ಕೋಮು ಶಕ್ತಿಗಳಿಂದ ಮುಕ್ತಿಗೊಳಿಸಿ: ಚಂದ್ರಶೇಖರನ್
Team Udayavani, Jul 14, 2019, 5:30 AM IST
ಕುಂಬಳೆ: ಮುಂದಿನ ದಿನದಲ್ಲಿ ನಡೆಯಲಿರುವ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೋಮು ಶಕ್ತಿಗಳ ಕರಾಳ ಬಾಹುಗಳಿಂದ ಮಂಜೇಶ್ವರ ಮಂಡಲವನ್ನು ವಿಮೋಚನೆಗೊಳಿಸುವ ದೃಢ ಪ್ರತಿಜ್ಞೆಯನ್ನು ಎಲ್.ಡಿ.ಎಫ್ ಕಾರ್ಯಕರ್ತರು ಕೈಗೊಳ್ಳಬೇಕೆಂದು ಸಿ.ಪಿ.ಐ ರಾಷ್ಟ್ರೀಯ ಮಂಡಳಿ ಸದಸ್ಯ ಹಾಗೂ ರಾಜ್ಯಕಂದಾಯ ಸಚಿವ ಇ. ಚಂದ್ರಶೇಖರನ್ ಕರೆ ನೀಡಿದರು.
ಹೊಸಂಗಡಿ ಎ.ಕೆ.ಜಿ ಮಂದಿರದಲ್ಲಿ ಜರಗಿದ ಎಲ್.ಡಿ.ಎಫ್ ಮಂಡಲ ನೇತಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದ ಪ್ರಮುಖರಾದ ಎಂ.ರಾಮಪ್ಪ, ಡಾ. ಸುಬ್ಬರಾವ್, ಸಿ.ಎಚ್ ಕುಂಞಂಬು ಮೊದಲಾದ ಎಡರಂಗದ ನಾಯಕರನ್ನು ಗೆಲ್ಲಿಸಿ ಕೊಟ್ಟ ಚರಿತ್ರೆ ಮಂಜೇಶ್ವರ ಮಂಡಲಕ್ಕಿದೆ ಎಂದು ಅವರು ನೆನಪಿಸಿದರು. ಸಿಪಿಎಂ ಕೇಂದ್ರ ಕಮಿಟಿ ಸದಸ್ಯ ಮಾಜಿ ಲೋಕಸಭಾ ಸದಸ್ಯ ಪಿ.ಕರುಣಾಕರನ್,ಎಲ್.ಡಿ.ಎಫ್ ಜಿಲ್ಲಾ ಸಂಚಾಲಕಮಾಜಿ ಶಾಸಕ ಕೆ.ಪಿ ಸತೀಶಂದ್ರನ್,ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಟಿಲ್,ಐ.ಎನ್.ಎಲ್ ದೇಶಿಯ ಉಪಾಧ್ಯಕ್ಷ ಕೆ.ಎಸ್. ಫಕ್ರುಧ್ಧೀನ್,ಜೆ.ಡಿ.ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಕೆ.ಎ.ಖಾದರ್, ಎಲ್.ಜೆ.ಡಿ ಜಿಲ್ಲಾ ಉಪಾಧ್ಯಕ್ಷ ಸಿದ್ಧಿಖ್ ಆಲಿ ಮೊಗ್ರಾಲ್ ಮಾತನಾಡಿದರು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು.ಎಲ್.ಡಿ.ಎಫ್ ಮಂಡಲ ಚುನಾವಣಾ ಸಮಿತಿಯ ಪರವಾಗಿ ಬಿ.ಎ.ರಾಜನ್, ವಿ.ಪಿ.ಪಿ ಮುಸ್ತಾಫ ವರದಿ ನೀಡಿದರು. ಇತ್ತೀಚೆಗೆ ನಿಧನರಾದ ಪ್ರಸಿದ್ಧ ಸಾಹಿತಿ ಗಿರೀಶ್ ಕಾರ್ನಾಡ್,ಡಾ.ಡಿ.ಕೆ ಚೌಟ,ಸಿ.ಐ.ಟಿ.ಯು ದೇಶೀಯ ಉಪಾಧ್ಯಕ್ಷ ಬಿ.ಮಾಧವ,ಖ್ಯಾತ ನ್ಯಾಯವಾದಿ ಸೀತಾರಾಮ ಶೆಟ್ಟಿಯವರ ನಿಧನಕ್ಕೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.