“ರಕ್ತದಾನ ಪವಿತ್ರ, ಪ್ರತಿಯೊಬ್ಬರೂ ಕೈಜೋಡಿಸಿ’
Team Udayavani, Jun 15, 2019, 5:00 AM IST
ನಗರ: ರಕ್ತದಾನದಂತಹ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮನೋಸ್ಥಿತಿ ಪ್ರತಿಯೊಬ್ಬರದ್ದಾಗಬೇಕು ಎಂದು ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.
ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ರೆಡ್ಕ್ರಾಸ್ ಸಂಸ್ಥೆ ಮತ್ತು ರೋಟರಿ ಕ್ಯಾಂಪ್ಕೋ ಬ್ಲಿಡ್ ಬ್ಯಾಂಕ್ ಪುತ್ತೂರು ಸಹಯೋಗದಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ರೋಟರಿ ಕ್ಯಾಂಪ್ಕೋ ಬ್ಲಿಡ್ ಬ್ಯಾಂಕ್ನಲ್ಲಿ ಆಯೋಜಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿದರು. ಸಮಾಜದಲ್ಲಿ ಸಾಕಷ್ಟು ಸಂಘ – ಸಂಸ್ಥೆಗಳು ಬೇರೆ ಬೇರೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ. ರಕ್ತದಾನ ಶಿಬಿರ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮ ಹಾಕಿಕೊಳ್ಳುವುದು ಅತಿ ಅಗತ್ಯ. ಇದಕ್ಕೆ ಪೂರಕ ಎಂಬಂತೆ ಕುಲಾಲ ಸಮಾಜ ಸೇವಾ ಸಂಘ ಸ್ವಯಂ ಪ್ರೇರಿತ ರಕ್ತದಾನ ಮತ್ತು ಪರಿಸರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಿರುವುದು ಅಭಿನಂದನಾರ್ಹ ಎಂದರು.
ರೋಟರಿ ಕ್ಯಾಂಪ್ಕೋ ಬ್ಲಿಡ್ ಬ್ಯಾಂಕ್ನ ವೈದ್ಯಾಧಿಕಾರಿ ಡಾ| ರಾಮಚಂದ್ರ ಭಟ್ ರಕ್ತದಾನದ ಅಗತ್ಯ ಮತ್ತು ಪ್ರಾಮುಖ್ಯದ ಕುರಿತು ಮಾಹಿತಿ ನೀಡಿದರು. ಒಬ್ಬ ವ್ಯಕ್ತಿಯ ರಕ್ತದಿಂದ ಮೂರು ಜನರ ಪ್ರಾಣ ಉಳಿಸ ಬಹುದು. ಹೋಲ್ ಬ್ಲಿಡ್, ಪ್ಯಾಕ್ಡ್ ಬ್ಲಿಡ್, ಪ್ಲಾಸ್ಮಾ, ಪ್ಲೇಟ್ಲೆಟ್ ವಿಂಗಡಣೆಯನ್ನು ಇಲ್ಲಿಯೇ ಮಾಡಲಾಗುವುದರಿಂದ ಜನರು ಮಂಗಳೂರಿಗೆ ಹೋಗಬೇಕಾಗಿಲ್ಲ ಎಂದು ಹೇಳಿದರು.
ರೆಡ್ಕ್ರಾಸ್ ಸೊಸೈಟಿಯ ಕಾರ್ಯಾಧ್ಯಕ್ಷ ಆಸ್ಕರ್ ಆನಂದ್, ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಶುಭ ಹಾರೈಸಿದರು. ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಪ್ರೇಮಾನಂದ ಡಿ. ಉಪಸ್ಥಿತರಿದ್ದರು. ಕುಲಾಲ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಹೇಶ್ ಕುಲಾಲ್ ಸ್ವಾಗತಿಸಿ, ಸಂಘದ ನಿಕಟಪೂರ್ವ ಉಪಾಧ್ಯಕ್ಷ ಸಚ್ಚಿದಾನಂದ ಕೆ. ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.
ಶೀಘ್ರ ಡಯಾಲಿಸಿಸ್ ಘಟಕ
ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಬ್ಲಿಡ್ ಬ್ಯಾಂಕ್ ಮುಖ್ಯಸ್ಥ ವಾಮನ್ ಪೈ ಮಾತನಾಡಿ, ರೋಟರಿ ಕ್ಲಬ್ನ ಶ್ರಮದಿಂದಾಗಿ ಪ್ರಸ್ತುತ ರೋಟರಿ ಕ್ಯಾಂಪ್ಕೋ ಬ್ಲಿಡ್ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ. ಮುಂದೆ ರೋಟರಿಯಿಂದ ಡಯಾಲಿಸಿಸ್ ಘಟಕ ಸ್ಥಾಪನೆಯ ಮಹತ್ವದ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ. ರೋಟರಿಯಿಂದ 40 ಲಕ್ಷ ರೂ. ಯೋಜನೆಯಲ್ಲಿ ಡಯಾಲಿಸಿಸ್ ಘಟಕ 6 ತಿಂಗಳೊಳಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಿದರು.