ನೀತಿಸಂಹಿತೆ ಉಲ್ಲಂಘಿಸಿ ಪುಸ್ತಕ ಹಂಚಿಕೆ: ಬಿಜೆಪಿ ದೂರು
Team Udayavani, Apr 18, 2019, 6:43 AM IST
ಮಂಗಳೂರು: ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಸುಳ್ಳು ಆರೋಪದ ಪುಸ್ತಕಗಳನ್ನು ಚುನಾವಣ ನೀತಿ ಸಂಹಿತೆಗೆ ವಿರುದ್ಧವಾಗಿ ಮುದ್ರಿಸಿ ಹಂಚಲಾಗಿದೆ ಎಂದು ಆರೋಪಿಸಿ ದ.ಕ. ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ವಿರುದ್ಧ ದ.ಕ.ಬಿಜೆಪಿ ಕಾನೂನು ಘಟಕ ಚುನಾವಣಾಧಿಕಾರಿಗೆ ಬುಧವಾರ ದೂರು ನೀಡಿದೆ.
ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ವಿಮಾನದ ಬೆಲೆಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಮತ್ತು ಇಲ್ಲಿ ಅವ್ಯವಹಾರ ಕಂಡು ಬಂದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರೋಪ ಹೊರಿಸಿ ಪುಸ್ತಕವನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ ಸೆಂಥಿಲ್ ಅವರಿಗೆ ದೂರು ಸಲ್ಲಿಸಿದ ನಿಯೋಗದಲ್ಲಿ ವಕೀಲರಾದ ಸುಧಾಕರ ಜೋಶಿ, ಸಂತೋಷ್ ನಾಯಕ್ ಮತ್ತು ಪುರಂದರ ಶೆಟ್ಟಿ ಇದ್ದರು.