ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Jul 16, 2019, 5:43 AM IST
ದೇವಸ್ಥಾನದಿಂದ ಕಳವು:
ಇನ್ನೊಬ್ಬನ ಬಂಧನ
ಕಾಸರಗೋಡು: ನೀಲೇಶ್ವರ ನಾರಾನ್ಕುಳಂಗರ ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಆರು ಪವನ್ ಚಿನ್ನಾಭರಣವನ್ನು ಕಳವು ಮಾಡಿದ ಸಂಬಂಧ ಇನ್ನೋರ್ವ ಆರೋಪಿಯನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸುರತ್ಕಲ್ ಸಮೀಪದ ಕಾಟಿಪಳ್ಳದ ಹಮೀದ್(45)ನನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲಂ ನಿವಾಸಿ ದೀಪಕ್ ಸುರೇಂದ್ರನ್ (39), ನೀಲೇಶ್ವರ ಚೆರುಪುರಂನ ಪ್ರಭಾಕರನ್ ಎಂ.ಎಸ್. (48) ಮತ್ತು ಪ್ರಕಾಶನ್(38)ನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು.
ಬ್ಯಾಂಕ್ ಕಾರ್ಯದರ್ಶಿಗೆ ಇರಿದ
ಪ್ರಕರಣ: ಚಾಲಕನ ಬಂಧನ
ಮಂಜೇಶ್ವರ: ಮಂಜೇಶ್ವರ ಕೃಷಿ ಅಭಿವೃದ್ಧಿ ಬ್ಯಾಂಕ್ನ ಕಾರ್ಯದರ್ಶಿ ಮೈಲಾಟಿ ನಿವಾಸಿ ಟಿ. ವಿಜಯನ್ (56) ಅವರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್ನ ಜೀಪು ಚಾಲಕ ಶೇಣಿ ನಿವಾಸಿ ರಮೇಶನ್ (41)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.
ರಸ್ತೆ ಬದಿ ಕೋಣನ ಕೊಂಬು ಪತ್ತೆ
ಬದಿಯಡ್ಕ: ಇಲ್ಲಿಗೆ ಸಮೀಪದ ಕರಿಂಬಿಲದ ರಸ್ತೆ ಬದಿ ಗೋಣಿ ಚೀಲದಲ್ಲಿ ಕಟ್ಟಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಕೋಣನ ಕೊಂಬುಗಳೆರಡು ಪತ್ತೆಯಾಗಿವೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ವಾಹನದಲ್ಲಿ ತಂದು ಇಲ್ಲಿ ಯಾರೋ ಉಪೇಕ್ಷಿಸಿರಬೇಕೆಂದು ಶಂಕಿಸಲಾಗಿದೆ.
ಮಟ್ಕಾ ದಂಧೆ : ಮೂವರ ಬಂಧನ
ಮಂಜೇಶ್ವರ: ತಲಪಾಡಿ ಬಸ್ ತಂಗುದಾಣದ ಪರಿಸರದಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಕಣ್ವತೀರ್ಥ ನಿವಾಸಿ ಅರುಣ್ ಕುಮಾರ್ (39), ಕೆ.ಸಿ. ರೋಡ್ ನಿವಾಸಿ ದಯಾನಂದ (49) ಮತ್ತು ತಲಪಾಡಿ ನಿವಾಸಿ ವಿನ್ಸೆಂಟ್ (61)ನನ್ನು ಬಂಧಿಸಿದ ಮಂಜೇಶ್ವರ ಪೊಲೀಸರು ಇವರಿಂದ 4,620 ರೂ. ವಶಪಡಿಸಿಕೊಂಡಿದ್ದಾರೆ.
ಶಂಕಿತ ಯುವಕನ ಬಂಧನ
ಕಾಸರಗೋಡು: ಕೂಡ್ಲು ಚೌಕಿ ಪರಿಸರದಲ್ಲಿ ಜು.14 ರಂದು ರಾತ್ರಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಎರ್ದುಂಕಡವಿನ ರಮೀಸ್ (28)ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಅನುಚಿತ ವರ್ತನೆ: ಕೇಸು ದಾಖಲು
ಕಾಸರಗೋಡು: ನಗರದ ಕೆಎಸ್ಆರ್ಟಿಸಿ ಬಸ್ ತಂಗುದಾಣದ ಪರಿಸರದಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆರ್ಕಳ ಪಾಲಡ್ಕದ ಅಬ್ದುಲ್ ರಜಾಕ್ನ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ.
ಕೊಲೆ ಪ್ರಕರಣ :
ವಿಚಾರಣೆ ಪುನರಾರಂಭ
ಕಾಸರಗೋಡು: ಕುಂಬಳೆ ಶಾಂತಿಪಳ್ಳ ಶ್ರೀ ಗೋಪಾಲ ಕೃಷ್ಣ ಸಭಾಂಗಣ ಬಳಿಯ ರಾಮನ್ ಕುಟ್ಟಿ ಅವರ ಪುತ್ರ, ಸಿಪಿಎಂ ಕಾರ್ಯಕರ್ತ ಪಿ. ಮುರಳೀಧರನ್ (38) ಕೊಲೆ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ದಲ್ಲಿ ಆ. 1ರಿಂದ ಪುನರಾರಂಭಗೊಳ್ಳಲಿದೆ.