ಸಂತ್ರಸ್ತರಿಗೆ ಶೀಘ್ರ ಪರಿಹಾರ: ಆಗ್ರಹ
Team Udayavani, Aug 12, 2019, 6:15 AM IST
ಕಾಸರಗೋಡು: ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ನಿರ್ಗತಿಕರಾದ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕಡಲ್ಕೊರೆತ ಒಳಗಾದ ಮೂಸೋಡಿ, ಮಣಿ ಮುಂಡ, ಹನುಮಾನ್ನಗರ ಮೊದಲಾದ ಪ್ರದೇಶವನ್ನು ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿದ ಅವರು ಅವೈಜ್ಞಾನಿಕವಾಗಿ ಮಂಜೇಶ್ವರ ಮೀನುಗಾರಿಕಾ ಬಂದರು ನಿರ್ಮಾಣದಿಂದಾಗಿ ಕಡಲ್ಕೊರೆತ ತೀವ್ರ ಗೊಳ್ಳಲು ಕಾರಣವೆಂದು ಶ್ರೀಕಾಂತ್ ಆರೋಪಿಸಿದರು. ಇದನ್ನು ತಡೆ ಗಟ್ಟಲು ರಾಜ್ಯ ಸರಕಾರ ತತ್ಕ್ಷಣ ಕ್ರಮ ಕೈಗೊಳ್ಳ ಬೇಕೆಂದು ಅವರು ಆಗ್ರಹಿಸಿದರು. ಈ ಪ್ರದೇಶದ ರಸ್ತೆ ಪೂರ್ಣವಾಗಿ ಕಡಲು ಆಕ್ರಮಿಸಿ ಕೊಂಡಿದೆ. ಹೊಸ ರಸ್ತೆ ನಿರ್ಮಾಣ ಕೂಡ ಆಗಬೇಕಾಗಿದೆ.
ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಸರಕಾರ ನೆರವು ನೀಡಬೇಕು. ಪುನರ್ವಸತಿ ವ್ಯವಸ್ಥೆ ಮಾಡಲು ಮತ್ತು ನಷ್ಟ ಪರಿಹಾರ ನೀಡು ವಲ್ಲಿ ಸರಕಾರ ವಿಳಂಬ ಧೋರಣೆ ತೋರುತ್ತಿದೆ ಎಂದು ಟೀಕಿಸಿದರು. ಮೀನುಗಾರರು ಹಸಿವಿನಿಂದ ಕಂಗೆಟ್ಟಿದ್ದರೂ ಅವರಿಗೆ ಉಚಿತ ಆಹಾರ ಧಾನ್ಯಗಳ ವ್ಯವಸ್ಥೆ ಮಾಡಿಲ್ಲ ಎಂದು ಬಿಜೆಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಜಿಲ್ಲಾ ಸಮಿತಿ ಸದಸ್ಯ ವಿಜಯ ಕುಮಾರ್ ರೈ, ಮಂಗಲ್ಪಾಡಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ, ಸ್ಥಳೀಯ ನಾಯಕರಾದ ರಂಜಿತ್ ಶಾರದಾ ನಗರ, ಮಾಧವ, ಜಯರಾಮ್, ಗೋಪಾಲ ಮೊದಲಾದವರು ಜತೆಗಿದ್ದರು.