ಕುಂಬಳೆಯಲ್ಲಿ ಕನ್ನಡಿಗರೊಂದಿಗೆ ಸಂವಾದ ಐಕ್ಯರಂಗ ಎಡರಂಗ ಅಭ್ಯರ್ಥಿಗಳು ಗೈರು
Team Udayavani, Oct 13, 2019, 5:32 AM IST
ಕುಂಬಳೆ : ಕನ್ನಡ ಹೋರಾಟ ಸಮಿತಿ ಕಾಸರಗೋಡು ಇದರ ವತಿಯಿಂದ ಕುಂಬಳೆಯ ಮಾಧವ ಪೈ ಸಭಾಭವನದಲ್ಲಿ ಜರಗಿದ ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಪ್ರಯುಕ್ತ ಕನ್ನಡಿಗರೊಂದಿಗೆ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಮುಖ ರಾಜಕೀಯ ಪಕ್ಷಗಳಾದ ಐಕ್ಯರಂಗ ಮತ್ತು ಎಡರಂಗಗಳ ಅಭ್ಯರ್ಥಿಗಳು ಮತ್ತು ಐವರು ಸ್ವತಂತ್ರ ಅಭ್ಯರ್ಥಿಗಳು ಗೈರು ಹಾಜರಾದರು.
ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಸಮಸ್ಯೆ ಮುಂದಿಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಮುಖ್ಯ ಚುನಾವಣಾ ಏಜಂಟ್ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಮತ್ತು ಪಕ್ಷೇತರ ಅಭ್ಯರ್ಥಿ ಜೋನ್ ಕ್ರಾಸ್ತಾ ಭಾಗವಹಿಸಿ ಮಾತನಾಡಿ ತಾವು ಗೆದ್ದಲ್ಲಿ ಕಾಸರಗೋಡಿನ ಕನ್ನಡಿಗರ ಜ್ವಲಂತ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಭರವಸೆ ನೀಡಿದರು.
ಕರ್ನಾಟಕ ಸಮಿತಿಯ ಅದ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯರು ಅಧ್ಯಕ್ಷತೆ ವಹಿಸಿದರು.ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕಾಧ್ಯಕ್ಷ ಎಸ್ವಿ ಭಟ್,ನಿವೃತ್ತ ಅಧ್ಯಾಪಕ ನಾರಾಯಣ ಗಟ್ಟಿ ಕುಂಬಳೆ ಉಪಸ್ಥಿತರಿದ್ದರು.
ಕನ್ನಡ ಹೋರಾಟ ಸಮಿತಿಯ ಕಾರ್ಯದರ್ಶಿ ಕೆ.ಭಾಸ್ಕರ ಕಾಸರಗೋಡು ಅವರು ಸ್ವಾಗತಿಸಿದರು.ಸತೀಶ್ ಕೂಡ್ಲು ಅವರು ವಂದಿಸಿದರು.