ಗ್ರಂಥಗಳ ಓದಿನಿಂದ ಜ್ಞಾನ ವಿಕಾಸ: ಜನಾರ್ದನ್
Team Udayavani, Jul 4, 2017, 3:45 AM IST
ಬದಿಯಡ್ಕ: ಗ್ರಂಥಗಳು ಲೇಖಕನ ಜೀವನಾ ನುಭವಗಳನ್ನು ತಿಳಿಸುತ್ತದೆ. ಇದು ಓದುಗನ ಜ್ಞಾನ ವಿಸ್ತಾರಕ್ಕೆ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಂಥಾಲಯಗಳು ಸರಸ್ವತೀ ಮಂದಿರಗಳಾಗಿದ್ದು, ಭೇದಗಳಿಲ್ಲದೆ ಸರ್ವರು ವಿದ್ಯಾದೇವತೆಯ ಅನುಗ್ರಹಕ್ಕೆ ಗ್ರಂಥಾಲಯಗಳ ಮೂಲಕ ಪಾತ್ರರಾಗುವರು ಎಂದು ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಜನಾರ್ದನ ಅಭಿಪ್ರಾಯ ವ್ಯಕ್ತಪಡಿಸಿದರು.
ಮವ್ವಾರು ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ನಡೆದ ತಿಂಗಳ ಸರಣಿ ಕಾರ್ಯಕ್ರಮಗಳ ಭಾಗವಾಗಿ ಹಮ್ಮಿಕೊಂಡ “ಮಕ್ಕಳಿಗೆ ಮಧುರ ಗಣಿತ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದರ ಬಗೆಗಿನ ಭಯವನ್ನು ದೂರೀಕರಿಸಿ ಕಲೆಯಾಗಿ ಪರಿಗಣಿಸುವ ಮನೋಭಾವ ವಿಸ್ತರಣೆಗೆ ಗಣಿತದ ಬಗೆಗಿನ ಪುಸ್ತಕಗಳನ್ನು ಓದುವುದನ್ನು ರೂಢಿಸಬೇಕೆಂದು ಅವರು ತಿಳಿಸಿದರು.
ಇಂದಿನ ಸಂದರ್ಭದಲ್ಲಿ ಓದುವ ಹವ್ಯಾಸ ಯುವ ಜನರಲ್ಲಿ ಮರೆಯಾಗುತ್ತಿರುವುದು ಗಂಭೀರ ಪರಿಣಾಮಗಳಿಗೆ ಕಾರಣ ವಾಗಲಿದ್ದು, ಮನೋವಿಕಾಸದ ಹಿನ್ನಡೆಯ ಭೀತಿ ಇದೆ ಎಂದು ಅವರು ಎಚ್ಚರಿಸಿದರು.
ಗ್ರಂಥಾಲಯದ ಅಧ್ಯಕ್ಷ ಕೃಷ್ಣಮೂರ್ತಿ ಎಡಪ್ಪಾಡಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕಾರಡ್ಕ ಬ್ಲಾಕ್ ಪಂಚಾಯತ್ ಸದಸ್ಯ ಸುಂದರ ಮವ್ವಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉದಯಗಿರಿ ಶಾಲಾ ಶಿಕ್ಷಕ ರಾಜೇಶ್ ಎಸ್. ಉಬ್ರಂಗಳ ಮಧುರ ಗಣಿತದ ಬಗ್ಗೆ ತರಬೇತಿ ನೀಡಿದರು.
ವಿವಿಧ ಶಾಲೆಗಳ ಪ್ರಾಥಮಿಕ ವಿಭಾಗದಿಂದ ತೊಡಗಿ ಹೈಯರ್ ಸೆಕೆಂಡರಿ ವರೆಗಿನ ನೂರಾರು ವಿದ್ಯಾರ್ಥಿಗಳು, ರಕ್ಷಕರು ಪಾಲ್ಗೊಂಡರು.
ಸಂಘದ ಉಪಾಧ್ಯಕ್ಷ ಎಂ.ಗಂಗಾಧರ ಮಾಸ್ತರ್ ಸ್ವಾಗತಿಸಿ, ಕಾರ್ಯದರ್ಶಿ ಸದಾಶಿವ ಕೆ. ವಂದಿಸಿದರು. ಜ್ಯೋತಿಲಕ್ಷ್ಮೀ ಹಾಗೂ ವಿದ್ಯಾ ಪ್ರಾರ್ಥನಾಗೀತೆ ಹಾಡಿದರು.