ಜಲ ವಿಮಾನ : ಜಲ ವಿಮಾನ ಮಹತ್ವಾಕಾಂಕ್ಷಿ ಯೋಜನೆಗೆ ಎಳ್ಳುನೀರು
Team Udayavani, Jan 24, 2020, 6:55 AM IST
ಕಾಸರಗೋಡು : ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರನ್ನು ಆಕರ್ಷಿ ಸುವ ಮತ್ತು ಆ ಮೂಲಕ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಕೇರಳ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಾಕಾರ ಗೊಳಿಸಲು ಯೋಜಿಸಿದ “ಸೀ ಪ್ಲೇನ್'(ಜಲ ವಿಮಾನ) ಯೋಜನೆಯನ್ನು ಕೈಬಿಟ್ಟಿದೆ.
ಪ್ರವಾಸೋದ್ಯಮ ಇಲಾಖೆ ಹೊಳೆ ಗಳಲ್ಲೂ, ಹಿನ್ನೀರಿನಲ್ಲೂ ಆರಂಭಿಸಲು ಉದ್ದೇಶಿಸಿದ ಜಲ ವಿಮಾನ ಯೋಜನೆ ಯನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಈ ಸಂಬಂಧ ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಫ್ಲೋಟಿಂಗ್ ಜೆಟ್ಟಿಗಳನ್ನು ಹರಾಜು ಮಾಡಲು ತೀರ್ಮಾನಿಸಿದೆ. ಎರಡು ವರ್ಷಗಳಿಂದ ಹೊಳೆಗಳಲ್ಲಿ ಮತ್ತು ಹಿನ್ನೀರಿನಲ್ಲಿ ತೇಲಾಡುತ್ತಿದ್ದ “ಫ್ಲೋಟಿಂಗ್ ಜೆಟ್ಟಿಗಳು ಪ್ರದರ್ಶನ ವಸ್ತುಗಳಾಗಿ ದಿನಗಳನ್ನು ಕಳೆದವು. ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸಿದ ಫ್ಲೋಟಿಂಗ್ ಜೆಟ್ಟಿಯನ್ನು ಹೌಸ್ ಬೋಟ್ (ದೋಣಿ ಮನೆ) ಮಾಲಕರಿಗೆ ಹರಾಜು ಮೂಲಕ ಮಾರಾಟ ಮಾಡಲು ಜಿಲ್ಲಾ ಟೂರಿಸಂ ಪ್ರೊಮೋಶನ್ ಕೌನ್ಸಿಲ್ ನಿರ್ಧರಿಸಿದೆ.
ಕೇರಳದ ಕುಮರಗಂ, ಆಲಪ್ಪುಳ, ಕಾಸರಗೋಡು ಜಿಲ್ಲೆಯ ನೀಲೇಶ್ವರದ ಕೋಟ್ಟಪ್ಪುರಂ, ಬೇಕಲ ಮೊದಲಾದೆಡೆಗಳಲ್ಲಿ ಆರಂಭಿಸಲು ಉದ್ದೇಶಿಸಿದ ಜಲ ವಿಮಾನ ಯೋಜನೆಗೆ ಮೀನು ಕಾರ್ಮಿತರು ತೀವ್ರ ವಿರೋಧದಿಂದಾಗಿ ಈ ಯೋಜನೆಯನ್ನು ಕೈಬಿಡಲು ಪ್ರವಾಸೋದ್ಯಮಿ ಇಲಾಖೆ ನಿರ್ಧರಿಸಲು ಪ್ರಮುಖ ಕಾರಣವಾಗಿದೆ.
ಪ್ರವಾಸೋದ್ಯಮ ಇಲಾಖೆ ಕಣ್ಣೂರಿ ನಿಂದ ಕೋಟ್ಟಪ್ಪುರಕ್ಕೆ ಫ್ಲೋಟಿಂಗ್ ಜೆಟ್ಟಿಯನ್ನು ತಂದು ಜೋಡಿಸಿಡಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣದಿಂದ 12 ಮಂದಿ ಕುಳಿತುಕೊಂಡು ಪ್ರಯಾಣಿ ಸಬಹುದಾದ ಕಿರು ವಿಮಾನಗಳಲ್ಲಿ ಪ್ರವಾಸಿಗರನ್ನು ಕೋಟ್ಟಪ್ಪುರಕ್ಕೆ ತಂದು ಇಳಿಸಲು ಯೋಜಿಸಲಾಗಿತ್ತು. ಈ ಫ್ಲೋಟಿಂಗ್ ಜೆಟ್ಟಿಗಳಿಂದ ಹೊಳೆ ಹಾಗೂ ಹಿನ್ನೀರಿನಿಂದ ಪ್ರವಾಸಿಗರನ್ನು ದಡಕ್ಕೆ ತರಲು ಸಹಕಾರಿಯಾಗಿತ್ತು.
ಕುಮರಗಂನಲ್ಲಿ ಮೀನು ಕಾರ್ಮಿಕರು ಜಲ ವಿಮಾನ ಯೋಜನೆಯನ್ನು ತೀವ್ರ ವಾಗಿ ಪ್ರತಿಭಟಿಸಿದ್ದರು. ಈ ಯೋಜನೆ ಯಿಂದ ಮೀನಿನ ಸಂತತಿ ನಾಶವಾಗು ವುದಲ್ಲದೆ, ಮೀನು ಕಾರ್ಮಿಕರು ಜೀವನ ಮಾರ್ಗವನ್ನೇ ಕಳೆದುಕೊಳ್ಳಬೇಕಾದೀತು ಮತ್ತು ಹೊಳೆ ಹಾಗೂ ಹಿನ್ನೀರಿನಲ್ಲಿ ಮೀನುಗಾರಿಕೆ ಅಸಾಧ್ಯ ಎಂಬುದು ಮೀನು ಕಾರ್ಮಿಕರ ವಾದವಾಗಿತ್ತು. ಈ ಹಿಂದಿನ ಐಕ್ಯರಂಗ ಸರಕಾರ ಜಲ ವಿಮಾನ ಯೋಜನೆಗೆ ಮುನ್ನುಡಿ ಬರೆದಿತ್ತು. ಆದರೆ ಪ್ರಸ್ತುತ ಎಡರಂಗ ಸರಕಾರ ಮೀನು ಕಾರ್ಮಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲು ತೀರ್ಮಾನಿಸಿದೆ.
ಇದೇ ಸಂದರ್ಭದಲ್ಲಿ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದೆ ಮತ್ತು ಕಾಸರಗೋಡು ಜಿಲ್ಲೆಯ ಪೆರಿಯಾದಲ್ಲಿ ಕಿರು ವಿಮಾನಗಳನ್ನು ಇಳಿಸುವ “ಏರ್ ಸ್ಟ್ರಪ್’ ಆರಂಭಿಸಲು ಉದ್ದೇಶಿಸಿರುವುದರಿಂದ ಜಲ ವಿಮಾನದ ಅಗತ್ಯವಿಲ್ಲ ಎಂಬುದಾಗಿ ಪ್ರವಾಸೋದ್ಯಮ ಇಲಾಖೆ ತೀರ್ಮಾನಕ್ಕೆ ಬಂದಿದೆ. ಯಾವುದೇ ಕ್ಷಣದಲ್ಲೂ ವಾಪಸು ಮಾಡಬೇಕೆಂಬ ವ್ಯವಸ್ಥೆಯಲ್ಲಿ ಫ್ಲೋಟಿಂಗ್ ಜೆಟ್ಟಿಗಳನ್ನು ಡಿ.ಟಿ.ಪಿ.ಸಿ.ಗೆ ಹಸ್ತಾಂತರಿಸಲಾಗಿತ್ತು.
ಮಹತ್ವಾಕಾಂಕ್ಷೆಯ ಜಲ ವಿಮಾನ ಯೋಜನೆ
ಮಹತ್ವಾಕಾಂಕ್ಷೆಯ ಜಲ ವಿಮಾನ ಯೋಜನೆ ಸದ್ಯ ದೇಶದಲ್ಲೇ ಪ್ರಥಮವಾಗಿ ಮಹಾರಾಷ್ಟ್ರದಲ್ಲಿ ಮಾತ್ರವೇ ಚಾಲ್ತಿಯಲ್ಲಿದೆ. ಕಾಸರಗೋಡು ಜಿಲ್ಲೆಯ ಕೋಟ್ಟಪುರದಲ್ಲಿ ಉದ್ದೇಶಿಸಿದ ಜಲ ವಿಮಾನ ಯೋಜನೆಯ ಅಂಗವಾಗಿ ಫ್ಲೋಟಿಂಗ್ ನಿರ್ಮಿಸಲಾಗಿತ್ತು. ಆದರೆ ಈ ಯೋಜನೆಯನ್ನು ಕೈಬಿಟ್ಟಿರುವುದರಿಂದಾಗಿ ಕೆಲವು ಕಾಲ ಫ್ಲೋಟಿಂಗ್ ಜೆಟ್ಟಿ ಹಿನ್ನೀರಿನಲ್ಲಿ ಪ್ರದರ್ಶನ ವಸ್ತುವಾಗಿತ್ತು. ಯೋಜನೆಯನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಈ ಫ್ಲೋಟಿಂಗ್ ಜೆಟ್ಟಿಯ ಅಗತ್ಯವಿಲ್ಲವೆಂಬ ಕಾರಣದಿಂದ ಫ್ಲೋಟಿಂಗ್ ಜೆಟ್ಟಿಯನ್ನು ಹರಾಜು ಮಾಡಲಾಗಿದೆ. ಇದರಿಂದಾಗಿ ಡಿ.ಟಿ.ಪಿ.ಸಿ.ಗೆ ವರಮಾನ ಬರುವುದರಿಂದ ಜಿಲ್ಲಾಧಿಕಾರಿಗಳು ಫ್ಲೋಟಿಂಗ್ ಜೆಟ್ಟಿಯನ್ನು ಹರಾಜು ಮಾಡಲು ನಿರ್ದೇಶಿಸಿದ್ದರು.
– ಬಿಜು ರಾಘವನ್, ಕಾರ್ಯದರ್ಶಿ, ಕಾಸರಗೋಡು ಡಿ.ಟಿ.ಪಿ.ಸಿ.
ಫ್ಲೋಟಿಂಗ್ ಜೆಟ್ಟಿ
ಹೊಳೆ ಅಥವಾ ಹಿನ್ನೀರಿನಲ್ಲಿ ಪ್ರವಾ ಸಿಗರನ್ನು ಹೊತ್ತು ತರುವ ಜಲ ವಿಮಾನ ಲ್ಯಾಂಡ್ ಮಾಡುವ ಹಿನ್ನೀರಿನಿಂದ ದಡಕ್ಕೆ ತರಲು ಈ ಫ್ಲೋಟಿಂಗ್ ಜೆಟ್ಟಿಗಳನ್ನು ನಿರ್ಮಿಸಲಾಗಿತ್ತು. ಒಂದೊಂದು ಫ್ಲೋಟಿಂಗ್ ಜೆಟ್ಟಿಗಳಿಗೆ ಸುಮಾರು 80 ಸಾವಿರ ರೂ. ವೆಚ್ಚವಾಗಿದೆ. ಇದೀಗ ಜಲ ಯೋಜನೆಯನ್ನು ಕೈಬಿಟ್ಟಿರುವುದರಿಂದಾಗಿ ಫ್ಲೋಟಿಂಗ್ ಜೆಟ್ಟಿಗಳನ್ನು ಹರಾಜು ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ.