ನದಿ ತಟ ಶುಚೀಕರಣ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ
Team Udayavani, Dec 10, 2018, 12:41 PM IST
ಕಾಸರಗೋಡು: ಹರಿತ ಕೇರಳ ಮಿಷನ್ನ ಮೂರನೇ ವರ್ಷಾಚರಣೆಯ ನಾಂದಿ ವಿಶಿಷ್ಟ ರೂಪದಲ್ಲಿ ಜರಗಿತು. ಜಿಲ್ಲೆಯ ಅಳ್ಳಂಗೋಡು ಚಿತ್ತಾರಿ ನದಿ ದಡದಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಶುಚೀಕರಣ ಮೂಲಕ ನದಿಯನ್ನು ಸಂರಕ್ಷಿಸುವ ಕಾಯಕದ ಮೂಲಕ ಸಾರ್ಥಕವಾಗಿ ಈ ವಾರ್ಷಿಕೋತ್ಸವ ಸರಣಿಗೆ ಚಾಲನೆ ಲಭಿಸಿದೆ.
ಜಲ ಕ್ಷಾಮ ಪರಿಹಾರಕ್ಕೆ ಇರುವ ಜಲದೊಂದಿಗೆ ಸಾರ್ಥಕ ಜೀವನ ನಡೆಸುವೆ ಎಂಬ ಸಂದೇಶದೊಂದಿಗೆ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಡಿ.15 ರ ವರೆಗೆ ತಲಾ ಒಂದು ಜಲಾಶಯವನ್ನು ಸಂರಕ್ಷಿಸುವ ಮೂಲಕ ಜಲಸಂರಕ್ಷಣೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು, ಸಾರ್ವಜನಿಕರು ಶ್ರಮದಾನ ನಡೆಸುವ ಮೂಲಕ ಚಿತ್ತಾರಿ ನದಿ ತಟವನ್ನು ಶುಚೀಕರಣಗೊಳಿಸಿದರು. ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು ಮತಭೇದ ಮರೆತು ಈ ಕಾಯಕಕ್ಕೆ ಕೈಜೋಡಿಸಿದರು.
ಈ ಸಂಬಂಧ ನಡೆದ ಸಭೆಯನ್ನು ಕಾಂಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಉದ್ಘಾಟಿಸಿದರು. ಅಜಾನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ದಾಮೋದರನ್ ಅಧ್ಯಕ್ಷತೆ ವಹಿಸಿದರು. ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್, ವಿವಿಧ ವಲಯಗಳ ಪ್ರತಿನಿಧಿಗಳಾದ ಕುನ್ನತ್ ಕರುಣಾಕರನ್, ಚೇರಾಕುಂಡ್ ಕುಂಞಿಕೃಷ್ಣನ್, ಎಂ.ಕುಂಞಂಬು, ಬಿ.ಬಾಲಕೃಷ್ಣನ್, ವಿ.ಕುಂಞಿರಾಮನ್ ಮಾಸ್ತರ್, ಕೆ.ನಾರಾಯಣನ್, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ಅಶೋಕ್ ಕುಮಾರ್ ವಿ.ಪಿ. ಪರಿಸರ ಇಲಾಖೆ ಅಧಿಕಾರಿ ಪಿ.ಮುರಳಿ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ಹರಿತ ಕೇರಳ ಜಿಲ್ಲಾ ಮಿಷನ್ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಸ್ವಾಗತಿಸಿದರು. ಸುರೇಶ್ ಕಸ್ತೂರಿ ವಂದಿಸಿದರು.