ಮಾನವೀಯ ಮೌಲ್ಯವುಳ್ಳ ವೈದ್ಯ ಸೇವೆಯೇ ಆದರ್ಶ: ಡಾ| ಗಂಗಾಧರ್
Team Udayavani, Jun 13, 2019, 5:00 AM IST
ಬೆಳ್ತಂಗಡಿ: ವೈದ್ಯಕೀಯ ವೃತ್ತಿಯು ಇತರ ವೃತ್ತಿಗಳಂತೆ ಹಣ ಗಳಿಕೆಯ ರೂಪಾಂ ತರವಲ್ಲ. ವೈದ್ಯರಿಂದ ಸಮಾಜವು ನಿರೀಕ್ಷಿಸುವ ಮಾನವೀಯ ಮೌಲ್ಯವುಳ್ಳ ಸೇವೆಯಾಗಿ ನೀಡುವಲ್ಲಿ ಯುವ ವೈದ್ಯರು ಸಮಾಜಕ್ಕೆ ಆದರ್ಶ ರಾಗಿರಬೇಕು ಎಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ನಿರ್ದೇಶಕ ಡಾ| ಬಿ.ಎನ್. ಗಂಗಾಧರ್ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ 25ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ಕೇವಲ ಅಲೋಪತಿ ಮಾತ್ರವಲ್ಲದೆ ಪ್ರಕೃತಿ ಚಿಕಿತ್ಸೆ, ಯೋಗ ಆರೋಗ್ಯ ಸಂರಕ್ಷಣೆಗೆ ಅನಿ ವಾರ್ಯವೆಂದು ಜನರಿಗೆ ಅರಿವಾಗಿದೆ. ಭಾರತ ದಲ್ಲಿ ಸೀಮಿತವಾಗಿದ್ದ ಯೋಗವು ಕಳೆದ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ ಪಸರಿಸಿದೆ. ವಿಶ್ವ ಯೋಗ ದಿನಾಚರಣೆ ಮೂಲಕ ಯೋಗಕ್ಕೆ ವಿಶೇಷ ಮನ್ನಣೆ ಲಭಿಸಿದೆ ಎಂದರು.
ಸಮಾರಂಭಕ್ಕೆ ಚಾಲನೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್ಡಿಎಂ ಧಾರವಾಡ ವಿ.ವಿ.ಯ ಕುಲಪತಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ರೋಗಿಯ ಸಮಸ್ಯೆ ಆಲಿಸುವ ತಾಳ್ಮೆ ವೈದ್ಯರಲ್ಲಿರುವುದು ಮುಖ್ಯ. ರೋಗಿಗಳ ಸಮಸ್ಯೆಗೆ ಕಿವಿಯಾಗಿ ಅವರ ಮನಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದರು.
ದೇಶದ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ನಿರತರಾಗಿದ್ದಾರೆ. ಉಜಿರೆಯ ಎಸ್ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವದ 130 ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೆಗ್ಗಡೆ ಹರ್ಷ ವ್ಯಕ್ತಪಡಿಸಿದರು.
ಕಳೆದ 25 ವರ್ಷಗಳಲ್ಲಿ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರ ಮಾಹಿತಿ ಒಳಗೊಂಡ “ಆರ್ಷಪ್ರವರ’ ಪುಸ್ತಕವನ್ನು ಡಾ| ಹೆಗ್ಗಡೆ ಬಿಡುಗಡೆಗೊಳಿಸಿದರು. ಹೇಮಾವತಿ ವೀ. ಹೆಗ್ಗಡೆ, ಕಾರ್ಯ ದರ್ಶಿಗಳಾದ ಡಿ. ಹಷೇದ್ರ ಕುಮಾರ್, ಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್ ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಅಂಕಿತ್ ಪಾಂಡೆ ಹಾಗೂ ಪ್ರಿಯದಾ ಪೌಲ್ ನಿರೂಪಿಸಿದರು.
ಚಿನ್ನದ ಪದಕ
ಒಟ್ಟು 28 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, 96 ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಐವರು ಚಿನ್ನದ ಪದಕ ಪಡೆದರು. ಸ್ನಾತಕೋತ್ತರ ವಿಭಾಗದ ನ್ಯಾಚುರೋಪತಿಯಲ್ಲಿ ಡಾ| ಜೋಸ್ನಾ ಕೆ.ಜೆ. ಮತ್ತು ಡಾ| ವಿವೇಕ್ ಎಚ್., ಯೋಗದಲ್ಲಿ ಸಪ್ನಾ ಕೆ., ಜಾಸ್ಮಿನ್ ಡಿ’ಸೋಜಾ ಜಿಂದಾಲ್ ಫೌಂಡೇಶನ್ನ ಚಿನ್ನದ ಪದಕ ಪಡೆದರು. ಪದವಿಯಲ್ಲಿ ಡಾ| ಭೀರಾಮ್ ಸುಧಾಂಶಿ ಅವರು ಜಿಂದಾಲ್ ಫೌಂಡೇಶನ್ ಹಾಗೂ ಪ್ರಸಿಡೆಂಟ್ ಗೋಲ್ಡ್ ಮೆಡಲ್ ಸೇರಿ ಮೂರು ಚಿನ್ನದ ಪದಕಕ್ಕೆ ಭಾಜನರಾದರು. ವರ್ಷದ ಅತ್ಯುತ್ತಮ ವಿದ್ಯಾರ್ಥಿಯಾಗಿ ಡಾ| ಕೌಶಿಕ್ ಗುಪ್ತ ಹೊರಹೊಮ್ಮಿದರು.
ಎಸ್ಡಿಎಂ ವೈದ್ಯಕೀಯ ವಿ.ವಿ.
ಧಾರವಾಡದಲ್ಲಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಮತ್ತು ಸಂಶೋಧನ ಕೇಂದ್ರವನ್ನು ಸೇರಿಸಿಕೊಂಡು ಎಸ್ಡಿಎಂ ವೈದ್ಯಕೀಯ ವಿ.ವಿ. ಪ್ರಾರಂಭಿಸಲಾಗಿದೆ. ಮುಂದೆ ಎಲ್ಲ ವಿದ್ಯಾಸಂಸ್ಥೆಗಳನ್ನು ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಮಾಡಲಾಗುವುದು.
-ಡಾ| ಡಿ. ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿ, ಎಸ್ಡಿಎಂ ಧಾರವಾಡ ವಿ.ವಿ.ಯ ಕುಲಪತಿ