ರೈತ ಸಂಜೀವಿನಿ ಪರಿಹಾರ ನಿಯಮ ತಿದ್ದುಪಡಿ
Team Udayavani, Jul 26, 2019, 5:00 AM IST
ಪುತ್ತೂರು: ರೈತರು ಕೃಷಿ ಚಟು ವಟಿಕೆಯ ಸಂದರ್ಭದಲ್ಲಿ ಮೃತಪಟ್ಟಾಗ ಎಪಿಎಂಸಿ ಮೂಲಕ ನೀಡುವ ರೈತ ಸಂಜೀವಿನಿ ಪರಿಹಾರಧನಕ್ಕೆ ಸಂಬಂಧಿಸಿ ನಿಯಮಗಳನ್ನು ತಿದ್ದುಪಡಿ ಮಾಡಲು ಸರಕಾರಕ್ಕೆ ಮನವಿ ಮಾಡಲು ಪುತ್ತೂರು ಎಪಿಎಂಸಿ ಆಡಳಿತ ನಿರ್ಧರಿಸಿದೆ. ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ ಗುರುವಾರ ಸಮಿತಿ ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆಯಲ್ಲಿ ನಡೆಯಿತು.
ಬದಲಾವಣೆ ಮಾಡಿ
ರೈತ ಸಂಜೀವಿನಿ ಪರಿಹಾರ ಪಡೆಯುವ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿಯವರ ಶಿಫಾರಸು ಬೇಕು ಎನ್ನುವ ನಿಯಮ ಅನ್ವಯ ಮಾಡಲಾಗಿದೆ. ಅದನ್ನು ತಾಲೂಕು ವೈದ್ಯಾಧಿಕಾರಿಯವರ ಶಿಫಾರಸ್ಸಿಗೆ ಬದಲಾ ವಣೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಸದಸ್ಯೆ ಪುಲಸ್ತಾ ರೈ ಮಾತ ನಾಡಿ, ಎಪಿಎಂಸಿಯಲ್ಲಿ ಹಣ ಇದ್ದರೂ ರೈತರಿಗೆ ಪರಿಹಾರ ರೂಪದಲ್ಲಿ ನೀಡಲು ಸಾಧ್ಯ ವಾಗುತ್ತಿಲ್ಲ. ರೈತರು ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಗಾಯಗೊಂಡಾಗ ಆಸ್ಪತ್ರೆ ಚಿಕಿತ್ಸೆ ವೆಚ್ಚವನ್ನು ನೀಡಲೂ ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದರು.
ಬೋರ್ಡ್ ಮೀಟಿಂಗ್ನಲ್ಲಿ ತಿದ್ದುಪಡಿ
ರಾಮಚಂದ್ರ ಮಾತನಾಡಿ, ರೈತ ಸಂಜೀವಿನಿ ಪರಿಹಾರ ನೀಡುವ ಪ್ರಕ್ರಿಯೆ ಸರಕಾರದ ಮಟ್ಟದಲ್ಲಿ ಅಂತಿಮ ವಾಗುವುದು. ಬೋರ್ಡ್ ಮೀಟಿಂರ್ಗ್ನಲ್ಲಿ ಚರ್ಚೆ ಯಾಗಿ ತಿದ್ದುಪಡಿ ಆಗಬೇಕಿದೆ. ಹಿಂದೆ ಹಾವು ಕಚ್ಚಿದ ಸಂದರ್ಭದಲ್ಲಿ ಪರಿಹಾರ ನೀಡಲಾಗುತ್ತಿತ್ತು. ಆದರೆ ಅದರ ದುರುಪಯೋಗ ಆಗುತ್ತದೆ ಎಂಬ ಕಾರಣಕ್ಕೆ ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಹಾವು ಕಚ್ಚಿ ಮೃತಪಟ್ಟವರಿಗೂ ಪರಿಹಾರ ನೀಡಲಾಗುತ್ತಿದೆ. ವ್ಯಕ್ತಿಯ ಪರಿಹಾರ ಪರಿಗಣನೆಗೆ ವಯಸ್ಸನ್ನು 65ಕ್ಕೆ ಮಿತಿಗೊಳಿಸಲಾಗಿದೆ. ಕೃಷಿ ಚಟುವಟಿಕೆಯ ಸಂದರ್ಭ ದಲ್ಲಿ ಸಾವನ್ನಪ್ಪಿದ ಹಾಗೂ ಸಂಪೂರ್ಣ ವೈಕಲ್ಯಕ್ಕೆ ಒಳಗಾದ ಸಂದರ್ಭ ದಲ್ಲಿ ಮಾತ್ರ ಈಗ ಪರಿಹಾರ ನೀಡ ಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಫಾಲೋಅಪ್ ಮಾಡೋಣ
ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಎಲ್ಲ ಋಣಾತ್ಮಕ ಅಂಶಗಳನ್ನು ನೋಟ್ ಮಾಡಿಕೊಂಡು ಸರಕಾರದ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ತಿದ್ದುಪಡಿಗೆ ವಿನಂತಿಸೋಣ. ಈ ಸಂದರ್ಭದಲ್ಲಿ ಇತರ ಎಪಿಎಂಸಿಗಳ ಸಹಕಾರವನ್ನೂ ಪಡೆದುಕೊಳ್ಳಲಾಗುವುದು. ಕೇವಲ ಮನವಿ ನೀಡದೆ ಅದರ ಹಿಂದೆ ಬೀಳುವ ಕೆಲಸ ಆಗಬೇಕು. ಸಚಿವರಿಗೆ, ಇಲಾಖೆ ನಿರ್ದೇಶಕರಿಗೆ ಹಾಗೂ ಮಾರಾಟ ಮಂಡಳಿ ಅಧ್ಯಕ್ಷರಿಗೆ ಈ ತಿದ್ದುಪಡಿ ಆವಶ್ಯಕತೆ ಕುರಿತು ಮನವಿ ಮಾಡಲಾಗುವುದು ಎಂದರು. ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್ಪಾಸ್ ನಿರ್ಮಾಣ ಹಾಗೂ ಎಪಿಎಂಸಿ ಯಾರ್ಡ್ ವಿಸ್ತರಣೆಗೆ ಜಾಗ ಹುಡುಕುವ ಕೆಲಸ ನಮ್ಮ ಅವಧಿಯಲ್ಲೇ ಆಗಬೇಕು ಎಂದು ಬೂಡಿಯಾರು ರಾಧಾಕೃಷ್ಣ ರೈ ಹೇಳಿದರು.
11.50 ಕೋಟಿ ರೂ.
ರೈಲ್ವೇ ಅಂಡರ್ಪಾಸ್ಗೆ ಸಂಬಂಧ ಪಟ್ಟಂತೆ ಸರಕಾರಕ್ಕೆ 5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂಲ ಸೌಕರ್ಯ ಇಲಾಖೆ ಜತೆಗೂ ಶಾಸಕರ ಜತೆ ತೆರಳಿ ಮಾತುಕತೆ ನಡೆಸಿದ್ದೇವೆ. ಅನುದಾನ ನೀಡಲು ಅವಕಾಶವಿದೆ ಎಂದು ಅವರೂ ತಿಳಿಸಿದ್ದಾರೆ. ಬುಧವಾರ ರೈಲ್ವೇ ಇಲಾಖೆ ಮೈಸೂರು ವಿಭಾಗದ ಎಂಜಿನಿಯರ್ ಜತೆ ಮಾತನಾಡಿದ್ದೇನೆ. ಇಲಾಖೆ ಯಿಂದ ಎಸ್ಟಿಮೇಶನ್ ಖರ್ಚು 11.50 ಕೋಟಿ ರೂ. ಮಾಡಲಾಗಿದೆ. ವಾರದೊಳಗೆ ಅದರ ನಕಲು ಪ್ರತಿಯನ್ನು ಕಳುಹಿಸಿ ಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಪರಿಶೀಲಿಸಿ
ಎಪಿಎಂಸಿಯಿಂದ ಲಭ್ಯವಾಗುವ ಅನುದಾನದಲ್ಲಿ ನಡೆಸಲಾಗುವ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಯ ಗುಣಮಟ್ಟವನ್ನು ಸದಸ್ಯರು ಪರಿಶೀಲಿಸ ಬೇಕು ಎಂದು ಅಧ್ಯಕ್ಷ ದಿನೇಶ್ ಮೆದು ಹೇಳಿದರು. ರಸ್ತೆಯ ಕ್ರಿಯಾಯೋಜನೆ ಕೂಡಲೇ ನೀಡಬೇಕು. ಇಲ್ಲದಿದ್ದರೆ ಆಗಸ್ಟ್ ತಿಂಗಳಿಗೆ ಅನುದಾನ ಹಿಂದಕ್ಕೆ ಹೋಗುತ್ತದೆ ಎಂದು ಕಾರ್ಯ ದರ್ಶಿ ರಾಮಚಂದ್ರ ಹೇಳಿದರು.
ವಂಚನೆಯಿಂದ ನಷ್ಟ
ಎಪಿಎಂಸಿ ಯಾರ್ಡ್ಗೆ ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆ ಬರುತ್ತಿಲ್ಲ. ಹೊರಗಿನ ಖರೀದಿ, ಮನೆಗೆ ತೆರಳಿ ಖರೀದಿಸುವ ಕಾರಣ ಈ ಸ್ಥಿತಿ ಉಂಟಾಗಿದೆ. ಮುಂದೆ ಅಡಿಕೆ ಖರೀದಿ ಅಂಗಡಿಗಳನ್ನು ಮುಚ್ಚುವ ಪರಿಸ್ಥಿತಿ ಬರಬಹುದು ಎಂದು ಸದಸ್ಯ ಶಕೂರ್ ಅಲವತ್ತುಕೊಂಡರು. ಹಿಂದೆ ಎಪಿಎಂಸಿಯಿಂದ ತಪಾಸಣೆ ತಂಡ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಈಗ ಸಿಬಂದಿ ಕೊರತೆ ಇದೆ. ಏನೇ ವ್ಯವಹಾರ ಇದ್ದರೂ ಎಪಿಎಂಸಿ ಜತೆ ಮಾಡುವಂತೆ ನಿಯಮ ತರಬೇಕು ಎಂದು ಅಧ್ಯಕ್ಷರು ಹೇಳಿದರು.
ಕಳೆದ ವರ್ಷ ನಿರೀಕ್ಷಿತ ಆದಾಯದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಶೇ. 85ರಷ್ಟು ಮಾತ್ರ ಗುರಿ ತಲುಪಿದೆ. ಆದಾಯದಲ್ಲಿ ವಂಚನೆಯಾದರೆ ಈ ವರ್ಷ 3 ಕೋಟಿ ಆದಾಯ ಗುರಿಯನ್ನೂ ತಲುಪಲು ಸಾಧ್ಯವಿಲ್ಲ. ಒಬ್ಬನೇ ವಂಚನೆ ಗಳ ತಪಾಸಣೆ ಮಾಡುತ್ತಿದ್ದರೂ ಎಲ್ಲ ಸರಿಪಡಿಸಲು ಸಾಧ್ಯವಿಲ್ಲ ಎಂದು ಕಾರ್ಯ ದರ್ಶಿ ರಾಮಚಂದ್ರ ಹೇಳಿದರು. ಎಪಿಎಂಸಿ ಯಾರ್ಡ್ನಿಂದಲೂ ವಂಚನೆಯ ಮಾರಾಟ ನಡೆಯುತ್ತಿದೆ. ಈ ಕುರಿತು ಕಠಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.
ಆ. 20: ವರ್ತಕರ ಸಭೆ
ಆ. 20ರಂದು ಪೂರ್ವಾಹ್ನ ತಾ| ಎಪಿಎಂಸಿಗೆ ಸಂಬಂಧಿಸಿದ 6 ಉಪ ಮಾರುಕಟ್ಟೆ ಹಾಗೂ 1 ಮುಖ್ಯ ಮಾರುಕಟ್ಟೆಯ ವರ್ತಕರ ಸಭೆಯನ್ನು ಎಪಿಎಂಸಿ ರೈತ ಸಭಾಭವನದಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ವ್ಯವಹಾರ ಹಾಗೂ ಸಹಕಾರದ ಕುರಿತು ಚರ್ಚೆ ನಡೆಸಲಾಗುವುದು. ಎಲ್ಲ ವರ್ತಕರೂ ಸಭೆಯಲ್ಲಿ ಭಾಗವಹಿಸಬೇಕು ಎಂದು ಅಧ್ಯಕ್ಷ ದಿನೇಶ್ ಮೆದು ವಿನಂತಿಸಿದರು.
ಸಭೆಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ ಎನ್.ಎಸ್., ಸದಸ್ಯರಾದ ಪುಲಸ್ತಾÂ ರೈ, ಬಾಲಕೃಷ್ಣ ಣಜಾಲು, ಬೆಳ್ಳಿಪ್ಪಾಡಿ ಕಾರ್ತಿಕ್ ರೈ, ಅಬ್ದುಲ್ ಶಕೂರ್, ಕೃಷ್ಣಕುಮಾರ್ ರೈ, ಕೊರಗಪ್ಪ, ತ್ರಿವೇಣಿ ಪೆರೊಡಿ, ತೀರ್ಥಾನಂದ ದುಗ್ಗಳ, ಬೂಡಿಯಾರು ರಾಧಾಕೃಷ್ಣ ರೈ, ಕುಶಾಲಪ್ಪ, ಮೇದಪ್ಪ ಗೌಡ ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಭಾರ ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.
ಕಠಿನ ನಿಯಮ
ಸದಸ್ಯ ಕೃಷ್ಣಕುಮಾರ್ ರೈ ಮಾತನಾಡಿ, ರೈತರು ಮೃತಪಟ್ಟ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಸಹಾಯಕ ಆಯುಕ್ತರ ಶಿಫಾರಸಿನ ಮೇರೆಗೆ ಸುಲಭದಲ್ಲಿ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಎಪಿಎಂಸಿಯಷ್ಟು ಕಠಿನ ನಿಯಮವನ್ನು ಅಲ್ಲಿ ಅಳವಡಿಸ ಲಾಗಿಲ್ಲ. ಪೋಸ್ಟ್ ಮಾರ್ಟಂ ವರದಿ ಬರುವಾಗ 4 ತಿಂಗಳು ಕಳೆಯುತ್ತವೆ. ಈ ಕಾರಣದಿಂದ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ ಎಂದರು. ಕಾರ್ಯದರ್ಶಿ ರಾಮಚಂದ್ರ ಮಾತ ನಾಡಿ, ಪೋಸ್ಟ್ ಮಾರ್ಟಂನಲ್ಲಿ ರಿಜೆಕ್ಟ್ ಆದ ಪ್ರಕರಣದಲ್ಲೂ ಪರಿ ಹಾರ ನೀಡಿದ ಉದಾಹರಣೆ ಇದೆ ಎಂದರು.