ಮತದಾನ ಜಾಗೃತಿಗಾಗಿ ಉದ್ಯೋಗ ತೊರೆದು ಬೈಕ್ ಏರಿದ ಯುವಕ
Team Udayavani, Mar 23, 2019, 6:40 AM IST
ಮಹಾನಗರ : ದೇಶಾದ್ಯಂತ ಚುನಾವಣಾ ಕಾವು ಏರುತ್ತಿದೆ. ಅಭ್ಯರ್ಥಿಗಳಿಗೆ ಗೆಲುವಿನ ಚಿಂತೆಯಾದರೆ ಅಧಿಕಾರಿಗಳಿಗೆ ಎಲ್ಲರಲ್ಲೂ ಮತದಾನ ಮಾಡಿ ಸುವ ಹೊಣೆ. ಈ ನಡುವೆ ಸರಕಾರ, ಜಿಲ್ಲಾಡಳಿತ ಮತದಾನ ಜಾಗೃತಿ ಕುರಿತಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕೆಲಸಕ್ಕೆ ಬೆಂಗಳೂರು ಮೂಲದ ಯುವಕ ಸಾಥ್ ನೀಡುತ್ತಿದ್ದಾನೆ.
43 ವರ್ಷದ ಬಸವರಾಜು ಎಸ್. ಕಲ್ಲುಸಕ್ಕರೆ ಅವರು ತನ್ನ ಎವೆಂಜರ್ ಬೈಕ್ನಲ್ಲಿ ಮತದಾನ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಸಂಚಾರ ಆರಂಭಿಸಿದ್ದಾರೆ. ಬೆಂಗಳೂರಿನಿಂದ ಆರಂಭಗೊಂಡ ಇವರ ಪ್ರಯಾಣ ಈಗಾಗಲೇ 21 ಜಿಲ್ಲೆಗಳನ್ನು ಮುಗಿಸಿದ್ದು, 22ನೇ ಜಿಲ್ಲೆಯಾಗಿ ಮಂಗಳೂರಿಗೆ ಆಗಮಿಸಿದ್ದಾರೆ. ಬಸವರಾಜು ಎಸ್. ಕಲ್ಲು ಸಕ್ಕರೆ ಅವರು ಮಾರ್ಗಮಧ್ಯೆ ಸಿಗುವ ಸರಕಾರಿ ಶಾಲೆ, ಕಾಲೇಜು, ಮತ್ತು ಗ್ರಾಮ ಪಂಚಾಯಿತ್ ಗಳಿಗೆ ಭೇಟಿ ನೀಡಿ ಮತದಾನ ಜಾಗೃತಿಯೊಂದಿಗೆ, ಕನ್ನಡ ಬಳಸಿ, ಕನ್ನಡ ಶಾಲೆ ಉಳಿಸಿ ,ರಕ್ತದಾನ ಮಾಡಿ, ಗಿಡ ನೆಡಿ ಮೊದಲಾದವುಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಇಲ್ಲಿಯವರೆಗೆ 4,000 ಕಿ.ಮೀ. ಕ್ರಮಿಸಿರುವ ಬಸವರಾಜ್ ಅವರು ಮತದಾನ ಜಾಗೃತಿಗಾಗಿ ಉತ್ತಮ ವೇತನವಿದ್ದ ಉದ್ಯೋಗವನ್ನು ತೊರೆದಿದ್ದಾರೆ. ಗುರುವಾರ ಉಡುಪಿಗೆ ತೆರಳಿರುವ ಇವರು ಶುಕ್ರವಾರ ಮಂಗಳೂರಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಲ್ಲಿಂದ ಧರ್ಮಸ್ಥಳಕ್ಕೆ ತೆರಳಿ ಬಳಿಕ ಬಾಕಿ ಇರುವ ಎಂಟು ಜಿಲ್ಲೆಗಳಿಗೆ ಪ್ರಯಾಣ ಬೆಳಸಲಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳೇ ಕಳೆದಿವೆ. ಆದರೆ ಈವರೆಗೆ ಶೇ.50- 60ರಷ್ಟು ಮತದಾನ ಆಗುತ್ತಿದೆ. ಶೇ. 100ರಷ್ಟು ಮತದಾನವಾಗಬೇಕು ಎಂಬುದು ನನ್ನ ಉದ್ದೇಶ. ಆ ಕಾರಣಕ್ಕಾಗಿ ನಾನು ಉದ್ಯೋಗ ತೊರೆದು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿದ್ದೇನೆ ಎಂದು ಹೇಳುತ್ತಾರೆ ಬಸವರಾಜ್.