ರಾಜ್ಯ ಚುನಾವಣಾ ಅಧಿಕಾರಿಗೆ ವಿಶಿಷ್ಟ ದೂರು
Team Udayavani, Apr 3, 2018, 6:00 AM IST
ಮಂಗಳೂರು: ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕಿನ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿದ್ದರೂ ಭಿಕ್ಷುಕರಿಗೆ ಮಾತ್ರ ಮತದಾನದ ಹಕ್ಕು ಬಹುತೇಕ ಭಾಗ ಸಿಕ್ಕಿಲ್ಲ. ಹೀಗಾಗಿ ಭಿಕ್ಷುಕರಿಗೆ ಮತದಾನದ ಹಕ್ಕು ನೀಡುವ ವರೆಗೂ ಮತದಾನ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಬೇಕು! ಹೀಗೊಂದು ಮನವಿಯನ್ನು ಮಂಗಳೂರಿನ ಸಾಮಾಜಿಕ ಹೋರಾಟಗಾರರೊರ್ವರು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಸಲ್ಲಿಸಿದ್ದಾರೆ.
ಮಂಗಳೂರಿನ “ದಾರಿ’ ಸಂಘಟನೆಯ ಸಂಚಾಲಕ ರವಿ ಬಂಗೇರ ಅವರು ಈ ಕುರಿತ ವಿಭಿನ್ನ ಮನವಿಯನ್ನು ಚುನಾವಣಾಧಿಕಾರಿಯವರಿಗೆ ಇ-ಮೇಲ್ ಮೂಲಕ ಸೋಮವಾರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಶೇ. 5ರಷ್ಟು ಪ್ರಜೆಗಳು ಭಿಕ್ಷೆ ಬೇಡುತ್ತಿದ್ದು, ಎಲ್ಲೆಂದರಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಕೆಲವರು ಕುಟುಂಬವಿಲ್ಲದೆ ಪುನರ್ವಸತಿ ಕೇಂದ್ರದಲ್ಲಿ ಅನಾಥರಾಗಿದ್ದಾರೆ. ಅವರ್ಯಾರಿಗೂ ಮತ ದಾನದ ಅವಕಾಶ ದೊರೆಯುತ್ತಿಲ್ಲ. ದೇಶದ ಪ್ರತಿ ಯೊಬ್ಬ ನಾಗರಿಕನಿಗೂ ಮತದಾನ ಮಾಡಲು ಹಕ್ಕು ಇರುವಾಗ ಭಿಕ್ಷುಕರಿಗೂ ಮತದಾನದ ಹಕ್ಕು ನೀಡುವ ವರೆಗೆ ಮತದಾನ ಸ್ಥಗಿತಗೊಳಿಸಬೇಕು ಎಂದವರು ಮನವಿಯಲ್ಲಿ ಉಲ್ಲೇಖೀಸಿದ್ದಾರೆ.