ಉಕ್ಕಿ ಹರಿದ ಗುರುಪುರ ನದಿ;ಮರವೂರು ಬಳಿ 7ಮನೆ, ಅದ್ಯಪಾಡಿ ಕುದ್ರುವಿನ 8ಮನೆಗಳಿಗೆ ನೀರು
Team Udayavani, Aug 10, 2019, 3:55 PM IST
ಬಜಪೆ : ಸತತ ಮಳೆ ಹಾಗೂ ಗಾಳಿಯಿಂದಾಗಿ ಗುರುಪುರ(ಪಾಲ್ಗುಣಿ)ನದಿ ಉಕ್ಕಿ ಹರಿದು ಪ್ರವಾಹದಿಂದಾಗಿ ಬಯಲು ಪ್ರದೇಶಗಳಿಗೆ ನೀರು ನುಗ್ಗಿದೆ. ನದಿಯ ನೀರು ಮಳವೂರು ವೆಂಟಡ್ ಡ್ಯಾಂನ ಮೇಲಿಂದ ಹರಿದು ಬಂದಿದ್ದು, ವೆಂಟಡ್ ಡ್ಯಾಂ ನಲ್ಲಿ ಸೌದೆಗಳು ಸಿಲುಕಿಕೊಂಡಿದೆ. ನದಿಯ ನೀರು ಸರಾಗವಾಗಿ ಹೋಗಲು ತಡೆಯಾಗಿದೆ.
ಪ್ರವಾಹದಿಂದಾಗಿ ನದಿಯ ಸಮೀಪದ ಮರವೂರು ರೈಲ್ವೆ ಸೇತುವೆಯ ಬಳಿಯ7ಮನೆಗಳಿಗೆ ನೀರು ನುಗ್ಗಿದೆ.ಪ್ರವಾಹ ಹೆಚ್ಚುತ್ತಿದ್ದು ಇದರಿಂದಾಗಿ ಶನಿವಾರದಂದು ಅ ಮನೆಯವರು ಅಲ್ಲಿಂದ ಅವರ ಸಂಬಂಧಿಕರ ಮನೆಗೆ ಹೋಗಿದ್ದಾರೆ.
ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಕೊಪ್ಪಳದ ಉಮಾವತಿ ಎಂಬವರ ಮನೆಗೆ ಗುಡ್ಡ ಜರಿದು ಮನೆಗೆ ಭಾರೀ ಹಾನಿಯಾಗಿದೆ.ಅಪಾಯವಿರುವ ಕಾರಣ ಅವರನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ.
ಅದ್ಯಪಾಡಿ ಕುದ್ರುವಿನ 8 ಮನೆಗಳು ಅಪಾಯ ಸ್ಥಿತಿಯಲ್ಲಿದೆ. ಪ್ರವಾಹ ಹೆಚ್ಚಾದಲ್ಲಿ ಅವರು ಅಲ್ಲಿಂದ ತೆರಳಬೇಕಾಗಿ ಬರುವುದರಿಂದ ದೊಡ್ಡ ದೋಣಿಯ ಅವಶ್ಯಕತೆ ಇದ್ದು ಈ ಬಗ್ಗೆ ಈಗಾಗಲೇ ತಹಶೀಲ್ದಾರಿಗೆ ತಿಳಿಸಲಾಗಿದೆ.
ಗುರುಪುರ, ಫಲ್ಗುಣಿ ನದಿ ಪಾತ್ರದ ನಿವಾಸಿಗಳು ಸ್ಥಳ ತೆರವಿಗೆ ಸೂಚನೆ
ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೇತ್ರಾವತಿ ನದಿ ಪಾತ್ರದ ನಿವಾಸಿಗಳನ್ನು ತೆರವಿಗೆ ಸೂಚಿಸಿದ ಬೆನ್ನಲ್ಲೇ ಈಗ ದ.ಕ. ಜಿಲ್ಲಾಧಿಕಾರಿ ಗುರುಪುರ, ಫಲ್ಗುಣಿ ನದಿ ಪಾತ್ರದ ಜನರೂ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ಈಗಾಗಲೇ ಈ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭೀತಿ ಮೂಡಿಸಿದೆ. ಆದ್ದರಿಂದ ತುರ್ತು ಆದ್ಯತೆ ಮೇರೆಗೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಕೆಲಸ ಮಾಡುತ್ತಿದ್ದು ತುರ್ತು ಅಗತ್ಯ ಬಿದ್ದಲ್ಲಿ 1077 ಟೋಲ್ ಫ್ರೀ ನಂಬರ್ಗೆ ಕರೆ ಮಾಡುವಂತೆ ಸೂಚಿಸಿದೆ.