ಅಪೂರ್ಣ ಯಕ್ಷಗಾನ ಕಲಾಕೇಂದ್ರ : ಇನ್ನೂ ಈಡೇರದ ಗಡಿನಾಡ ಕನ್ನಡಿಗರ ಕನಸು
Team Udayavani, Apr 21, 2019, 6:30 AM IST
ಬದಿಯಡ್ಕ: ಎಡರಂಗ ನೇತƒತ್ವದ ರಾಜ್ಯ ಸರಕಾರವು ಇತ್ತೀಚೆಗೆ ತನ್ನ ಅಧಿಕಾರಾವಧಿಯ ಸಾವಿರ ದಿನವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಿತು. ಈ ಸವಿ ನೆನಪಿಗೆ ಸರಕಾರವು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಈ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಆಚರಿಸಿತು. ಪ್ರತಿ ಜಿಲ್ಲೆಗೂ ಕನಿಷ್ಠ ಹತ್ತು ಕಾರ್ಯಕ್ರಮಗಳಂತೆ ರಾಜ್ಯಾದ್ಯಂತ ಸಾವಿರ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನಲ್ಲೂ ವಿವಿಧ ಕಾರ್ಯಕ್ರಮಗಳು ನಡೆದವು. ಈ ಪೈಕಿ ಮಂಜೇಶ್ವರ ಹೊಸಂಗಡಿಯ ದುರ್ಗಿಪಳ್ಳದಲ್ಲಿ ನನೆಗುದಿಗೆ ಬಿದ್ದಿದ್ದ ಕೇರಳ ತುಳು ಅಕಾಡೆಮಿಯ ತುಳು ಭವನಕ್ಕೆ ನಡೆಸಲಾದ ಶಿಲಾನ್ಯಾಸವೂ ಒಂದು. ಅಲ್ಲದೆ ಕಾಸ್ರೋಡ್ ಕೆಫೆ ಸಹಿತ ಇತರ ಯೋಜನೆಗಳೂ ಒಳಗೊಂಡಿದ್ದವು.
ಆದರೆ ಕಳೆದೊಂದು ದಶಕದಿಂದ ನನೆಗುದಿಗೆ ಬಿದ್ದಿರುವ ಕುಂಬಳೆ ಸಮೀಪದ ಮುಜುಂಗಾವಿನಲ್ಲಿ ನಿರ್ಮಿಸಲುದ್ದೇಶಿಸಿ ಅರ್ಧದಲ್ಲೇ ಮೊಟಕುಗೊಂಡಿರುವ ಕೇರಳ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಸರಕಾರದ ಸಾವಿರ ದಿನದ ಯೋಜನೆಯಲ್ಲಿ ಒಳಗೊಳ್ಳದಿರುವುದು ನಿರಾಶೆಯ ಜೊತೆಗೆ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಯಕ್ಷಗಾನ ಪಿತಾಮಹ ಎನಿಸಿಕೊಂಡ ಪಾರ್ತಿಸುಬ್ಬನ ಸ್ಮರಣಾರ್ಥ ಸ್ಥಾಪನೆಗೊಂಡ ಯಕ್ಷ ಕಲಾ ಮಂದಿರ ನಿರ್ಮಾಣ ಅರ್ಧಕ್ಕೆ ನಿಂತು ಆ ಮೂಲಕ ಶೋಚನೀಯಾವಸ್ಥೆ ತಲುಪಿರುವುದು ಯಕ್ಷ ಜನಕನ ಹೆಸರಿಗೆ ಕಳಂಕ ತರುತ್ತಿದೆ.
ಸುಮಾರು ಸುಮಾರು ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಕಲಾಕೇಂದ್ರ ನಿರ್ಮಾಣ ಪೂರ್ಣಗೊಳ್ಳದೆ ಕಟ್ಟಡವು ಕುಡುಕರ, ಪುಂಡರ ಆಶ್ರಯತಾಣವಾಗಿದೆ.
ಪೊದೆ ಗಿಡಗಳಿಂದ ಆವೃತವಾದ ಕಟ್ಟಡದಲ್ಲಿ ಮದ್ಯದ ಬಾಟಲಿಗಳು, ಗಾಜಿನ ಚೂರು, ಒಡೆದ ಹೆಂಚು, ಕೆಡವಲ್ಪಟ್ಟ ಕಿಟಕಿ ಕಲ್ಲುಗಳು ಕಂಡು ಬರುತ್ತಿವೆ. ಮಳೆಗಾಲದ ವೇಳೆ ಮಳೆ ನೀರು ಶೇಖರವಾಗಿ ನೆಲ ಪಾಚಿ ಕಟ್ಟದ ಸ್ಥಿತಿಯಲ್ಲಿದೆ ಯಕ್ಷ ಮಂದಿರ. ಶ್ವಾನಗಳು ಕೂಡಾ ಹಗಲು ವಿಶ್ರಾಂತಿ ಪಡೆಯುವ ಸ್ಥಳವಾಗಿ ಮಾರ್ಪಟ್ಟಿದ್ದು, ಮಾಡಿಗೆ ಹೊದೆಸಲಾದ ಕಬ್ಬಿಣದ ಸರಳುಗಳ ಇಂದೋ ನಾಳೆಯೋ ಧರಾಶಾಯಿಯಾಗುವ ದುಸ್ಥಿತಿಯಿದೆ.
2009-10 ರಲ್ಲಿ ಅಂದಿನ ಎಡರಂಗ ಸರಕಾರದ ಅಧಿಕಾರದ ವೇಳೆ ಸುಮಾರು 20 ಲಕ್ಷ ರೂ. ಅನುದಾನದ ಮೂಲಕ ಯಕ್ಷ ರಸಿಕ, ಯಕ್ಷಗಾನ ಪಿತಾಮಹ ಪಾರ್ತಿಸುಬ್ಬನ ಸ್ಮರಣಾರ್ಥ ಯಕ್ಷಗಾನ ಕಲಾಕೇಂದ್ರ ಸ್ಥಾಪನೆ, ಆ ಮೂಲಕ ಯುವ ಕಲಾವಿದರನ್ನು ಮಹತ್ತರ ಕಲೆಯತ್ತ ಆಕರ್ಷಿಸಿ, ಕಲೆಯನ್ನು ಪ್ರವರ್ಧಿಸುವ ಯೋಜನೆಯನ್ನು ರೂಪಿಸಲಾಗಿತ್ತು.
ಕುಂಬಳೆ-ಮುಜಂಗಾವು ಪಾರ್ಥಸಾರಥಿ ದೇವಸ್ಥಾನ ಪರಿಸರದ ಮುಂಭಾಗದಲ್ಲಿರುವ ವಿಶಾಲವಾದ ಪ್ರದೇಶದಲ್ಲಿ ಕಲಾಕೇಂದ್ರ ಸ್ಥಾಪನೆಯ ಸ್ಥಳವೂ ನಿಶ್ಚಯಿಸಲ್ಪಟ್ಟು ಕಾಮಗಾರಿ ಭರದಿಂದ ಸಾಗಿತ್ತು. ಅಂದಿನ ಶಾಸಕರ ನಿಧಿಯಿಂದ(ಮಂಜೇಶ್ವರ ಮತ್ತು ಆಂಗ್ಲೋ ಇಂಡಿಯನ್) ಸುಮಾರು 15 ಲಕ್ಷ ರುಪಾಯಿಗಳ ಧನಸಹಾಯವು ದೊರೆತಿತ್ತು. ಕಲಾಕೇಂದ್ರದ 90 ಶೇ. ಕಾಮಗಾರಿಯು ಬಹಳ ಹಿಂದೆಯೇ ಪೂರ್ಣಗೊಂಡಿತ್ತು. ನೆಲಕ್ಕೆ ಟೆ„ಲ್ಸ್ ಹೊದಿಕೆ, ಕಲಾವಿದರಿಗೆ ವೇಷ ಬದಲಿಸುವ ಕೊಠಡಿಗಳು ಪೂರ್ಣಗೊಂಡಿದ್ದರೂ, ಕ ಲಾಕೇಂದ್ರ ಉದ್ಘಾಟನೆಯಾಗದೆ, ಸಕಲ ನಿರ್ಲಕ್ಷಕ್ಕೆ ಒಳಪಟ್ಟ ಕಾರಣ ಯೋಜನೆ ಸಾಕಾರಗೊಳ್ಳದೆ ಸ್ತಬ್ದವಾಗಿರುವುದು ಈ ಭಾಗದ ಯಕ್ಷ ಕಲಾರಸಿಕರನ್ನು ಬಹಳ ನೋಯಿಸುತ್ತಿದೆ.
ಸ್ಮಾರಕ ಯೋಜನೆಗೆ ರೂಪುಗೊಂಡಿದ್ದ ಸಮಿತಿ 5 ಸೆಂಟ್ಸ್ ಸ್ಥಳವನ್ನು ಖರೀದಿಸಿ, ಅಚ್ಚುಕಟ್ಟಾಗಿ ಮುಂದುವರಿದಿದ್ದ ಯೋಜನೆ ಇಂದು ನನೆಗುದಿಗೆ ಬಿದ್ದಿದೆ. ಅಪೂರ್ಣವಾದ ಸ್ಮಾರಕವು ಪಡ್ಡೆ ಹುಡುಗರ, ಕಿಡಿಗೇಡಿಗಳ ಆಡೊಂಬಲವಾಗಿದೆ. ಪ್ರಸ್ತುತ ಸಮಿತಿ ಯೋಜನೆ ಸಾಕಾರದ ಬಗ್ಗೆ ಕಾಳಜಿ ವಹಿಸಿದಂತಿಲ್ಲ.
ಸಮಿತಿಯ ಕಾಲಾವಧಿ ಮುಗಿದರೂ ಹೊಸ ಸಮಿತಿ ಸದಸ್ಯರ ಆಯ್ಕೆಯಾಗಲಿ ನಡೆದಿಲ್ಲ. ಆದಷ್ಟು ಬೇಗ ಹೊಸ ಸಮಿತಿ ರೂಪುಗೊಂಡು ಕಾಮಗಾರಿ ಪೂರ್ಣಗೊಳಿಸಿ, ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಕೆಲಸ ನಡೆಯಬೇಕಿದೆ. ಯಕ್ಷ ಪಿತಾಮಹ ಪಾರ್ತಿಸುಬ್ಬನಿಗೆ ತನ್ನ ತಾಯ್ನೆಲದಲ್ಲಿ ಭವ್ಯವಾದ ಸ್ಮಾರಕ ತೆಲೆಯೆತ್ತಿ ನಿಲ್ಲುವಂತೆ ಇನ್ನಾದರೂ ಪ್ರಯತ್ನಿಸಿ ಯಕ್ಷಗಾನ ಸ್ಮಾರಕವನ್ನು ಕಲಾಕೇಂದ್ರವನ್ನು ಪುನರ್ಜೀವಿತಗೊಳಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ