ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ
Team Udayavani, May 8, 2019, 7:17 PM IST
ಬದಿಯಡ್ಕ: ಬದಿಯಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ಚಿತ್ತರಂಜನ್ ಕಡಂದೇಲು, ಇವರ ಏಕವ್ಯಕ್ತಿ ಯಕ್ಷಗಾನ ವೀರ ಬಬ್ರುವಾಹನ ಪ್ರಸಂಗವನ್ನು ತನ್ನ ನಾಟ್ಯ ಹಾಗೂ ಅಭಿನಯ ಚಾತುರ್ಯದ ಮೂಲಕ ಪ್ರದರ್ಶಿಸಿದರು. ಸರಿ ಸುಮಾರು ಅರ್ಧ ಗಂಟೆಗಳ ಕಾಲ ವೀರ ಬಬ್ರುವಾಹನನ ವೀರತ್ವ ಹಾಗೂ ಶೂರತ್ವಗಳನ್ನು ತನ್ನ ನಾಟ್ಯ, ಮಾತುಗಾರಿಕೆ ಹಾಗೂ ದಿಂಗಿಣಗಳ ಮೂಲಕ ಪ್ರದರ್ಶಿಸಿ ಯಕ್ಷ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.
ಹಿಮ್ಮೇಳದಲ್ಲಿ ಭಾಗವತರಾಗಿ ಯುವಪ್ರತಿಭೆ ಸುಧೀಶ್ ಪಾಣಾಜೆ ಇವರು ಸಹಕರಿಸಿದರು. ಚೆಂಡೆಯಲ್ಲಿ ಹರೀಶ್ ಅಡೂರು ಹಾಗೂ ಮದ್ದಳೆಯಲ್ಲಿ ಶ್ರೀಧರ ಎಡಮಲೆ, ಕರ್ನಾಟಕ ಜಾನಪದ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದ ಜಯರಾಮ ಪಾಟಾಳಿ ಪಡುಮಲೆ ಅವರು ಸಹಕರಿಸಿದರು.
ಉತ್ತಮವಾದ ಹಿಮ್ಮೇಳದೊಂದಿಗೆ ಚಿತ್ತರಂಜನ್ನ ಅಭಿನಯವು ಉತ್ತಮವಾಗಿ ಮೂಡಿಬಂದು ಗಣ್ಯರ ಪ್ರಶಂಸೆಗೆ ಪಾತ್ರವಾಯಿತು.