ಉಗ್ರರ ನುಸುಳುವಿಕೆ : ಕೇರಳಾದ್ಯಂತ ಮತ್ತೆ ಕಟ್ಟೆಚ್ಚರಕ್ಕೆ ಆದೇಶ
Team Udayavani, May 28, 2019, 6:20 AM IST
ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಉಗ್ರರು ಕೇರಳ ಮತ್ತು ಲಕ್ಷದ್ವೀಪವನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಕೇಂದ್ರ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ಲಕ್ಷದ್ವೀಪದಲ್ಲಿ ತೀವ್ರ ಕಟ್ಟೆಚ್ಚರಕ್ಕೆ ನಿರ್ದೇಶನ ನೀಡಲಾಗಿದೆ.
ಸಮುದ್ರ ಕಿನಾರೆಯಲ್ಲಿ ಶಂಕಾಸ್ಪದ ರೀತಿಯಲ್ಲಿ ಯಾವುದಾದರೂ ಬೋಟ್ ಮತ್ತು ವ್ಯಕ್ತಿಗಳು ಕಂಡುಬಂದಲ್ಲಿ ತತ್ಕ್ಷಣ ಕರಾವಳಿ ಸಂರಕ್ಷಣಾ ಪಡೆ, ನೌಕಾಪಡೆ, ಕರಾವಳಿ ಪೊಲೀಸ್ ಠಾಣೆ ಮತ್ತು ಆಯಾ ಪ್ರದೇಶಗಳ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ರಾಜ್ಯ ಗೃಹ ಖಾತೆ ತಿಳಿಸಿದೆ.
ಶ್ರೀಲಂಕಾದ ಚರ್ಚ್ನಲ್ಲಿ ಆತ್ಮಾಹುತಿ ದಾಳಿ ನಡೆಸಿದ ಉಗ್ರರು ಈ ಕೃತ್ಯ ನಡೆಸುವ ಮುನ್ನ ಕೇರಳದ ಹಲವು ಪ್ರದೇಶಗಳಿಗೆ ರಹಸ್ಯವಾಗಿ ಭೇಟಿ ನೀಡಿದ್ದರು ಮತ್ತು ಕೇರಳದಲ್ಲಿಯೂ ಆತ್ಮಾಹುತಿ ದಾಳಿ ನಡೆಸುವ ಯೋಜನೆಗೆ ರೂಪು ನೀಡಿದ್ದರೆಂಬ ಮಾಹಿತಿ ಗುಪ್ತಚರ ವಿಭಾಗ ಮತ್ತು ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನಿಂದಲೇ ಕೇರಳದಲ್ಲಿ ಜಾಗೃತಾ ನಿರ್ದೇಶ ಪಾಲಿಸಲಾಗುತ್ತಿದೆ.
ಇದೇ ವೇಳೆ ಉಗ್ರರು ಸಮುದ್ರ ಮಾರ್ಗವಾಗಿ ಕೇರಳಕ್ಕೆ ನುಸುಳಲು ಸಹಾಯಕವಾಗುವಂತೆ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ತಂತ್ರ ಹೆಣೆದಿದ್ದಾರೆಂದು ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ. ಉಗ್ರರು ಕೇರಳಕ್ಕೆ ನುಸುಳುವ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಅದಕ್ಕೂ ಮುನ್ನ ಗಲಭೆ ಸೃಷ್ಟಿಸಿ ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆಯಲು ಯೋಜಿಸಿದ್ದಾರೆ ಎನ್ನಲಾಗಿದೆ.