ಕಾಸರಗೋಡು: ಅಪಾಯ ಸ್ಥಳಗಳ ಮಂದಿ ಸ್ಥಳಾಂತರಗೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ
Team Udayavani, Aug 9, 2019, 4:15 PM IST
ಬದಿಯಡ್ಕ: ಬಿರುಸಿನ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಬಳಾಲ್,ಕೋಡೋಂ ಬೇಳೂರು, ಈಸ್ಟ್ ಏಳೇರಿ, ವೆಸ್ಟ್ ಏಳೇರಿ ಗ್ರಾಮಪಂಚಾಯತ್ ತಪ್ಪಲು ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಸೋಮವಾರದ (ಆ.12) ವರೆಗೆ ಸುರಕ್ಷಿತ ಜಾಗಗಳಲ್ಲಿ ಸ್ಥಳಾಂತರಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಬಂಡೆಕಲ್ಲು ಉರುಳಿ ಬೀಳುವ, ಗುಡ್ಡದ ಮಣ್ಣು ಕುಸಿಯುವ ಪ್ರದೇಶಗಳ ಮಂದಿಯೂ ಜಾಗರೂಕರಾಗಿರುವಂತೆ ಅವರು ಸಲಹೆ ನೀಡಿದ್ದಾರೆ. ಈ ಪ್ರದೇಶಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹೊಣೆ ನೀಡಲಾಗಿದೆ. ಸಾರ್ವಜನಿಕರು ಅಧ್ಯಕ್ಷರು ನೀಡುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಹೇಳಿದರು.
ಅನುಭವ ಇಲ್ಲದವರು ರಕ್ಷಣಾ ಕಾರ್ಯದಲ್ಲಿ ತೊಡಗುವುದು ಅಪಾಯ
ಬಿರುಸಿನ ಮಳೆಯಿಂದ ಹಾನಿಯುಂಟಾಗುತ್ತಿರುವ ಪ್ರದೇಶಗಳಲ್ಲಿ ಸಾರ್ವಜನಿಕರು ರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿರುವುದು ಅಭಿನಂದನಾರ್ಹ ವಿಚಾರ. ಆದರೆ ಈ ಬಗ್ಗೆ ಯಾವುದೇ ತರಬೇತಿಯಿಲ್ಲದ, ಕಾಯಕದಲ್ಲಿ ಅನುಭವವಿಲ್ಲದ ಮಂದಿ ರಕ್ಷಣಾಕಾರ್ಯದಲ್ಲಿ ತೊಡಗುವುದು ಅಪಾಯಕಾರಿ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು
ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸ್ವಯಂಸೇವಾ ಚಟುವಟಿಕೆಗಳಲ್ಲಿ ನಿರತರಾದವರು ಮತ್ತು ಜನಪ್ರತಿನಿಧಿಗಳು ಗಮನಹರಿಸುವಂತೆ ಅವರು ಸಲಹೆಮಾಡಿದ್ದಾರೆ.