ಬಾವಿಕೆರೆ ಅಣೆಕಟ್ಟು ಎತ್ತರ ಇಳಿಸಲು ಪರಿಶೀಲನೆ : ಚೀಫ್ ಎಂಜಿನಿಯರ್
Team Udayavani, Apr 18, 2019, 6:30 AM IST
ಕಾಸರಗೋಡು: ಬಾವಿಕೆರೆಯಲ್ಲಿ ಚಂದ್ರಗಿರಿ ಹೊಳೆಗೆ ಅಡ್ಡವಾಗಿ ನಿರ್ಮಿಸುವ ಶಾಶ್ವತ ತಡೆಗೋಡೆ ನಿರ್ಮಾಣದ ಪ್ರಗತಿ ಬಗ್ಗೆ ಅವಲೋಕನ ನಡೆಸುವುದಕ್ಕಾಗಿ ಐಡಿಬಿಆರ್ಐ ಚೀಫ್ ಎಂಜಿನಿಯರ್ ಕೆ.ಎಚ್. ಶಂಸುದ್ದೀನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಸಂದರ್ಶಿಸಿದೆ. ನಾಲ್ಕು ತಿಂಗಳಿಂದ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಚೀಫ್ ಎಂಜಿನಿಯರ್ ತಿಳಿಸಿದ್ದಾರೆ.
ತಡೆಗೋಡೆ ನಿರ್ಮಿಸುವುದಕ್ಕಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಈ ಮೊದಲೇ ಶಾಸಕ ಕೆ. ಕುಂಞಿರಾಮನ್ ಅವರ ಗಮನಕ್ಕೆ ತರಲಾಗಿತ್ತು. ಇದರ ಆಧಾರದಲ್ಲಿ ಎತ್ತರ ಕಡಿಮೆಗೊಳಿಸುವ ವಿಷಯವೂ ಪರಿಗಣನೆಯಲ್ಲಿರುವುದಾಗಿ ತಿಳಿಸಿದರು. ಪ್ರಸ್ತುತ 16 ಮೀಟರ್ ಎತ್ತರದಲ್ಲಿ ಅಣೆಕಟ್ಟು ನಿರ್ಮಿಸಲಾಗುವುದರಿಂದ ಪರಿಸರ ನಿವಾಸಿಗಳಿಗೆ ಫಲ ಲಭಿಸದು ಎಂಬ ವಾಸ್ತವ ಅಧಿಕಾರಿಗಳಿಗೆ ಮನದಟ್ಟಾಗಿದೆ. ಚೀಫ್ ಎಂಜಿನಿಯರ್ ಅಲ್ಲದೆ ಕಿರು ನೀರಾವರಿ ಇಲಾಖೆ ಸುಪರಿಂಟೆಂಡೆಂಟ್ ಎಂಜಿನಿಯರ್ ನಿರ್ದೇಶಕಿ ಸಿ.ಕೆ.ಗೀತಾ, ಡೆಪ್ಯುಟಿ ಡೈರೆಕ್ಟರ್ ಸುಜಾ ಗ್ರೇಷ್ಯಲ್, ಅಸಿಸ್ಟೆಂಟ್ ಡೈರೆಕ್ಟರ್ಗಳಾದ ಬಿ.ಸೀನ, ಟಿ.ಎಂ. ಶ್ರುತಿ, ಮೆಕ್ಯಾನಿಕಲ್ ವಿಭಾಗ ಅಸಿಸ್ಟೆಂಟ್ ಎಂಜಿನಿಯರ್ ಸಂಜೀವ್ ತಂಡದಲ್ಲಿದ್ದರು.