“ಯಕ್ಷಗಾನವನ್ನು ಪರಂಪರೆಗೆ ಧಕ್ಕೆಯಾಗದಂತೆ ಮುನ್ನಡೆಸಬೇಕು’
Team Udayavani, May 27, 2019, 10:49 AM IST
ಕೊಲ್ಲಂಗಾನ: ಸಾಂಸ್ಕೃತಿಕ, ಸಾಮಾಜಿಕ ಕ್ರಾಂತಿಯೊಂದಿಗೆ ದೈವಿಕ ಆರಾಧನಾ ಕಲೆಯಾಗಿ ಬೆಳೆದುಬಂದು ಇಂದು ವಿಶ್ವವಿಖ್ಯಾತವಾಗಿರುವ ಯಕ್ಷಗಾನ ಹೊರ ನೋಟಕ್ಕೆ ಅತಿ ಶ್ರೀಮಂತವೆನಿಸಿ ಕಾಣಿಸುತ್ತಿದ್ದರೂ, ಆಂತರಿಕವಾಗಿ ಹಲವು ಸ್ಥಿತ್ಯಂತರಗಳ ಸವಾಲುಗಳನ್ನು ಎದುರಿಸುತ್ತಿದೆ ಎಂದು ಕೊಲ್ಲಂಗಾನ ಶ್ರೀ ನಿಲಯದ ಬ್ರಹ್ಮಶ್ರೀ ಗಣರಾಜ ಉಪಾಧ್ಯಾಯ ಅವರು ತಿಳಿಸಿದರು.
ಕೊಲ್ಲಂಗಾನ ಶ್ರೀ ನಿಲಯದ ಸನ್ನಿಧಿಯಲ್ಲಿ ನಡೆದ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಮಂಡಳಿಯು ಪ್ರಸ್ತುತ ವರ್ಷ ಮುನ್ನಡೆಸಿದ ತನ್ನ ಯಶಸ್ವೀ 21ನೇ ವರ್ಷದ ತಿರುಗಾಟದ ಗೆಜ್ಜೆ ಬಿಚ್ಚುವ ಪತ್ತನಾಜೆ(ಹತ್ತಾವದಿ) ಸೇವಾ ರೂಪದ ಯಕ್ಷಗಾನ ಪ್ರದರ್ಶನದ ಅಂಗವಾಗಿ ಆಯೋಜಿಸಿದ ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದು ಅನುಗ್ರಹ ಭಾಷಣಗೈದು ಅವರು ಮಾತನಾಡಿದರು.
ಸಾಂಪ್ರದಾಯಿಕ ಬದ್ಧತೆಗಳೊಂದಿಗೆ ವರ್ತಮಾನದ ವಿದ್ಯಮಾನಗಳಿಗೂ ಸಹ ಸ್ಪಂದಿಸಿ ಜನಮನ್ನಣೆಗೆ ಪಾತ್ರವಾಗಿರುವ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಪರಂಪರೆಗೆ ಧಕ್ಕೆಯಾಗದಂತೆ ಮೂಲ ಸ್ವರೂಪದಲ್ಲಿ ಮುನ್ನಡೆಸುವ ಹೊಣೆಯ ಅರಿವು ನಮ್ಮಲ್ಲಿರಬೇಕು ಎಂದು ಅವರು ತಿಳಿಸಿದರು
ಸಹೃದಯತೆಯ ಸಂಕೇತ
ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ, ಸಂಘಟಕ ಗುಂಡ್ಯಡ್ಕ ಈಶ್ವರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕಲಾವಿದರು, ಕಲಾಪ್ರದರ್ಶನಗಳಲ್ಲಿ ಅತ್ಯಂತ ಗುಣಾತ್ಮಕತೆಗಳಿಂದ ಪ್ರಸಿದ್ಧಿಯಾಗಿರುವ ಶ್ರೀ ಕ್ಷೇತ್ರ ಕೊಲ್ಲಂಗಾನ ಮೇಳದ ಪ್ರದರ್ಶನಗಳು ಜನಮನ್ನಣೆಯೊಂದಿಗೆ ಗಮನಾರ್ಹ ಸಾಂಸ್ಕೃತಿಕ ಮೇರುತ್ವವನ್ನು ಕೊಡಮಾಡುತ್ತಿದೆ. ಸಹೃದಯ ಕಲಾಪೋಷಕರ, ಕಲಾಭಿಮಾನಿಗಳ ನಿರಂತರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿರುವುದು ಜನರ ಸಹೃದಯತೆಯ ಸಂಕೇತ ಎಂದು ತಿಳಿಸಿದರು. ಉದ್ಯಮಿ ನವೀನ್ ಕುಮಾರ್ ಚಿದಂಬರಂ, ಪ್ರೊ|ಎ.ಶ್ರೀನಾಥ್ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಸುಂದರ ಶೆಟ್ಟಿ ಕೊಲ್ಲಂಗಾನ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು. ಶರಣ್ಯ ಶ್ರೀನಿವಾಸ ಭಟ್ ವಂದಿಸಿದರು. ಮೇಳದ ಪ್ರಬಂಧಕ ಮಹೇಶ್, ಭಾಗವತ ಸತೀಶ್ ಪುಣಿಂಚಿತ್ತಾಯ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಬೆಳಗ್ಗಿನ ವರೆಗೆ ಸೇವಾ ಬಯಲಾಟ ಪ್ರದರ್ಶನ ನಡೆಯಿತು.
ಯಕ್ಷಗಾನಕ್ಕೆ ದೈವಿಕ ಮಹತ್ವ
ವಿಶಿಷ್ಟ ಕಲಾಪ್ರಕಾರವಾದ ಯಕ್ಷಗಾನಕ್ಕೆ ದೈವಿಕ ಮಹತ್ವ ಈ ಮಣ್ಣಿನ ಸತ್ವದೊಂದಿಗೆ ಅಡಕವಾಗಿ ಬಂದಿದೆ. ಅನಂತ ಜ್ಞಾನಕಾಶಿಯ ನಮ್ಮ ಪರಂಪರೆಯ ಮಹತ್ವವನ್ನು ಜನಸಾಮಾನ್ಯರಿಗೆ ಗ್ರಹಿಸುವಲ್ಲಿ ಯಕ್ಷಗಾನ ಕಥಾನಕಗಳು ಉಂಟುಮಾಡಿರುವ ಮೈಲುಗಲ್ಲು ಇಲ್ಲಿಯ ಅಚ್ಚಳಿಯದ ದಾಖಲೆಯಾಗಿದೆ ಎಂದು ತಿಳಿಸಿದರು. ಸಂಸ್ಕೃತಿ, ಕಲೆ ಮತ್ತು ಜನಜೀವನ ಪರಸ್ಪರ ಜೊತೆಯಾಗಿ ಸಾಗಿದಾಗ ಅಂತಹ ಸಮಾಜ ಕ್ಲೇಶ ರಹಿತವಾಗಿ ಮುನ್ನಡೆಯಲು ಸಾಧ್ಯವಾಗಿದೆ. ನಮ್ಮ ಹೊಸ ತಲೆಮಾರಿಗೆ ಈ ಬಗೆಗಿನ ತಿಳುವಳಿಕೆಯನ್ನು ದಾಟಿಸುವಲ್ಲಿ ಹಿರಿಯರು ಮುತುವರ್ಜಿ ವಹಿಸಿ ಯಕ್ಷಗಾನ ಪ್ರದರ್ಶನಗಳ ಉತ್ತಮ ವೀಕ್ಷಕರಾಗುವ ಅವಕಾಶವನ್ನು ಮಾಡಿಕೊಡಬೇಕು ಎಂದು ಅವರು ಕೊಲ್ಲಂಗಾನ ಶ್ರೀ ನಿಲಯದ ಬ್ರಹ್ಮಶ್ರೀ ಗಣರಾಜ ಉಪಾಧ್ಯಾಯ ತಿಳಿಸಿದರು.
ಕೊಲ್ಲಂಗಾನ ಮೇಳ ಯಶಸ್ವಿಯಾಗಿ ಕಳೆದ 21 ವರ್ಷಗಳಿಂದ ನಡೆಸುತ್ತಿರುವ ಸಾಂಸ್ಕೃತಿಕ ಕ್ರಾಂತಿ ಇತರೆಡೆಗಳಿಗೂ ಮಾದರಿಯಾಗಿದೆ ಎಂದು ಅವರು ತಿಳಿಸಿದರು. ಈ ನೆಲದ ಸಂಸ್ಕೃತಿ ಕಲಾ ಶಕ್ತಿಗಳನ್ನು ಉಳಿಸುವುದು ಕಲಾ ಪ್ರದರ್ಶನಗಳ ಉದ್ದೇಶ, ಆ ಬಗ್ಗೆ ಚಿಂತಿಸಬೇಕಾಗಿದೆ ಎಂದರು. ಯಕ್ಷಗಾನ ಪರಂಪರೆಗೆ ಮರಳಿ ತನ್ಮೂಲಕ ಮುಂದಿನ ಪೀಳಿಗೆಗೆ ಆರೋಗ್ಯ ಪೂರ್ಣ ಸಮದ್ಧ ಪರಿಸರವನ್ನು ನಿರ್ಮಿಸಿಕೊಡಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.