ಅಪಪ್ರಚಾರಕ್ಕೆ ಗ್ರಾ.ಪಂ. ಚುನಾವಣೆಯಲ್ಲಿ ಪ್ರತ್ಯುತ್ತರ ನೀಡಬೇಕಿದೆ: ರಮಾನಾಥ ರೈ
Team Udayavani, Jul 23, 2019, 5:00 AM IST
ಪುಂಜಾಲಕಟ್ಟೆ: ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಪಕ್ಷ ಬಲವರ್ಧನೆಗೆ ಹಾಗೂ ಸಂಘಟನೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರಗಳ ಗ್ರಾಮ ಪಂಚಾಯತ್ಗಳಲ್ಲಿ ಹಮ್ಮಿಕೊಂಡ ಪಂಚಾಯತ್ ಮಿಲನ ಕಾರ್ಯಕ್ರಮ ಸಂಗಬೆಟ್ಟು ಗ್ರಾಮ ಪಂಚಾಯತ್ ವಲಯ ಮಟ್ಟದಲ್ಲಿ ಸಿದ್ದಕಟ್ಟೆ ಹರ್ಷಲಿ ಸಭಾ ಭವನದಲ್ಲಿ ಜು. 20ರಂದು ಸಂಜೆ ಜರಗಿತು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿರೋಧ ಪಕ್ಷದವರ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳಿಂದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಯಿತು. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮುಖಾಂತರ ಮುಂಬರುವ ಪಂಚಾಯತ್ ಚುನಾವಣೆಗೆ ಸಜ್ಜಾಗಬೇಕು ಮತ್ತು ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಪ್ರತ್ಯುತ್ತರ ನೀಡಬೇಕಾಗಿದೆ ಎಂದರು.
ಕಾರ್ಯಕರ್ತರು ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಧೃತಿಗೆಡದೆ ಪಕ್ಷದ ಸಂಘಟನೆಯಲ್ಲಿ ಹಾಗೂ ಬಲ ವರ್ಧನೆಯಲ್ಲಿ ಸಕ್ರಿಯವಾಗಿ ತೊಡಗಿ ಸಿಕೊಂಡು ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದು ಅವರು ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಅಧ್ಯಕ್ಷತೆ ವಹಿಸಿ, ಯುವಜನತೆಗೆ ಹೆಚ್ಚಿನ ಆದ್ಯತೆ ನೀಡಿ, ವಲಯ ಕಾಂಗ್ರೆಸ್ ಹಾಗೂ ಬೂತ್ ಸಮಿತಿಯನ್ನು ಪುನರ್ರಚಿಸಿ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಂಗಬೆಟ್ಟು ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರನ್ನಾಗಿ ದಿನೇಶ್ ಶೆಟ್ಟಿಗಾರ್ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಮುಖರಾದ ಡಾ| ಪ್ರಭಾಚಂದ್ರ, ಮಂಜಯ್ಯ ಶೆಟ್ಟಿ, ದಾಮೋದರ ಮಂಚಕಲ್ಲು, ಸೀತಾರಾಮ ಶೆಟ್ಟಿ, ಭುಜಬಲಿ ಕಂಬಳಿ, ಲೋಕಯ್ಯ ಪೂಜಾರಿ, ಫಾರೂಕ್ ಕೆರೆಬಳಿ, ಶಿವಾನಂದ ರೈ, ಉಸ್ಮಾನ್, ಅಶೋಕ್ ಆಚಾರ್ಯ, ಮೋನಾಕ ಕಲ್ಕುರಿ, ಶಶಿಕುಮಾರ್, ಅಲ್ತಾಫ್ ಅಹಮದ್, ಜಲಜಾ ಪೂಜಾರಿ ಬೂತ್ ಅಧ್ಯಕ್ಷ ಹಮೀದ್ ಎಸ್.ಎ., ದೇವರಾಜ್ ಸಾಲ್ಯಾನ್, ನೋಣಯ್ಯ ಪೂಜಾರಿ, ದಾಮೋದರ ನಾಯಕ್, ವಾಮನ್ ಬುನ್ನನ್, ಗ್ರಾ.ಪಂ. ಸದಸ್ಯರದಾ ದೇವಪ್ಪ ಕರ್ಕೇರ, ಶೇಖರ್ ನಾಯ್ಕ, ಸುಭಾಶಿನಿ, ಶಾರದಾ, ಮಯ್ಯದ್ದಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿಗಾರ್ ಸ್ವಾಗತಿಸಿದರು. ಜಯಕರ್ ಶೆಟ್ಟಿ ವಂದಿಸಿದರು.