಬಿನ್ಗಳನ್ನು ತಯಾರಿಸಲಾಗಿದೆ. ಮಡಿಕೈ ಉಪಾಧ್ಯಕ್ಷೆ ಕೆ.ಪ್ರಮೀಳಾ, ಹರಿತ ಕೇರಳಂ ಮಿಷನ್ ಜಿಲ್ಲಾ ಕೋ-ಆರ್ಡಿನೇಟರ್ ಎಂ.ಪಿ.ಸುಬ್ರಹ್ಮಣ್ಯನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಅಬ್ದು ರಹಿಮಾನ್, ಶಶೀಂದ್ರನ್ ಕೃಷಿಕರು ಭಾಗವಹಿಸಿದ್ದರು.
ಶಾಲೆಗೆ ರಜೆ
ನ.29 ರಂದು ಕಾಸರಗೋಡು ಜಿಲ್ಲೆಯ ಎಲ್ಲ ಶಿಕ್ಷಣಾಲಯಗಳಿಗೆ ರಜೆ ಸಾರಲಾಗಿದೆ. ಈ ರಜೆ ದಿನಗಳಲ್ಲಿ ಹೈಯರ್ ಸೆಕೆಂಡರಿ ಶಿಕ್ಷಕರು ದಿಶ ಕೆರಿಯರ್ ಎಕ್ಸ್ ಪೋಗೆ ಸಹಕಾರ ನೀಡಬೇಕು ಎಂದು ತಿಳಿಸಲಾಗಿದೆ.
“ಹಲೋ ಕಲೋತ್ಸವಂ’
ರಾಜ್ಯ ಮಟ್ಟದ ಶಾಲಾ ಕಲೋತ್ಸವ ಅಂಗವಾಗಿ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಮಂದಿಗೆ ಮಾರ್ಗದರ್ಶಕ ಕೈ ಹೊತ್ತಗೆ “ಹಲೋ ಕಲೋತ್ಸವಂ’ ಪೂರಕವಾಗಲಿದೆ.
ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆ ಕಚೇರಿ ವತಿಯಿಂದ ಈ ಕೈ ಹೊತ್ತಗೆ ಪ್ರಕಟಿಸಲಾಗಿದೆ. ವೇದಿಕೆಯ ಹೆಸರುಗಳು, ತಲಪುವ ದಾರಿಗಳು, ಕಲೋತ್ಸವದ ವಿವಿಧ ಸಮಿತಿಗಳ ಸಂಪರ್ಕ ನಂಬ್ರಗಳು, ವಸತಿ ಸೌಲಭ್ಯಗಳು, ಪ್ರಧಾನ ಪ್ರವಾಸಿ ತಾಣಗಳು ಇತ್ಯಾದಿ ಮಾಹಿತಿಯನ್ನು ಈ ಹೊತ್ತಗೆ ಹೊಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ. ಜೀವನ್ ಬಾಬು ಅವರು ಈ ಹೊತ್ತಗೆಯ ಬಿಡುಗಡೆಗೊಳಿಸಿದರು.
ಸಿದ್ಧವಾಗಿದೆ
ಜಿಲ್ಲಾ ವಾರ್ತಾ ಇಲಾಖೆಯ ಸ್ಟಾಲ್ ಕಲೋತ್ಸವ ಸ್ಪರ್ಧೆಗಳ ಬಿರುಸಿನ ನಡುವೆ ಕೊಂಚ ಮಧ್ಯಂತರ ಬಯಸುವವರಿಗಾಗಿ ಅಲಾಮಿ ಪಳ್ಳಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ವಾರ್ತಾ ಇಲಾಖೆ ಕಚೇರಿ ವತಿಯಿಂದ ಎಕ್ಸಿಬಿಷನ್ ಸ್ಟಾಲ್ ಸಿದ್ಧವಾಗಿದೆ.ರಾಜ್ಯ ಸರಕಾರದ ವಿವಿಧ ಸಂಸ್ಥೆಗಳು, ಅಭಿವೃದ್ಧಿ ಇತ್ಯಾದಿಗಳ ಮಾಹಿತಿ ಇಲ್ಲಿ ಲಭಿಸಲಿದೆ.
ಜೊತೆಗೆ ಆಸಕ್ತರಿಗಾಗಿ ರಸಪ್ರಶ್ನೆ, ವಿಜೇತರಿಗೆ ಆಕರ್ಷಕ ಬಹುಮಾನ ಇಲ್ಲಿದೆ. ರಾಜ್ಯ ಶಾಲಾ ಕಲೋತ್ಸವ ಅಂಗವಾಗಿ ಈ ಸ್ಟಾಲ್ ಇಲ್ಲಿ ಚಟುವಟಿಕೆ ನಡೆಸಲಿದ್ದು, ಡಿ.1 ವರೆಗೆ ಇರುವುದು.