“ಬದಲಾದ ಜೀವನ ಶೈಲಿ ಬದುಕಿನ ಅಸಮತೋಲನಕ್ಕೆ ಕಾರಣ’
Team Udayavani, Jul 24, 2017, 7:00 AM IST
ಬದಿಯಡ್ಕ: ಭೌಗೋಳಿಕ ಋತುಮಾನಗಳಿಗೆ ಅನುಗುಣವಾಗಿ ಜೀವನ ಶೈಲಿ ರೂಪಿಸುವ ಪರಿಪಾಠ ಇಂದು ಮರೆಯಾಗಿರುವುದು ಅಸಮತೋಲನ ಬದುಕಿಗೆ ಕಾರಣವಾಗಿದೆ. ಹೊಸ ತಲೆಮಾರಿಗೆ ಇದನ್ನು ಪರಿಚಯಿಸುವ ಕ್ರಿಯಾತ್ಮಕ ಕಾರ್ಯಕ್ರಮಗಳ ಚೌಕಟ್ಟು ಅಗತ್ಯವಿದೆ ಎಂದು ಪೆರಡಾಲ ಶಾಲಾ ಶಿಕ್ಷಕ ಕೇಶವ ಭಟ್ ಚಾಲ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಆಷಾಢ ಅಮಾವಾಸ್ಯೆ(ಆಟಿ ಅಮಾಸೆ) ಯ ಅಂಗವಾಗಿ ರವಿವಾರ ಬದಿಯಡ್ಕದ ಶ್ರೀನಿಧಿ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ಐದನೇ ವರ್ಷದ ಆಟಿ ಹಾಲು (ಹಾಲೆ ಮರದ ಕಷಾಯ) ವಿತರಣೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಆಷಾಢದ ಅಮಾವಾಸ್ಯೆಯ ಹಾಲೆ ಕಷಾಯ ಸೇವಿಸುವ ಪದ್ಧತಿಯು ವೈಜ್ಞಾನಿಕವಾಗಿ ಸಮರ್ಪಕ ಆರೋಗ್ಯ ನಿರ್ವ
ಹಣೆಯ ದೃಷ್ಟಿಯಿಂದ ಅಗತ್ಯವಿದ್ದು, ಇಂದಿನ ಯುವ ತಲೆಮಾರಿಗೆ ಇದರ ಮಹತ್ವದ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದ ಅವರು, ಪಾರಂಪರಿಕ ಮತ್ತು ಆಯುರ್ವೇದೀಯ ಚಿಕಿತ್ಸೆಗಳು ದೇಹಸ್ನೇಹಿಯಾಗಿ ಅಡ್ಡಪರಿಣಾಮಗಳಿಲ್ಲದೆ ಉತ್ತಮ ಆರೋಗ್ಯ ನಿರ್ವಹಣೆಗೆ ಪೂರಕ ಎಂದು ತಿಳಿಸಿದರು.
ಶ್ರೀನಿಧಿ ಚಿಕಿತ್ಸಾಲಯದ ಡಾ| ಶ್ರೀನಿಧಿ ಸರಳಾಯ ಅವರ ಪುತ್ರಿ ವೈಭವಿ, ಬದಿಯಡ್ಕದ ಹಿರಿಯ ವ್ಯಾಪಾರಿ ಉಮಾನಾಥ ಕಾಮತ್ ಅವರಿಗೆ ಹಾಲೆಮರದ ಕಷಾಯ ಹಸ್ತಾಂತರಿಸಿ ಕಷಾಯ ವಿತರಣೆಗೆ ಚಾಲನೆ ನೀಡಿದರು.
ಬ್ಲಾಕ್ ಪಂಚಾಯತ್ ಸದಸ್ಯ ಅವಿನಾಶ್ ರೈ, ಭಾಸ್ಕರ ಕನಕಪ್ಪಾಡಿ, ಗಂಗಾಧರ ಪಳ್ಳತ್ತಡ್ಕ, ಅಶೋಕ್ ನೀರ್ಚಾಲು, ರಮೇಶ್ ಅಗಲ್ಪಾಡಿ ಉಪಸ್ಥಿತರಿದ್ದರು. ಈ ಸಂದರ್ಭ 300ಕ್ಕಿಂತಲೂ ಮಿಕ್ಕಿದ ಜನರಿಗೆ ಕಷಾಯ ವಿತರಿಸಲಾಯಿತು. ಡಾ| ಶ್ರೀನಿಧಿ ಸರಳಾಯ ನೇತೃತ್ವ ವಹಿಸಿದ್ದರು.