ಚೀಮೇನಿ ಜೈಲಿನಲ್ಲಿ ನೀರಿಲ್ಲ, ಕೈದಿಗಳು ಸಂಕಷ್ಟದಲ್ಲಿ
Team Udayavani, Apr 17, 2019, 6:30 AM IST
ಕಾಸರಗೋಡು: ಜಿಲ್ಲೆಯ ಏಕೈಕ ತೆರೆದ ಬಂದೀಖಾನೆಯಾಗಿರುವ ಚೀಮೇನಿ ಬಂದೀಖಾನೆಯಲ್ಲಿ ಭಾರೀ ನೀರಿನ ಕ್ಷಾಮ ತಲೆದೋರಿದೆ. ಬೇಸಗೆ ಕಾಲದ ಬಿಸಿಲ ಝಳದಿಂದಾಗಿ ಈ ಬಂದೀಖಾನೆ ಆವರಣದಲ್ಲಿರುವ ಬಾವಿ ಮತ್ತು ಕೆರೆಗಳಲ್ಲಿ ನೀರು ಪೂರ್ಣವಾಗಿ ಬತ್ತಿ ಹೋಗಿದೆ.
ಜಲಕ್ಷಾಮ ಪರಿಹರಿಸಲು ಆರಂಭಿಸಲಾದ ಯೋಜನೆಗಳೆಲ್ಲ ಈಗ ವ್ಯರ್ಥಗೊಂಡಿವೆ. ಇದರಿಂದಾಗಿ ಅನ್ಯ ದಾರಿ ಕಾಣದ ಜೈಲು ಅಧಿಕಾರಿಗಳು ರೇಶನ್ ಸಂಪ್ರದಾಯದಲ್ಲಿ ಕೆೈದಿಗಳಿಗೆ ನೀರು ಪೂರೈಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಬೇಸಗೆ ಕಾಲದಲ್ಲಿ ಜೈಲಿನ ಬಾವಿಗಳಲ್ಲಿ ನೀರಿನ ಮಟ್ಟ ಸಹಜವಾಗಿಯೇ ಇಳಿಯುತ್ತದೆ. ಇದನ್ನು ತಡೆಗಟ್ಟಲು ಕಳೆದ ವರ್ಷ ಮಳೆ ನೀರು ಹರಿದು ಹೋಗದಂತೆ ಕಿರು ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವ ಯತ್ನವನ್ನು ನಡೆಸಲಾಗಿತ್ತು. ಆದರೂ ಪ್ರಯೋಜನ ಉಂಟಾಗಿಲ್ಲ. ಜೈಲು ಆವರಣದೊಳಗೆ ಐದು ಬಾವಿಗಳಿದ್ದು ಅವುಗಳಲ್ಲಿ ನೀರು ಬತ್ತಿ ಹೋಗಿದೆ.
ಕಳೆದ ವರ್ಷ ಜೈಲು ಆವರಣದೊಳಗೆ ದೊಡ್ಡ ಕೆರೆ ನಿರ್ಮಿಸಲಾಗಿತ್ತು.
ಅದರಲ್ಲಿ ಈಗ ನೀರು ಬರಿದಾಗಿದೆ. ಕೈದಿಗಳಿಗೆ ಅಗತ್ಯದ ನೀರು ಪೂರೈಸಲು ಈಗ ಕಾಕಡವು ಹೊಳೆಯಿಂದ ಲಾರಿಗಳಲ್ಲಿ ನೀರು ತರಲಾಗುತ್ತಿದೆ. ಈಗ ಕಾಕಡವು ಹೊಳೆಯಲ್ಲಿ ನೀರು ಬರಿದಾಗತೊಡಗಿದೆ. ಇದರಿಂದಾಗಿ ಕೈದಿಗಳಿಗೆ ಮುಂದಿನ ದಿನಗಳಲ್ಲಿ ತೀವ್ರ ನೀರಿನ ಕ್ಷಾಮ ಎದುರಿಸುವ ಸಾಧ್ಯತೆ ಉಂಟಾಗಲಿದೆ. ನೀರು ಸಂಗ್ರಹಕ್ಕಾಗಿ ಎರಡು ವರ್ಷಗಳ ಹಿಂದೆ ಎರಡು ಲಕ್ಷ ರೂ. ವ್ಯಯಿಸಿ ಮಳೆ ನೀರು ದಾಸ್ತಾನು ಕೇಂದ್ರವನ್ನು ನಿರ್ಮಿಸಲಾಗಿತ್ತು. ಈ ಯೋಜನೆಯೂ ಸಫಲವಾಗಿಲ್ಲ.