ಜೋಡುಪಾಲದಲ್ಲಿ ಬೀಡುಬಿಟ್ಟ ಕಾಡಾನೆ ಹಿಂಡು
ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಅಸಮಾಧಾನ
Team Udayavani, Oct 25, 2019, 12:53 AM IST
ಜೋಡುಪಾಲಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸದೆ ಮರಳಿದ ಅಧಿಕಾರಿಗಳು.
ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಮಡಿಕೇರಿಯ ಜೋಡುಪಾಲ ಗ್ರಾಮದಲ್ಲಿ ಹತ್ತು ದಿನಗಳಿಂದ ಕಾಡಾನೆಗಳ ಉಪಟಳ ಮಿತಿ ಮೀರಿದೆ. ನಾಲ್ಕೈದು ಕಾಡಾನೆಗಳ ಹಿಂಡು ಗ್ರಾಮದ ಬಹುತೇಕ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅ. 17ರಂದೇ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡಿದ ಗ್ರಾಮಸ್ಥರು ಆನೆಗಳನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದರು. ಆದರೆ ಅ. 20ಕ್ಕೆ ಗ್ರಾಮಕ್ಕೆ ಭೇಟಿ ನೀಡಿದ ಡಿಆರ್ಎಫ್ಒ ಹಾಗೂ ಸಿಬಂದಿ ವರ್ಗ ಕಾಡಾನೆ ವಿರುದ್ಧ ಕಾರ್ಯಾಚರಣೆ ನಡೆಸದೆ ಮಳೆ ಬಂತು ಎನ್ನುವ ನೆಪವೊಡ್ಡಿ ಮರಳಿದ್ದರು. ಸ್ಥಳೀಯರು ಜೀವ ಭಯದಲ್ಲಿದ್ದರೂ ಕನಿಷ್ಠ ಪಟಾಕಿಯನ್ನು ಕೂಡ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇಂದು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಾಡಾನೆಗಳು ಬಹುತೇಕ ಎಲ್ಲ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಪಡಿಸಿವೆ. ಕಾಫಿ ಹಾಗೂ ಬಾಳೆ ಕೃಷಿ ಸಂಪೂರ್ಣವಾಗಿ ಹಾನಿಗೀಡಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಲಕ್ಷಾಂತರ ರೂ. ನಷ್ಟವಾಗಿದೆ ಎಂದು ತಿಳಿಸಿರುವ ಸ್ಥಳೀಯರು, ಅರಣ್ಯ ಇಲಾಖೆ ಜೀವಹಾನಿ ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮನವಿ ನೀಡುವ ಸಂದರ್ಭ ಗ್ರಾಮದ ಪ್ರಮುಖರು ಉಪಸ್ಥಿರಿದ್ದರು.