ಉಪ್ಪಿನಂಗಡಿ ಬಸ್ ನಿಲ್ದಾಣ ಪ್ರವೇಶ ದ್ವಾರದಲ್ಲೇ ಕೃತಕ ಕೆರೆ!
Team Udayavani, Sep 12, 2019, 5:00 AM IST
ಉಪ್ಪಿನಂಗಡಿ: ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕೃತಕ ಕೆರೆ ನಿರ್ಮಾಣವಾಗಿದ್ದು, ಪಾದಚಾರಿಗಳಿಗೆ ಹಾಗೂ ಇತರ ವಾಹನಗಳಿಗೆ ತೊಂದರೆ ಉಂಟಾಗಿದೆ.
ಗ್ರಾ.ಪಂ. ವತಿಯಿಂದ ಬಸ್ ನಿಲ್ದಾಣಕ್ಕೆ ಕಾಂಕ್ರೀಟ್ ಅಳವಡಿಸಿದ ಸಂದರ್ಭದಲ್ಲಿ ಹೊಂಡಗಳಿಗೆ ಕಲ್ಲು ತುಂಬಿಸಿ, ಡಾಮರು ಸುರಿದು ತೇಪೆ ಹಚ್ಚಲಾಗಿತ್ತು. ಮುಂಗಾರು ಆರಂಭದಿಂದ ಭಾರೀ ಮಳೆಯಾದ ಕಾರಣ ಮೂರು ತಿಂಗಳಲ್ಲೇ ಮತ್ತೆ ಹೊಂಡಗಳು ಉದ್ಭವವಾಗಿದ್ದು, ಗ್ರಾ.ಪಂ. ಮುರಕಲ್ಲು ಪುಡಿ ತುಂಬಿಸಿದರೂ ಕೃತಕ ಕೆರೆ ನಿರ್ಮಾಣವಾಗಿದೆ.
ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ನಿಲ್ದಾಣಕ್ಕೆ ಪ್ರವೇಶಿಸುವ ವೇಳೆ ಬಸ್ಸುಗಳು ದಿಢೀರ್ ಬಂದರೆ ಕೆಸರು ಚಿಮ್ಮಿ ಬಟ್ಟೆಯೆಲ್ಲ ರಾಡಿಯಾಗುತ್ತವೆ. ಇನ್ನಾದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸಿ, ಸಾರ್ವಜನಿಕರಿಗೆ ಆಗುವ ತೊಂದರೆ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಾಶ್ವತ ಪರಿಹಾರದ ಇರಾದೆ
ಬಸ್ ನಿಲ್ದಾಣದ ಹೊಂಡಗಳ ಕುರಿತು ಮನವರಿಕೆಯಾಗಿದೆ. ಮಳೆ ಮುಗಿದ ಬೆನ್ನಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ಸರಿಪಡಿಸುವ ಇರಾದೆ ಇದೆ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಅಭಿವೃದ್ಧಿ ಅಧಿಕಾರಿ ಮಾಧವ ಕೆ.
ಶೀಘ್ರ ಪರಿಹಾರ
ಪಂ. ವ್ಯಾಪ್ತಿಯ ನಿಲ್ದಾಣಕ್ಕೆ ಕಾಂಕ್ರೀಟ್ ಹಾಕಲಾಗಿದ್ದು, ಎಲ್ಲ ಸದಸ್ಯರ ಸಹಕಾರದಿಂದ ಗ್ರಾ.ಪಂ.ನ ಸ್ವಂತ ನಿಧಿ ಬಳಸಿ ಬೇಡಿಕೆ ಈಡೇರಿಸಲು ಸಾಧ್ಯ ವಾಗಿದೆ. ನಿಲ್ದಾಣದ ಒಳಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲಾಗಿದೆ. ಪ್ರವೇಶ ದ್ವಾರದ ಹಳಿ ಹೊಂಡಗಳಿಗೆ ಡಾಮರು ಹಾಕಿದ್ದು, ಘನ ವಾಹನಗಳ ಚಾಲಕರ ಉದ್ಧಟತನದಿಂದ ಕೃತಕ ಕೆರೆ ನಿರ್ಮಾಣವಾಗಿದೆ. ಡಾಮರು ಹಾಕಿ, ನೆಲಕ್ಕೆ ಅಂಟಿಕೊಳ್ಳುವ ಮೊದಲೇ ವಾಹನ ಓಡಿಸಿದ್ದರಿಂದ ಹೀಗಾಗಿದೆ. ಶೀಘ್ರ ಸರಿ ಪಡಿಸಲಾಗುವುದು. ಅಬ್ದುಲ್ ರಹಿಮಾನ್ ಗ್ರಾ.ಪಂ. ಅಧ್ಯಕ್ಷ