ಸ್ವಚ್ಛ ಸಮಾಜ ನಿರ್ಮಾಣ : ಗಾಂಧಿ ಆದರ್ಶ ಪಾಲನೆಯಾಗಲಿ
ಗಾಂಧೀಜಿ ವಿಚಾರಧಾರೆ: ವಿವಿಧ ಸ್ಪರ್ಧೆಗಳಿಗೆ ಚಾಲನೆ
Team Udayavani, Sep 26, 2019, 5:49 AM IST
ಮಡಿಕೇರಿ: ಮಹಾತ್ಮಾ ಗಾಂಧೀಜಿಯವರು ತಮ್ಮ ಬದುಕಿನುದ್ದಕ್ಕೂ ಪಾಲಿಸಿದ ಮತ್ತು ಇತರರನ್ನು ಪ್ರೇರೇಪಿಸಿದ್ದ ಸ್ವಚ್ಛತೆಯನ್ನು ಪ್ರತಿ ಮನೆಗಳಲ್ಲಿ, ಗ್ರಾಮಗಳಲ್ಲಿ ಪರಿಪಾಲಿಸಿದಾಗ ಆರೋಗ್ಯಯುತ ಸಮಾಜದೊಂದಿಗೆ ರಾಷ್ಟ್ರದ ಅಭ್ಯುದಯ ಸಾಧ್ಯವಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜ. ಕೆಂಚಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಸರ್ವೋದಯ ಸಮಿತಿಯ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗಾಂಧೀಜಿ ವಿಚಾರಧಾರೆಯ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖಾ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಮಾತನಾಡಿ, ಗಾಂಧೀಜಿಯವರು ತಮ್ಮ ಬದುಕಿನುದ್ದಕ್ಕೂ ಎದುರಾದ ಸಣ್ಣ ಪುಟ್ಟ ವಿಷಯಗಳಲ್ಲೂ ತೋರಿದ ಪ್ರಾಮಾಣಿಕತೆ, ಕರ್ತವ್ಯಬದ್ಧತೆಗಳಿಂದ ಮಹಾತ್ಮರಾಗಿ ರೂಪುಗೊಂಡರಉ ಎಂದು ತಿಳಿಸಿದರು.
ಗಾಂಧೀ ಭವನ ನಿರ್ಮಾಣ
ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಅವರು ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳನ್ನು ಜನ ಸಮೂಹಕ್ಕೆ ತಲುಪಿಸುವುದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ರಾಜ್ಯದ 30 ಜಿಲೆಗಳಲ್ಲಿ ಗಾಂಧೀ ಭವನ ನಿರ್ಮಾಣಕ್ಕೆ ಮುಂದಾಗಿದೆ. ಪ್ರಸ್ತುತ 15 ಜಿಲ್ಲೆಗಳಲ್ಲಿ ಇದರ ಕಾರ್ಯ ಪ್ರಗತಿಯಲ್ಲಿದೆಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್ ಮಡಿಕೇರಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ. ಬೆೇಬಿ ಮ್ಯಾಥು ಮಾತನಾಡಿದರು.
ಲಿಯಾಕತ್ ಆಲಿ ಪ್ರಾರ್ಥಿಸಿ, ವಿಲ್ಫೆಡ್ ಕ್ರಾಸ್ತಾ ಸ್ವಾಗತಿಸಿದರುಪುದಿಯನೆರವನ ರೇವತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಕೋಡಿ ಚಂದ್ರಶೇಖರ್ ವಂದಿಸಿದರು.
ವಿವಿಧ ಸ್ಪರ್ಧೆ
ಗಾಂಧೀಜಿ ವಿಚಾರಧಾರೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಪ್ರಬಂಧ, ಛದ್ಮವೇಷ, ಭಾಷಣ, ಶಿಕ್ಷಕರಿಗೆ ದೇಶಭಕ್ತಿಗೀತೆ ಸ್ಪರ್ಧೆಗಳು ನಡೆದವು.
ಮಹಾತ್ಮರ ಪ್ರತಿಮೆ
ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, 1934 ಫೆ.23ಕ್ಕೆ ಕೊಡಗಿಗೆ ಎರಡು ದಿನಗಳ ಕಾಲ ಭೇಟಿ ನೀಡಿದ್ದ ಮಹಾತ್ಮಾಗಾಂಧೀಜಿಯವರು ಮಡಿಕೇರಿಯಲ್ಲಿ ಸಂದೇಶ ನೀಡಿದ ಸ್ಥಳ ಇಂದಿನ ಗಾಂಧೀ ಮಂಟಪ. ಪ್ರಸ್ತುತ ಅಲ್ಲಿರುವ ಪ್ರತಿಮೆ ಶಿಥಿಲವಾಗಿದ್ದು, ಅಮೃತ ಶಿಲೆಯ ಆಳೆತ್ತರದ ಮಹಾತ್ಮರ ಪ್ರತಿಮೆಯನ್ನು ಸ್ಥಾಪಿಸಲು ಸರ್ವೋದಯ ಸಮಿತಿ ನಿರ್ಧಾರವನ್ನು ಕೈಗೊಂಡು, ಜಿಲ್ಲಾಡಳಿತ ಮತ್ತು ದಾನಿಗಳಿಂದ ನೆರವನ್ನು ಕೋರಿದೆ. ಅಮೃತ ಶಿಲೆಯ ಮಹಾತ್ಮರ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಇದಕ್ಕೆ ಎರಡು ತಿಂಗಳ ಕಾಲಾವಧಿ ಅಗತ್ಯವಿರುವುದಾಗಿ ತಿಳಿಸಿದರು.