ಕರಾವಳಿಯ ಆರ್ಥಿಕ ಹೆಬ್ಟಾಗಿಲಿನಲ್ಲಿ ಹೊಂಡ ಗುಂಡಿಗಳ ನರಕ ದರ್ಶನ!
Team Udayavani, Jun 16, 2018, 4:37 PM IST
ಮಹಾನಗರ : ರಾಷ್ಟ್ರ, ರಾಜ್ಯ ಮಟ್ಟದ ಉದ್ದಿಮೆಗಳನ್ನು ಹೊಂದಿರುವ ಮಂಗಳೂರು ವ್ಯಾಪ್ತಿಯ ಬೈಕಂಪಾಡಿ ಹಾಗೂ ಎಂಆರ್ ಪಿಎಲ್ ಪ್ರದೇಶದ ಸಂಪರ್ಕ ರಸ್ತೆ ಹೊಂಡ ಗುಂಡಿಗಳಿಂದ ತುಂಬಿದ್ದು, ಸಂಚಾರವೇ ಇಲ್ಲಿ ದುಸ್ತರವಾಗಿದೆ. ‘ಕರಾವಳಿಯ ಆರ್ಥಿಕ ಹೆಬ್ಟಾಗಿಲು’ ಎಂದು ಕರೆಸಿಕೊಳ್ಳಲು ಕಾರಣವಾಗಿರುವ ಉದ್ಯಮ ಕ್ಷೇತ್ರದ ಈ ಸ್ಥಳದಲ್ಲಿರುವ ಒಂದೊಂದು ಒಳರಸ್ತೆಗಳು ತೀರಾ ದಯನೀಯ ಪರಿಸ್ಥಿತಿಯಲ್ಲಿದೆ. ಮಳೆಗಾಲ ಶುರುವಾಗಿ ಕೆಲವೇ ದಿನಗಳಾಗುವಾಗಲೇ ಈ ಪರಿಸ್ಥಿತಿಯಾದರೆ ಮುಂದೆ ಇಲ್ಲಿನ ರಸ್ತೆಯ ಕಥೆ ಹೇಗಾಗಬಹುದು ಎಂಬ ಕುತೂಹಲ ಈಗ ಮೂಡಿದೆ.
ಬೈಕಂಪಾಡಿಯ ಕೈಗಾರಿಕಾ ಪ್ರದೇಶ, ಸುರತ್ಕಲ್ ಕಾನದಿಂದ ಎಂಆರ್ಪಿಎಲ್ ಕಾರ್ಗೊಗೇಟ್, ಅಲ್ಲಿಂದ ಜನತಾ ಕಾಲನಿ ಕ್ರಾಸ್ ರಸ್ತೆ, ಕೂಳೂರು ಸೇತುವೆಯಿಂದ ಬಲಭಾಗದಲ್ಲಿ ಎಸ್ಇಝಡ್ ರಸ್ತೆ ಸೇರಿದಂತೆ ಎಲ್ಲ ಉದ್ದಿಮೆ ಸಂಪರ್ಕ ರಸ್ತೆಗಳು ಇದೀಗ ಹೊಂಡ ಗುಂಡಿಗಳಾಗಿ ಬದಲಾಗಿವೆ. ರಸ್ತೆಯು ತೀರಾ ಹದಗೆಟ್ಟಿರುವ ಬಗ್ಗೆ ಬಾಳ ಗ್ರಾ.ಪಂ. ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ವಾಹನ ಚಾಲಕರು ಈ ರಸ್ತೆಯಲ್ಲಿ ನಿತ್ಯ ಸರ್ಕಸ್ ಮಾಡಬೇಕಾದ ಅನಿವಾರ್ಯ. ರಸ್ತೆ ರಿಪೇರಿ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೆ, ಎಂಆರ್ಪಿಎಲ್ ವಾಹನಗಳು ಇಲ್ಲಿ ಓಡುತ್ತಿವೆ. ಹೀಗಾಗಿ ಅವರೇ ಇದನ್ನು ಸರಿಪಡಿಸಬೇಕು ಎಂಬ ಉತ್ತರ ಬರುತ್ತಿದೆ.
ಘನ ವಾಹನ ಸಂಚಾರದಿಂದ ಹಾಳಾದ ರಸ್ತೆ
ರಾಷ್ಟ್ರೀಯ ಹೆದ್ದಾರಿ ಕೊಟ್ಟಾರದಿಂದ ಸುರತ್ಕಲ್ವರೆಗೆ ತೆರಳುವ ರಸ್ತೆಗಳು ಹೊಂಡ ಗುಂಡಿಗಳಾಗಿ ಪರಿಣಮಿಸಿವೆ. ಕಾನದಿಂದ ಎಂಆರ್ಪಿಎಲ್ ಕಾರ್ಗೋಗೇಟ್ವರೆಗಿನ ರಸ್ತೆಗಳದ್ದು ಕೂಡ ಇದೇ ಪರಿಸ್ಥಿತಿ. ಇತ್ತೀಚೆಗೆ ಈ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಆದರೆ, ಬೃಹತ್ ಗಾತ್ರದ ಟ್ಯಾಂಕರ್ಗಳು ಪ್ರತಿನಿತ್ಯ ಓಡಾಡುವವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಸೆಪ್ಟಂಬರ್ನಲ್ಲಿ ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳ ಹೋರಾಟಕ್ಕೆ ಮಣಿದು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಕೆಲವು ಕಡೆಗಳಲ್ಲಿ ಪ್ಯಾಚ್ ವರ್ಕ್ ಮಾಡಲಾಗಿತ್ತು. ಆದರೆ ಈಗ ಎಲ್ಲ ಕಿತ್ತು ಹೋಗಿದೆ.
ನೆಮ್ಮದಿಯ ವಿಚಾರ
ಒಂದು ನೆಮ್ಮದಿಯ ವಿಚಾರವೆಂದರೆ ಕುಲಗೆಟ್ಟ ರಸ್ತೆಯಾಗಿ ಪರಿವರ್ತಿತವಾಗಿದ್ದ ಬೈಕಂಪಾಡಿ ಕೈಗಾರಿಕಾ ವಲಯದ ರಸ್ತೆಯ ಕೆಲವು ಭಾಗಗಳನ್ನು ಮಾತ್ರ ಈಗಾಗಲೇ ಮೇಲ್ದರ್ಜೆಗೇರಿಸಲಾಗಿದೆ. ಬೈಕಂಪಾಡಿ ಕೈಗಾರಿಕಾ ವಲಯದ ಸುಮಾರು 3.2 ಕಿ.ಮೀ.ವ್ಯಾಪ್ತಿಯಲ್ಲಿ 7.5 ಮೀ. ಅಗಲದ ಕಾಂಕ್ರೀಟ್ ರಸ್ತೆ ಕಾಮಗಾರಿ ಸುಮಾರು 10 ಕೋ.ರೂ. ವೆಚ್ಚದಲ್ಲಿ ನಡೆದಿದೆ. ಕೆಐಎಡಿಬಿ ವತಿಯಿಂದ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ರಾಜ್ಯದ ಮೊದಲ ಪ್ರತಿಷ್ಠಿತ ಕಾಂಕ್ರೀಟ್ ರಸ್ತೆ ಎಂಬ ಹಿರಿಮೆ ಈ ರಸ್ತೆಗಿದೆ.
ಇದೇ ವ್ಯಾಪ್ತಿಯ ಇನ್ನುಳಿದ ರಸ್ತೆಗಳ ಪರಿಸ್ಥಿತಿ ಭಾರೀ ಬಿಗಡಾಯಿಸಿದೆ. ರಸ್ತೆ ಹೊಂಡಾ ಗುಂಡಿಯಿಂದ ಕೈಗಾರಿಕೆಗಳ ವಾಹನಗಳು ಕೂಡ ನಿತ್ಯ ರಿಪೇರಿಗೆ ನಿಲ್ಲುವಂತಾಗಿದೆ. ಸಾರ್ವಜನಿಕರು ಕೂಡ ಈ ರಸ್ತೆಯಲ್ಲಿ ಸರ್ಕಸ್ ಮಾಡಿ ಸಂಚರಿಸಬೇಕಾಗಿದೆ. ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಬಾಕಿಯಾಗಿರುವ ಎಲ್ಲ ರಸ್ತೆಗಳನ್ನು ಕೂಡ ವಾಹನಗಳ ಸಾಮರ್ಥ್ಯದ ಆಧಾರದಲ್ಲಿ ಮೇಲ್ದರ್ಜೆಗೇರಿಸುವ ಸಂಬಂಧ 20 ಕೋ.ರೂ.ಗಳ ಪ್ರಸ್ತಾವನೆಯನ್ನು ಕೆನರಾ ಸಣ್ಣ ಕೈಗಾರಿಕಾ ಸಂಘಗಳ ನೇತೃತ್ವದಲ್ಲಿ ಸರಕಾರಕ್ಕೆ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ನಡೆದಿದೆ. ಈ ಬಗ್ಗೆ ಸರಕಾರ ಗಮನಹರಿಸಬೇಕಿದೆ.
ದಿನಕ್ಕೆ 13,000 ವಾಹನಗಳ ಸಂಚಾರ…!
ಸಮೀಕ್ಷೆಯೊಂದರ ಪ್ರಕಾರ, ಬೈಕಂಪಾಡಿ ಕೈಗಾರಿಕಾ ವಲಯದ ಹೆದ್ದಾರಿ ಪಕ್ಕದಿಂದ ಜೋಕಟ್ಟೆ ಕ್ರಾಸ್ ರಸ್ತೆ, ದೀಪಕ್ ಪೆಟ್ರೋಲ್ ಪಂಪ್ ಮೂಲಕದ ರಸ್ತೆ, ಎಂಆರ್ಪಿಎಲ್ ಒಡಿಸಿ ರಸ್ತೆ ಹಾಗೂ ಜೋಕಟ್ಟೆಯಿಂದ ಪ್ರವೇಶವಾಗುವ ರಸ್ತೆ ಸೇರಿದಂತೆ ಒಟ್ಟು 4 ರಸ್ತೆಗಳಲ್ಲಿ ಪ್ರತೀ ದಿನ 13,000 ವಾಹನಗಳು ಸಂಚರಿಸುತ್ತದೆ. ಇದರ ಪೈಕಿ 3,500 ಘನ ವಾಹನಗಳೇ ಇಲ್ಲಿ ನಿತ್ಯ ಸಂಚರಿಸುತ್ತಿದೆ. ಈಗ ಬೈಕಂಪಾಡಿ ವಲಯದಲ್ಲಿ ಸುಮಾರು 1,000ದಷ್ಟು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ.
ಸಂಚಾರ ದುಸ್ತರ
ಸುರತ್ಕಲ್-ಎಂಆರ್ಪಿಎಲ್ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಾಗಿ ಪರಿವರ್ತನೆಗೊಂಡಿದ್ದು, ವಾಹನ ಸಂಚಾರ ಇಲ್ಲಿ ದುಸ್ತರವಾಗಿದೆ. ನೂರಾರು ಘನ ವಾಹನಗಳು ಇಲ್ಲಿ ಸಂಚರಿಸುವ ಮೂಲಕ ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ. ಕಳೆದ 4-5 ವರ್ಷಗಳಿಂದ ಇಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ನಿವಾಸಿಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ.
- ಸುರೇಶ್ ಕಾನ, ಸ್ಥಳೀಯರು
ವಾಹನಗಳ ನಿತ್ಯ ಸರ್ಕಸ್
ಬೈಕಂಪಾಡಿಯಲ್ಲಿರುವ ಪಣಂಬೂರು ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಕಾಂಕ್ರೀಟ್ ರಸ್ತೆ ಇದ್ದರೂ, ಅಲ್ಲಿಂದ ಸಂಪರ್ಕಿಸುವ ಒಳರಸ್ತೆಗಳು ಹೊಂಡಗಳಿಂದ ನಲುಗಿ ಹೋಗಿದೆ. ವಿವಿಧ ಕೈಗಾರಿಕೆಗಳಿಗೆ ತೆರಳುವ ಬೃಹತ್ ವಾಹನಗಳು ಇದೇ ಸಮಸ್ಯೆಯಿಂದ ನಲುಗುವಂತಾಗಿದೆ. ಸಾರ್ವಜನಿಕ ವಾಹನಗಳು ಕೂಡ ಇದೇ ರಸ್ತೆಯಲ್ಲಿ ಸಂಚರಿಸುವ ನಿತ್ಯ ಸರ್ಕಸ್ ಮಾಡಬೇಕಾಗಿದೆ.
– ಸಂಜೀವ ಶೆಟ್ಟಿ, ಸುರತ್ಕಲ್ ಕಟ್ಲ
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ