ಬೆಳ್ತಂಗಡಿ: ಪ್ರವಾಹ ಸಾಗಿದ ಊರಿಗೆ ನೆರವಿನ ಮಹಾಪೂರ
ಅಳಿದುಳಿದ ಮನೆಗಳ ಸ್ವಚ್ಛತೆಗೆ ಯುವಕರಿಂದ ಕರ ಸೇವೆ
Team Udayavani, Aug 14, 2019, 5:00 AM IST
ಬೆಳ್ತಂಗಡಿ: ಭೀಕರ ಪ್ರವಾಹದಿಂದ ತತ್ತರಿಸಿದ ಬೆಳ್ತಂಗಡಿ ತಾ|ನ ಸಂತ್ರಸ್ತರ ಮೊರೆ ಆಲಿಸಲು ಜಿಲ್ಲೆ, ಹೊರ ಜಿಲ್ಲೆ ರಾಜ್ಯದಿಂದೆಲ್ಲೆಡೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.
ಪ್ರವಾಹ ಸಾಗಿದ ಊರುಗಳೆಲ್ಲ ಛಿದ್ರವಾಗಿ ನೆಲಸಮವಾಗಿರುವ ನಡು ವೆಯೇ ಸಂತ್ರಸ್ತರ ನೆರವಿಗೆ ಯುವ ಕರು, ಸಂಘ-ಸಂಸ್ಥೆಗಳು ಕೈಜೋಡಿ ಸಿವೆ. ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು, ಜಿಲ್ಲಾಡಳಿತ, ಜನಪ್ರತಿನಿಧಿ ಗಳು, ಯುವಕರು, ಬಿಜೆಪಿ ಕಾರ್ಯ ಕರ್ತರು, ಎನ್ನೆಸ್ಸೆಸ್., ಎನ್ಸಿಸಿ, ಸ್ಕೌಟ್ಸ್ ಗೈಡ್ಸ್, ಆರ್ಎಸ್ಎಸ್, ಎಸ್ಕೆ. ಎಸ್ಎಸ್ಎಫ್, ಎಸ್ಎಸ್ಎಫ್, ಎಸ್ಡಿಪಿಐ ಸಹಿತ ಹತ್ತಾರು ಸಂಘ ಸಂಸ್ಥೆಗಳು ಪ್ರತಿನಿತ್ಯ ಸಂತ್ರಸ್ತರ ನೆರವಿಗೆ ಧಾವಿಸುತ್ತಿದೆ.
ಮನೆ ಸ್ವಚ್ಛತೆ
ಪ್ರವಾಹದಿಂದ ನೆಲೆ ಕಳೆದುಕೊಂಡ 275 ಮಂದಿಯ ಮನೆಗಳ ಅವಶೇಷ ನೋಡಲು ತೆರಳಿದ ಮನೆ ಮಂದಿ ಕಣ್ಣು ತುಂಬಿಕೊಂಡಿದೆ. ದಿಡುಪೆ ಸಹಿತ ಮಲವಂತಿಗೆ, ಚಾರ್ಮಾಡಿ ಪ್ರದೇಶದವರು ತಮ್ಮ ನೆಲೆಗಳತ್ತ ತೆರಳಲು ಭಯಭೀತರಾಗಿದ್ದು, ತಾತ್ಕಾಲಿಕ ಕೇಂದ್ರ ದಲ್ಲೇ ಜೀವನ ಸಾಗಿಸುತ್ತಿದ್ದಾರೆ. 300ಕ್ಕೂ ಹೆಚ್ಚು ಹಾನಿಗೊಳಗಾದ ಮನೆಗಳ ಸ್ವಚ್ಛತೆ ಸವಾಲಾಗಿರುವ ನಡುವೆಯೇ ಸ್ವಯಂ ಸೇವಕರು, ಯುವಕರ ತಂಡ ದಿನಕ್ಕೆ 5 ಮನೆ ಗಳಂತೆ ಆಯ್ದು ಸ್ವಚ್ಛತೆಗೆ ಮುಂದಾಗುತ್ತಿವೆ.
ಶ್ರಮಿಕದಲ್ಲಿ ತುಂಬಿದ ಸಾಮಗ್ರಿ
ಶಾಸಕ ಹರೀಶ್ ಪೂಂಜ ಕಚೇರಿ ಶ್ರಮಿಕಕ್ಕೆ ನೆರೆ ಸಂತ್ರಸ್ತರಿಗೆ ಹತ್ತಾರು ಟನ್ ದಿನಬಳಕೆ ಸಾಮಗ್ರಿಗಳು ಬಂದಿವೆ. 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು, ಯುವಕರು ದುಡಿಯುತ್ತಿದ್ದಾರೆ. ಮನೆ ಸ್ವಚ್ಛತೆ, ಬಟ್ಟೆ ಬರೆ ವಿತರಣೆ, ಪಶುಗಳಿಗೆ ಆಹಾರ ನೀಡಲು ಅಲ್ಲಲ್ಲಿ ಯುವಕರನ್ನು ನೇಮಿಸಲಾಗಿದೆ.
ಆರೆಸ್ಸೆಸ್ ಕಾರ್ಯಾಚರಣೆ
ಕಡಬದ 20, ಮರ್ದಾಳದ 35 ಮಂದಿ ಸಹಿತ ಸುಮಾರು 200 ಮಂದಿ ಆರೆಸ್ಸೆಸ್ನ ಸ್ವಯಂಸೇವಕರು ಕುಕ್ಕಾವು, ಚಾರ್ಮಾಡಿ, ಫರ್ಲಾನಿ, ಮಲವಂತಿಗೆ ಪ್ರದೇಶದಲ್ಲಿ ಮನೆ ಗಳ ಸ್ವಚ್ಛತೆಗೆ ಮುಂದಾಗಿದಾರೆ. ಇವರಿಗೆ ಮುಂಡಾಜೆ ಕಾಲೇಜಿನ 20 ಮಂದಿ ಸಾಥ್ ನೀಡಿದ್ದು, ಈಗಾಗಲೇ 15 ಮನೆಗಳ ಕೆಸರು ತೆಗೆದು ಸ್ವಚ್ಛತೆಗೆ ಕೈಜೋಡಿಸಿದ್ದಾರೆ. ಹಲವು ಕಡೆಗಳಲ್ಲಿ ನದಿ ಪಥ ಬದಲಿಸಿದ್ದು, ಅಂತಹ ಸ್ಥಳಗಳಲ್ಲಿ ನದಿಯ ಪಥ ಯಥಾಸ್ಥಿತಿಗೆ ಮರಳಿಸುವ ಕೆಲಸ ನಿರಂತರವಾಗಿ ಸಾಗುತ್ತಿದೆ.
ಎಸ್ಡಿಪಿಐ, ಎಸ್ಕೆಎಸ್ಸೆಸ್ಸೆಫ್
ಎಸ್ಡಿಪಿಐ ಸಹಿತ ಇತರ ಮುಸ್ಲಿಂ ಸಂಘ-ಸಂಸ್ಥೆಗಳ 100ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ನಿರಂತರ ಸಂಪರ್ಕ ನಿರ್ಮಾಣ ಹಾಗೂ ಮರ ತೆರವು ಸಹಿತ ಸಂತ್ರಸ್ತರಿಗೆ ಆಹಾರ ಸಾಮಾಗ್ರಿ ವಿತರಿಸುವಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ.
ಬದಲಾದ ಹಳ್ಳಿಯ ಚಿತ್ರಣ
ನೆರೆ ಹಾವಳಿಗೆ ಹಳ್ಳಿಗಳು ಹೇಳಹೆಸರಿಲ್ಲದಂತೆ ಬದಲಾಗಿ ಹೋಗಿವೆ. ಮನೆಯೊಳಗೆ ಆಳೆತ್ತರ ಮರಳಿನ ರಾಶಿ ತುಂಬಿಕೊಂಡಿದೆ. ಬಿಕೋ ಎನ್ನುತ್ತಿರುವ ಮನೆಯೊಳಗೆ ಯಜಮಾನನಿಲ್ಲದೆ ಮೂಕ ಪ್ರಾಣಿಗಳು ಆಕ್ರಂದನ ಮಾಡುತ್ತಿವೆ.
ಭೀಕರ ಪ್ರವಾಹದಿಂದುಂಟಾದ ಹಾನಿ ನೋಡಲು ಜನ ಬೆಳ್ತಂಗಡಿಗೆ ಆಗಮಿಸುತ್ತಿದ್ದಾರೆ. ಇವರನ್ನು ನಿಭಾಯಿಸುವುದೇ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಮತ್ತೂಂದೆಡೆ ಕೆಲಸ ಕಾರ್ಯ ನಡೆಯುತ್ತಿರುವ ಮಧ್ಯೆ ಸ್ಥಳಕ್ಕೆ ಭೇಟಿ ನೀಡುವವರನ್ನು ನಿಯಂತ್ರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ಸಮೀಕ್ಷೆ ಬಳಿಕ ಕೃಷಿ ಹಾನಿ ಚಿತ್ರಣ
ಸೇತುವೆಯಲ್ಲಿ ಸಿಲುಕಿರುವ ಮರ ತೆರವಿಗೆ ಕ್ರೇನ್ ಬಳಸಲಾಗಿದೆ. ಸೇತುವೆ ಸಂಪರ್ಕಕ್ಕೆ 10 ದಿನಗಳೊಳಗಾಗಿ ತಾತ್ಕಾಲಿಕ ಕ್ರಮಕ್ಕೆ ಕಾರ್ಯಾಚರಣೆ ಹಮ್ಮಿ ಕೊಳ್ಳಲಾಗಿದೆ. ಪ್ರತಿ ಗ್ರಾಮದಲ್ಲಿ ಶೇ.10ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಕೃಷಿ ಹಾನಿ ಸಮೀಕ್ಷೆ ಬಳಿಕ ಒಟ್ಟು ಚಿತ್ರಣ ಲಭ್ಯವಾಗಲಿದೆ.
– ಗಣಪತಿ ಶಾಸ್ತ್ರಿ, ತಹಶೀಲ್ದಾರ್
ತೇಲಿ ಬಂದಿವೆ ಬೆಳೆ ಬಾಳುವ ಮರಗಳು
ಪ್ರವಾಹದಲ್ಲಿ 10,000ಕ್ಕೂ ಹೆಚ್ಚು ಮರಗಳು ತೇಲಿಬಂದಿವೆ. ಬೀಟೆ, ಸಾಗುವಾನಿ, ಹಲಸು, ಹೆಬ್ಬಲಸು, ಮಾವು, ಪೊನ್ನೆ, ಮರುವ ಸಹಿತ ಹತ್ತಾರು ಜಾತಿಗಳ ಮರಗಳು ಸೇತುವೆ ಕಂಬಿ, ತೋಟಗಳ ಮಧ್ಯೆ ಎಲ್ಲೆಂದರಲ್ಲಿ ಎಸೆದಂತಿವೆ.