ರಾಷ್ಟ್ರೀಯ ಹೆದ್ದಾರಿಯಾಗುವುದು ಯಾವಾಗ ?
ವಿಟ್ಲ-ಅಡ್ಯನಡ್ಕ ಅಂತಾರಾಜ್ಯ ಹೆದ್ದಾರಿ ವಿಸ್ತರಣೆಗೆ ಬೇಡಿಕೆ
Team Udayavani, May 19, 2019, 6:10 AM IST
ವಿಟ್ಲ: ಅನೇಕ ವಾಹನ ಗಳು ದಿನನಿತ್ಯ ಸಂಚರಿಸುವ ಕಲ್ಲಡ್ಕ – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಕೇರಳದ ಭಾಗದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಕಳೆದ ಎಷ್ಟೋ ವರ್ಷಗಳಿಂದ ಈ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ವಿಟ್ಲ ಮತ್ತು ಕೇರಳದ ಗಡಿಭಾಗವಾಗಿರುವ ಅಡ್ಯನಡ್ಕ ವರೆಗಿನ ವ್ಯಾಪ್ತಿಯಲ್ಲಿ ರಸ್ತೆ ಕಿರಿದಾಗಿದ್ದು, ವಿಸ್ತರಣೆ ಅಗತ್ಯವಿದೆ. ಈ ಅಂತಾರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗುವುದು ಯಾವಾಗ ? ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಸುರಕ್ಷಿತವಲ್ಲ
ಕಲ್ಲಡ್ಕ – ಕಾಂಞಂಗಾಡು ಅಂತಾ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಲಿದೆ ಎಂಬ ಮಾತು 6 ತಿಂಗಳ ಹಿಂದೆಯೇ ಕೇಳಿಬರುತ್ತಿದೆ. ಕೇರಳದಲ್ಲಿ ಕಾಮಗಾರಿ ಆರಂಭವಾ ಗಿದೆ ಎಂದೂ ಮಾಹಿತಿ ಬಂದಿತ್ತು. ಆದರೆ ಕರ್ನಾಟಕದಲ್ಲಿ ಈ ಬಗ್ಗೆ ಸರ್ವೆಯನ್ನೂ ನಡೆಸಲಾಗಲಿಲ್ಲ ವೆಂದು ಸಂಬಂಧಪಟ್ಟವರು ತಿಳಿಸಿ ದ್ದರು. ಕಲ್ಲಡ್ಕ – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯು ಬೆಂಗಳೂರು- ಕಾಸರಗೋಡು ಸಂಚರಿಸಲು ಅತ್ಯಂತ ಹತ್ತಿರವಾದ ಮಾರ್ಗವಾಗಿದೆ. ಸರಕು ಸಾಗಾಟಕ್ಕೆ ಈ ಮಾರ್ಗದಲ್ಲಿ ಅನೇಕ ಲಾರಿಗಳೂ ಸಂಚರಿಸುತ್ತವೆ. ಆದರೆ ರಸ್ತೆ ಸುಸಜ್ಜಿತವಾಗಿಲ್ಲ. ಘನ ಲಾರಿಗಳು ಸಂಚರಿಸಿದರೆ ಇತರ ವಾಹನಗಳ ಸಂಚಾರಕ್ಕೆ ಬಹಳಷ್ಟು ಸಮಸ್ಯೆಯಾಗುತ್ತದೆ.
ಅಗಲ ಕಿರಿದಾಗಿರುವುದರಿಂದ ರಸ್ತೆ ಸುರಕ್ಷಿತವಾಗಿಲ್ಲ. ಇದೇ ಅಂತಾರಾಜ್ಯ ಹೆದ್ದಾರಿಯ ಕಲ್ಲಡ್ಕದಿಂದ ಸಾರಡ್ಕ ವರೆಗಿನ 22.40 ಕಿ.ಮೀ. ದೂರ ಕರ್ನಾಟಕದಲ್ಲಿದೆ. ಈ ರಸ್ತೆ ಬಂಟ್ವಾಳ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರ ವ್ಯಾಪ್ತಿಗೆ ಬರುತ್ತದೆ. ಬಂಟ್ವಾಳ ಭಾಗದ ಕಲ್ಲಡ್ಕದಿಂದ ಎರ್ಮೆಮಜಲು ತನಕದ 2 ಕಿ.ಮೀ. ದೂರ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ 7 ಮೀ. ವಿಸ್ತರಣೆಯಾಗಿದೆ. ಅದೇ ರೀತಿ ವೀರಕಂಭ ಮಜಿಓಣಿಯಲ್ಲಿ ರಸ್ತೆಗೆ ಅಡ್ಡಿಯಾಗಿದ್ದ ಬಂಡೆಯನ್ನು ತೆರವುಗೊಳಿಸಿ, 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಅಚ್ಚುಕಟ್ಟಾಗಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ
ಕಲ್ಲಡ್ಕ – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೂ ರಸ್ತೆಯನ್ನು ಸ್ವಾಧೀನಕ್ಕೆ ಪಡೆದುಕೊಂಡಿಲ್ಲ. ಡಿಪಿಆರ್ ಸಿದ್ಧಪಡಿಸಲು ಕೇಂದ್ರದ ಆದೇಶವಾಗಿದ್ದು, ಆ ವರದಿ ಬಳಿಕ ಹೆದ್ದಾರಿ ಪ್ರಾಧಿಕಾರ ಈ ರಸ್ತೆಗೆ ಅನುದಾನ ಬಿಡುಗಡೆ ಮಾಡಲಿದೆ. ಅಲ್ಲಿಯ ತನಕ ಲೋಕೋಪಯೋಗಿ ಇಲಾಖೆಯೇ ಈ ರಸ್ತೆಯ ಜವಾಬ್ದಾರಿಯನ್ನು ಹೊಂದಿದೆ.
ಕಲ್ಲಡ್ಕ ಸಾರಡ್ಕ ನಡುವಿನ 20 ಕಿ.ಮೀ. ವಿಸ್ತರಣೆ ಅತೀ ಅಗತ್ಯವಾಗಿದೆ. ಆದರೆ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ವರ್ಗಾವಣೆ ಆಗಲಿರುವುದರಿಂದ ಲೋಕೋಪಯೋಗಿ ಇಲಾಖೆಗೆ ದುರಸ್ತಿಗಾಗಿ ಮಾತ್ರ ಅನುದಾನ ಬರಲಿದೆ ಎನ್ನಲಾಗುತ್ತಿದೆ. ಆದುದರಿಂದ ಹೆಚ್ಚುವರಿ ಅನುದಾನವನ್ನು ಸರಕಾರ ನೀಡಿದಲ್ಲಿ ಮಾತ್ರ ವಿಸ್ತರಣೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ.
20 ಕಿ.ಮೀ. ದೂರ ಅಭಿವೃದ್ಧಿಯಾಗಬೇಕು
ಕೇರಳದ ಸಾರಡ್ಕ ಗಡಿಯಿಂದ ಅಡ್ಕಸ್ಥಳ ಸೇತುವೆ ತನಕ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದ್ದು, ಬದಿಯಡ್ಕ ವರೆಗೆ ಅಲ್ಲಲ್ಲಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆರಂಭ ಹಾಗೂ ಕೊನೆಯಲ್ಲಿ ಕಾಮಗಾರಿ ಪೂರ್ತಿಯಾಗಿ ರಸ್ತೆ ಅಗಲವಾಗಿದ್ದರೂ ಮಧ್ಯೆ ಸುಮಾರು 20 ಕಿ.ಮೀ. ದೂರ ರಸ್ತೆ ಕಿರಿದಾಗಿ ಉಳಿದಿದೆ. ಈ ಭಾಗವು ಅಪಘಾತ ಆಹ್ವಾನಿಸುತ್ತಿದೆ.
ರಸ್ತೆ ಕುಸಿಯುವ ಭೀತಿ
ಸಾರಡ್ಕ ಗಡಿಯಲ್ಲಿ ತೊರೆಯ ಬದಿಯಲ್ಲಿ ಹೆದ್ದಾರಿ ಹಾದು ಹೋಗುತ್ತಿದ್ದು, ಕೊರೆತಕ್ಕೊಳಗಾಗಿದೆ. ಘನ ಲಾರಿಗಳ ಸಂಚಾರ ಸಂದರ್ಭ ರಸ್ತೆಯ ಭೂಭಾಗ ಕುಸಿತಕೊಳ್ಳಗಾಗುವ ಭೀತಿಯಿದೆ. ಇದೇ ರೀತಿ ಸಾರಡ್ಕ ಚೆಕ್ಪೋಸ್ಟ್ ಸಮೀಪವೂ ಕುಸಿತ ಭೀತಿ ಇದೆ.
ತಾತ್ವಿಕ ಒಪ್ಪಿಗೆ ಸಿಕ್ಕಿದೆ
ವಿಟ್ಲ-ಅಡ್ಯನಡ್ಕ ಅಂತಾರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿ ಯಾಗುವುದಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಯಾವುದೇ ಮುಂದಿನ ಬೆಳವಣಿಗೆಗಳು ಲೋಕೋಪಯೋಗಿ ಇಲಾಖೆಗೆ ಬರುವುದಿಲ್ಲ. ಅದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಸೇರಿದ್ದು. ಆರಂಭದಲ್ಲಿ ಸರ್ವೆ ಆಗಬೇಕು. ಆ ಮೂಲಕ ಮುಂದಿನ ಅಭಿವೃದ್ಧಿ ಕಾರ್ಯಗಳು ಚಾಲನೆಗೆ ಬರುತ್ತವೆ.
– ಉಮೇಶ್ ಭಟ್ ಕಾರ್ಯನಿರ್ವಾಹಕ ಎಂಜಿನಿಯರ್, ಪಿಡಬುÉ éಡಿ, ಬಂಟ್ವಾಳ
- ಉದಯ ಶಂಕರ್ ನೀರ್ಪಾಜೆ