ಜೋಡುಪಾಲ ಸಂತ್ರಸ್ತರಿಗೆ ಮಾದರಿ ಮನೆ: ಖಾದರ್
Team Udayavani, Sep 30, 2018, 4:08 PM IST
ಅರಂತೋಡು: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಿರಾಶ್ರಿತರಾಗಿರುವ ಜೋಡುಪಾಲ, ಮೊಣ್ಣಂಗೇರಿಯ ಸಂತ್ರಸ್ತರಿಗೆ ಗೃಹ ಮಂಡಳಿಯಿಂದ ಮಾದರಿ ಮನೆ ನಿರ್ಮಾಣ ನಡೆಯುತ್ತಿದ್ದು. 10 ದಿನಗಳಲ್ಲಿ ಮಡಿಕೇರಿಯ ಎರಡು ಕಡೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಕಲ್ಲುಗುಂಡಿ, ಕೊಡಗು ಸಂಪಾಜೆಯ ಪ್ರಕೃತಿ ದುರಂತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾದರಿ ಮನೆಗಳು ಸಂತ್ರಸ್ತರಿಗೆ ಇಷ್ಟವಾದರೆ ಅದೇ ರೀತಿಯ ಮತ್ತಷ್ಟು ಮನೆಗಳನ್ನು ಕಟ್ಟಿಸಿಕೊಡಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಗೃಹ ಮಂಡಳಿಗೆ ಆದೇಶ ನೀಡಿದ್ದಾರೆ ಎಂದರು.
ಪರಿಹಾರ ಕೇಂದ್ರದಲ್ಲಿ 164 ಮಂದಿ
ಸಂತ್ರಸ್ತ 51 ಕುಟುಂಬಗಳ ಸುಮಾರು 164 ಮಂದಿ ಈಗಲೂ ಪರಿಹಾರ ಕೇಂದ್ರಗಳಲ್ಲಿದ್ದಾರೆ. ಬಸ್ ಪಾಸ್ ವಿತರಣೆಯಲ್ಲಿ ಕೆಲವರಿಗೆ ಅನ್ಯಾಯ ಆಗಿದೆ ಎಂಬ ಕೂಗು ಕೇಳಿ ಬಂದಿದೆ. ಜಿಲ್ಲಾಧಿಕಾರಿ ಮತ್ತು ಕೆಎಸ್ಆರ್ಟಿಸಿ ಡಿಸಿಯವರೊಂದಿಗೆ ಮಾತನಾಡಿ ಸರಿಪಡಿಸುವೆ. ಸಂಪಾಜೆ – ಮಡಿಕೇರಿ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ತ್ವರಿತಗತಿಯಲ್ಲಿ ಹೆದ್ದಾರಿ ಕೆಲಸ ಮುಗಿಸಲು ಸೂಚನೆ ನೀಡಲಾಗಿದೆ. ತಿಂಗಳ ಒಳಗಾಗಿ ಮಡಿಕೇರಿ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಭರವಸೆ ನೀಡಿದರು.
ಕೆಪಿಸಿಸಿ ಕಾರ್ಯದರ್ಶಿಗಳಾದ ವೆಂಕಪ್ಪ ಗೌಡ, ಟಿ.ಎಂ. ಶಹೀದ್, ವಕ್ಫ್ ಮಂಡಳಿ ನಿರ್ದೇಶಕ ಸಂಶುದ್ದೀನ್, ರಫೀಕ್ ಪಡು, ಯೂಸೂಫ್ ಅಂಜಿಕಾರ್ ಉಪಸ್ಥಿತರಿದ್ದರು.
ಸಂತ್ರಸ್ತರ ಕೇಂದ್ರಕ್ಕೆ ಖಾದರ್ ಭೇಟಿ
ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಸಂತ್ರಸ್ತರು ಸಹಕಾರಿ ಸಂಘಗಳಲ್ಲಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿರುವ ಸಾಲ ಮನ್ನಾ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಕಲ್ಲುಗುಂಡಿ ಶಾಲೆಯ ಸಂತ್ರಸ್ತರಿಗೆ ಗ್ಯಾಸ್ ಒದಗಿಸು ವಂತೆ ಸೂಚಿಸಿದರು.
ಸಂಪಾಜೆ ಸಂತ್ರಸ್ತರ ಕೇಂದ್ರದಲ್ಲಿ ಸಂತ್ರಸ್ತರ ಪರವಾಗಿ ಪ್ರಭಾಕರ ಭಟ್ಟ ಲೈನ್ಕಜೆ ಮಾತನಾಡಿ, ನಾವು ಮನೆ ಕಳೆದುಕೊಂಡಿದ್ದೇವೆ. ಸರಕಾರದ ವತಿಯಿಂದ ಸಂತ್ರಸ್ತರಿಗೆ 50 ಸಾವಿರ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿದಿದ್ದೇವೆ. ಆದರೆ ಪರಿಹಾರ ಕೈ ಸೇರಿಲ್ಲ. ಶಾಶ್ವತ ಯೋಜನೆಗಳನ್ನು ನೀಡಬೇಕು ಎಂದರು. ಸಹಕಾರಿ ಸಂಘದ ಸಾಲ ಮನ್ನಾದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಧ.ಗ್ರಾ.ಯೋಜನೆಯ ಸಾಲದ ಬಗ್ಗೆ ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತನಾಡುತ್ತೇನೆ ಎಂದು ಖಾದರ್ ತಿಳಿಸಿದರು.