ಮಂಜೇಶ್ವರ ರೈಲು ನಿಲ್ದಾಣ: ಅವಗಣನೆಗೆ ಕೊನೆ ಎಂದು?
Team Udayavani, Sep 6, 2018, 6:00 AM IST
ಕಾಸರಗೋಡು: ಕೇರಳದ ಅತ್ಯಂತ ಉತ್ತರದ ಮಂಜೇಶ್ವರ ರೈಲು ನಿಲ್ದಾಣ ನಿರಂತರವಾಗಿ ಅವಗಣೆನೆಗೆ ತುತ್ತಾಗು ತ್ತಲೇ ಇದೆ. ರೈಲು ನಿಲ್ದಾಣದ ಅಭಿವೃದ್ಧಿಗಾಗಿ ಸ್ಥಳೀಯರು ನಿರಂತರವಾಗಿ ಸಂಬಂಧ ಪಟ್ಟವರನ್ನು ಒತ್ತಾಯಿಸುತ್ತಲೇ ಬಂದಿದ್ದರೂ, ಈ ವರೆಗೂ ಬೇಡಿಕೆಗೆ ಯಾವುದೇ ಸ್ಪಂದನೆ ಕಂಡು ಬಂದಿಲ್ಲ ಎಂಬ ಆರೋಪ ಸಾರ್ವತ್ರಿಕವಾಗಿ ಕೇಳಿ ಬರುತ್ತಲೇ ಇದೆ. ಮಂಜೇಶ್ವರ ರೈಲು ನಿಲ್ದಾಣದ ಅವಗಣನೆಯಿಂದಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ.
ಕಚೇರಿ ಇಲ್ಲ
ರಾಜ್ಯ ಸರಕಾರ ಮತ್ತು ಸಂಸದರು ಜಿಲ್ಲೆಯ ಉತ್ತರದಲ್ಲಿರುವ ಮಂಜೇಶ್ವರ ತಾಲೂಕಿನ ಅಭಿವೃದ್ಧಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಮಂಜೇಶ್ವರ ತಾಲೂಕು ಕೇಂದ್ರವಾದ ಬಳಿಕ ಇಲ್ಲಿಗೆ ಅತ್ಯಗತ್ಯವಾದ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ದಿಸೆಯಲ್ಲಿ ಮುನ್ನಡೆಯುವ ಕನಸು ಇನ್ನೂ ನನಸಾಗಿಲ್ಲ. ನನೆಗುದಿಗೆ ಬಿದ್ದ ಹಲವು ಯೋಜನೆಗಳು ಸಾಕಾರಗೊಳ್ಳದಿರುವುದರಿಂದ ಮಂಜೇಶ್ವರದ ಸರ್ವತೋಮುಖ ಅಭಿವೃದ್ಧಿ ಕನಸಾಗಿಯೇ ಉಳಿದಿದೆ. 2013ರಲ್ಲಿ ಮಂಜೇಶ್ವರವು ತಾಲೂಕು ಕೇಂದ್ರ ಎಂದು ಘೋಷಿಸಲ್ಪಟ್ಟ ಬಳಿಕ ಇಲ್ಲಿನ ಜನಸಾಮಾನ್ಯರಲ್ಲಿ ಭೌತಿಕ ಮತ್ತು¤ ಆರ್ಥಿಕ ಅಭಿವೃದ್ಧಿಯ ಕನಸುಗಳು ಚಿಗುರಿದ್ದವು. ಆದರೆ ಐದು ವರ್ಷಗಳ ಅನಂತರವೂ ಮಂಜೇಶ್ವರ ತಾಲೂಕಿಗೆ ಸೂಕ್ತ ಕೇಂದ್ರ ಕಚೇರಿ ಇಲ್ಲ. ಉಪ್ಪಳ ಬಸ್ಸು ನಿಲ್ದಾಣದ ಮುಂಭಾಗದ ಬಾಡಿಗೆ ಕೊಠಡಿಯಲ್ಲಿ ತಹಶೀಲ್ದಾರರ ಕಚೇರಿ ಪ್ರಸ್ತುತ ಕಾರ್ಯಾಚರಿಸುತ್ತಿದೆ.
ಶಿಕ್ಷಣ, ಆರೋಗ್ಯ ಸೇವೆ ವಿಸ್ತರಣೆ ಸಹಿತ ಮಹತ್ವಾಕಾಂಕ್ಷಿ ಯೋಜನೆಗಳು ಪ್ರಾಪ್ತಿಯಾಗದ ಗಡಿಭಾಗದ ಮಂಜೇಶ್ವರದಲ್ಲಿ ರೈಲ್ವೇ ಇಲಾಖೆಯ ಸೇವಾ ಸೌಲಭ್ಯಗಳನ್ನೂ ವಿಸ್ತರಿಸಲಾಗಿಲ್ಲ. ಆರು ತಿಂಗಳ ಹಿಂದೆಯಷ್ಟೇ ಮಂಜೇಶ್ವರದ ಹೊಸಂಗಡಿ, ಉದ್ಯಾವರದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರೈಲ್ವೇ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣವಾಗಬೇಕೆಂದು ಸಂಸದರ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು. ಸ್ಥಳೀಯ ಗ್ರಾಮ ಪಂಚಾಯತ್ಗಳು ಸೇರಿದಂತೆ ಮಂಜೇಶ್ವರ ಬ್ಲಾಕ್ ಪಂಚಾಯತ್, ಕಾಸರ ಗೋಡು ಜಿಲ್ಲಾ ಪಂಚಾಯತ್ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ಹಣ ಮೀಸಲಿಡುವಂತೆ ನಿರ್ದೇಶಿಸಲಾಗಿತ್ತು. ಆದರೆ ಆರು ತಿಂಗಳು ಕಳೆದ ಅನಂತರವೂ ಸ್ಥಳೀಯಾಡಳಿತಗಳು ಹಣ ಮೀಸಲಿಟ್ಟಿಲ್ಲ ಮತ್ತು ಯೋಜನೆ ಪೂರ್ಣಗೊಳಿಸುವ ಸಹಕಾರಿಯಾಗುವ ನಿಟ್ಟಿನಲ್ಲಿ ಅ ಧಿಕಾರಿಗಳು ಸೂಕ್ತ ಮಾಹಿತಿ ನೀಡಿ ಸ್ಪಂದಿಸಲಿಲ್ಲ.
ರಾಜಕಾರಣಿಗಳ ಅಸಡ್ಡೆ ಕಾರಣ
2005-06ರಲ್ಲಿ ಲಾಲೂ ಪ್ರಸಾದ್ಯಾದವ್ ಕೇಂದ್ರ ರೈಲ್ವೇ ಸಚಿವರಾಗಿದ್ದಾಗ ಹೊಸಂಗಡಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂತಿಸಲಾಗಿತ್ತು. ಅದರಂತೆ ಅಂದಿನ ರೈಲ್ವೇ ಬಜೆಟ್ಟಿನಲ್ಲಿ ಯೋಜನೆಗೆ ಪೂರಕವೆನ್ನುವಂತೆ ಟೋಕನ್ ಹಣ ಮೀಸಲಿರಿಸಲಾಗಿತ್ತು.
ರೈಲ್ವೇ ಅಧಿಕಾರಿ ವರ್ಗದ ಹಸ್ತಕ್ಷೇಪ, ರಾಜಕಾರಣಿಗಳ ಇಬ್ಬಗೆ ನೀತಿ ಮಂಜೇಶ್ವರದ ಅಭಿವೃದ್ಧಿಗೆ ಮುಳು ವಾಗಿದೆ. ಉಪ್ಪಳ, ಕುಂಬಳೆ ರೈಲು ನಿಲ್ದಾಣಗಳು ದಶಕಗಳಿಂದ ಸತತ ಅವಗಣನೆಯಲ್ಲಿವೆ. ಸಂಸದರು ಕಾಳಜಿ ವಹಿಸಿ ಉತ್ತರದ ಮಂಜೇಶ್ವರ ಕ್ಷೇತ್ರದ ರೈಲ್ವೇ ಅಭಿವೃದ್ಧಿಗೆ ಶ್ರಮಿಸಬೇಕಿದೆ.
ಆಶ್ವಾಸನೆ ಮಾತ್ರ
ಈ ಹಿಂದೆ ರಾಜ್ಯ ಲೋಕೋಪಯೋಗಿ ಸಚಿವ ಜಿ. ಸುಧಾಕರನ್ಅವರಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣದ ಬಗ್ಗೆ ವಿನಂತಿಸಲಾಗಿತ್ತು, ಅದರಂತೆ ಸ್ಥಳವನ್ನು ಸಂದರ್ಶಿಸಿದ ಸಚಿವರು ಶೀಘ್ರದಲ್ಲೇ ಹೊಸಂಗಡಿ ಮತ್ತು ಉದ್ಯಾವರ ರೈಲ್ವೇ ಗೇಟ್ ಬಳಿ ರಸ್ತೆ ಸಂಚಾರಕ್ಕೆ ಅನುಕೂಲ ವಾಗುವಂತೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದ್ದರು. ಕೇರಳ ರೈಲು ಅಭಿವೃದ್ಧಿ ನಿಗಮ ಮಂಡಳಿ(ಕೆಆರ್ಡಿಸಿಎಲ್) ಮೂಲಕ ಯೋಜನೆ ಪೂರ್ಣ ಗೊಳಿಸುವುದಾಗಿ ಭರವಸೆ ನೀಡಿದ್ದರೂ ಈ ವರೆಗೂ ಅಂತಹ ಯಾವುದೇ ಪ್ರಾರಂಭಿಕ ಪ್ರಕ್ರಿಯೆಯೇ ಆರಂಭಗೊಂಡಿಲ್ಲ.
ಜಿಲ್ಲೆಯ ಉತ್ತರದ ಕುಂಬಳೆ, ಉಪ್ಪಳ ಮತ್ತು ಮಂಜೇಶ್ವರ ರೈಲು ನಿಲ್ದಾಣದ ಅಭಿವೃದ್ಧಿ ರಾಜ್ಯ ಸರಕಾರ ಹಾಗೂ ಸಂಸದರಿಂದ ಅವಗಣಿಸ ಲ್ಪಟ್ಟಿದೆ. ಮಂಜೇಶ್ವರ ರೈಲು ನಿಲ್ದಾಣದ ಸಮೀಪವಿರುವ ಉದ್ಯಾವರ ಹಾಗೂ ಹೊಸಂಗಡಿ ರೈಲ್ವೇ ಕ್ರಾಸಿಂಗ್ ತ್ರಾಸದಾಯಕವಾಗಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಓವರ್ ಬ್ರಿಡ್ಜ್ ಅವಶ್ಯಕವಾಗಿದೆ. ಈ ಯೋಜನೆಯನ್ನು ಶೀಘ್ರದಲ್ಲೇ ಸಂಬಂಧಪಟ್ಟ ಇಲಾಖೆ ಕೈಗೊಳ್ಳಬೇಕು. ಪ್ರಯಾಣಿಕರ ಸಹಾಯಕವಾಗುವ ನಿಟ್ಟಿನಲ್ಲಿ ರೈಲ್ವೇ ಅಂಡರ್ಪಾಸ್ ಕಾಲ್ನಡೆ ಹಾದಿಯ ನಿರ್ಮಾಣ ಸಾಧ್ಯವಾಗಬೇಕು. ಸೂಕ್ತ ಪಾದಚಾರಿಗಳಿಗೆ ಹಾದಿ ಇಲ್ಲದ ಕಾರಣ ಹಲವು ಮಂದಿ ತಮ್ಮ ಪ್ರಾಣ ಕಳೆದುಕೊಂಡ ಘಟನೆ ಸಂಭವಿಸಿದ್ದು, ಇನ್ನೂ ಮುಂದೆ ಇಂತಹ ದುರಂತಕ್ಕೆ ಆಸ್ಪದ ನೀಡಬಾರದು. ಆಧುನಿಕ ಹಾಗೂ ವೈಜ್ಞಾನಿಕ ರೀತಿಯ ಮೂಲಭೂತ ಸೌಲಭ್ಯ ಸೌಕರ್ಯಗಳು ಮಂಜೇಶ್ವರಕ್ಕೆ ತಲುಪಬೇಕು. ಈ ಎಲ್ಲಾ ಅಭಿವೃದ್ಧಿ ಸಾಕಾರಗೊಳ್ಳಬೇಕಿದ್ದಲ್ಲಿ ಸಂಬಂಧಪಟ್ಟವರು ಇಚ್ಛಾಶಕ್ತಿಯನ್ನು ತೋರಬೇಕಾಗಿದೆ.
ಕನಸಾಗಿ ಉಳಿದ ಅಭಿವೃದ್ಧಿ
ಡಾ| ಪ್ರಭಾಕರನ್ ಆಯೋಗ 2012ರಲ್ಲಿ ಸಿದ್ಧಪಡಿಸಿದ ಕಾಸರಗೋಡು ಅಭಿವೃದ್ಧಿ ವರದಿಯಲ್ಲಿ ಮಂಜೇಶ್ವರ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು, ಉತ್ತಮ ಮೇಲ್ಛಾವಣಿ ಸಹಿತ ಪ್ರಯಾಣಿಕರಿಗೆ ಕುಡಿಯುವ ವ್ಯವಸ್ಥೆ, ಶೌಚಾಲಯ ಸೇರಿದಂತೆ ರಾ.ಹೆ. 66 ಕ್ಕೆ ಸಂಪರ್ಕ ಸಾಧಿಸಲು ಸಹಾಯಕ ವಾಗುವಂತೆ ರಸ್ತೆ ನಿರ್ಮಾಣ ಮಾಡಬೇಕೆಂದು ತಿಳಿಸಲಾಗಿತ್ತು. ಆದರೆ ರಸ್ತೆ ನಿರ್ಮಾಣದ ಕಾರ್ಯ ಇನ್ನೂ ಕೈಗೂಡಿಲ್ಲ. ಬ್ರಿಟಿಷರ ಕಾಲದ ಉಪ್ಪಳ ರೈಲ್ವೇ ನಿಲ್ದಾಣದ ಮೇಲ್ದರ್ಜೆ ಕಾರ್ಯವನ್ನು ಕೈಗೊಳ್ಳಬೇಕು, ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ಸಾಧ್ಯವಾಗಬೇಕು ಎಂದು ಹೇಳಲಾಗಿತ್ತು. ಉಪ್ಪಳ ಹಾಗೂ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆ ಅಗತ್ಯವನ್ನು ವರದಿಯಲ್ಲಿ ಸೂಚಿಸಲಾಗಿತ್ತು. 6 ವರ್ಷ ಕಳೆದರೂ ವರದಿಯಲ್ಲಿ ಸೂಚಿಸಲ್ಪಟ್ಟ ಯಾವುದೇ ಅಂಶಗಳು ಪರಿಗಣಿತವಾಗಿಲ್ಲ ಮತ್ತು ಅಭಿವೃದ್ಧಿಯ ಕನಸು ಸಾಕಾರಗೊಂಡಿಲ್ಲ.