ನದಿಗಳಲ್ಲಿ ಹರಿವು ಕ್ಷೀಣ; ಸದ್ಯಕ್ಕಿಲ್ಲ ತಲ್ಲಣ
ಸುಳ್ಯ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿತ: ಭವಿಷ್ಯಕ್ಕೆ ಆತಂಕದ ಸಂಕೇತ!
Team Udayavani, Dec 15, 2019, 4:17 AM IST
ಸುಳ್ಯ: ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಅಂತರ್ಜಲ ಮಟ್ಟ ಏರಿಕೆ ಹಂತದಲ್ಲಿದ್ದರೂ 2019ರ ಅಕ್ಟೋಬರ್ – ನವೆಂಬರ್ ತಿಂಗಳ ನಡುವಿನ ಅಂತರ್ಜಲ ಕುಸಿತದ ಅಂಕಿ-ಅಂಶ ನದಿ, ಹೊಳೆ, ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆ ಆಗುತ್ತಿರುವುದನ್ನು ದೃಢಪಡಿಸಿದೆ. ಹಾಗಂತ ಕಳೆದ ವರ್ಷ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ತಾಲೂಕಿನ ಪ್ರಮುಖ ನದಿಗಳಾದ ಪಯಸ್ವಿನಿ, ಕುಮಾರಧಾರಾದಲ್ಲಿ ಈ ಬಾರಿ ನೀರಿನ ಹರಿವು ಉತ್ತಮ ಸ್ಥಿತಿಯಲ್ಲೇ ಇದೆ. ಅಂತರ್ಜಲ ಮಟ್ಟದ ಕುಸಿತದ ಪ್ರಮಾಣವು ಆತಂಕದ ಸನಿಹದಲ್ಲೆ ಇದೆ ಎನ್ನುವುದು ಕೂಡ ಅಷ್ಟೇ ಗಂಭೀರ ಸಂಗತಿ.
ನಿರಂತರ ಮಳೆ
ಕಳೆದೆರಡು ವರ್ಷಗಳಿಂತ ಈ ವರ್ಷ ಮಳೆ ಪ್ರಮಾಣವು ಹೆಚ್ಚು. ಡಿಸೆಂಬರ್(ಕೆಲ ದಿನಗಳು) ತನಕವೂ ಮಳೆ ಸುರಿದಿತ್ತು. ಹೀಗಾಗಿ ನದಿ, ಕೆರೆ, ಬಾವಿ ಸಹಿತ ನೀರಿನ ಮೂಲಗಳಲ್ಲಿ ನೀರಿನ ಸಂಗ್ರಹ, ಹರಿವು ನಿರಂತರವಾಗಿತ್ತು. ಕಳೆದ 15 ದಿನಗಳಿಗೆ ಹೋಲಿಸಿದರೆ ಪಯಸ್ವಿನಿ ನದಿಯಲ್ಲಿ ಹರಿವಿನ ವೇಗ ಕುಂಠಿತವಾಗಿದೆ. ಹೊಳೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಸಣ್ಣ ತೋಡುಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಜಲಪಾತಗಳಲ್ಲಿ ಕೂಡ ಸಣ್ಣ ಹರಿವಷ್ಟೇ ಉಳಿದುಕೊಂಡಿದೆ.
ಮರಳಿನ ಕಟ್ಟ
ನಗರಕ್ಕೆ ನೀರೊದಗಿಸುವ ಕಲ್ಲುಮುಟ್ಲು ಬಳಿಯ ಪಯಸ್ವಿನಿ ನದಿ ತೀರದಲ್ಲಿ ನೀರಿನ ಪ್ರಮಾಣ ಉತ್ತಮ ಸ್ಥಿತಿಯಲ್ಲಿದೆ. ಕಳೆದ ವರ್ಷ ಫೆಬ್ರವರಿ ಆರಂಭದಲ್ಲಿ ಮರಳು ಕಟ್ಟ ನಿರ್ಮಿಸಿ ನದಿ ನೀರು ಸಂಗ್ರಹಿಸಲಾಗಿತ್ತು. ಈ ಬಾರಿಯ ಸ್ಥಿತಿ ಕಂಡಾಗ ಪೆಬ್ರವರಿ ಕೊನೆ ತನಕ ಆತಂಕ ಎದುರಾಗದು ಎನ್ನುತ್ತಿದೆ.
ಅಂತರ್ಜಲ, ಮಳೆ ಹೆಚ್ಚಳ
2018ರ ನವೆಂಬರ್ ತಿಂಗಳಲ್ಲಿ ಸುಳ್ಯ ತಾಲೂಕಿನಲ್ಲಿ 8.98 ಮೀ. ಇದ್ದ ಅಂತರ್ಜಲ ಮಟ್ಟ 2019ರ ನವೆಂಬರ್ನಲ್ಲಿ 7.62 ಮೀ.ನಲ್ಲಿದೆ. ಅಂದರೆ 1.37ರಷ್ಟು ಏರಿಕೆ ಅಂಶ ದಾಖಲಾಗಿದೆ. 2019ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಂತರ್ಜಲ ಮಟ್ಟ ಗಮನಿಸಿದರೆ 7.49 ಮೀ. ಮತ್ತು 7.62 ಮೀ.ನಷ್ಟು ದಾಖಲಾಗಿದೆ. ಅಂದರೆ 0.13 ಮೀ.ನಷ್ಟು ಇಳಿಕೆ ಕಂಡಿದೆ. ಮಳೆ ಪ್ರಮಾಣದ ಅಂಕಿ ಅಂಶದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಪ್ರಮಾಣ ಏರಿಕೆ ಆಗಿರುವುದು ಕಂಡು ಬಂದಿದೆ.
ಸೂಚನೆ ನೀಡಲಾಗಿದೆ
ಈ ವರ್ಷ ಮಳೆ ಹೆಚ್ಚಾಗಿರುವ ಕಾರಣ ನದಿಗಳಲ್ಲಿ ನೀರಿನ ಪ್ರಮಾಣ ಈಗ ಉತ್ತಮ ಸ್ಥಿತಿಯಲ್ಲಿದೆ. ಡಿ.15ರ ಅನಂತರ ಪರಿಸ್ಥಿತಿ ಪರಿಶೀಲಿಸಿ ಅಗತ್ಯವಿರುವ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸಲು ಗ್ರಾ.ಪಂ.ಗಳಿಗೆ ತಾ.ಪಂ.ಮತ್ತು ಜಿ.ಪಂ. ಮೂಲಕ ಸೂಚಿಸಲಾಗಿದೆ. ಈ ವರ್ಷ ಜಲ ಮರುಪೂರಣ, ಇಂಗುಗುಂಡಿ, ಸಣ್ಣ ಕಿಂಡಿ ಕಟ್ಟ ನಿರ್ಮಾಣಕ್ಕೆ ಸಾಕಷ್ಟು ಒತ್ತು ನೀಡಲಾಗಿತ್ತು. ಒಟ್ಟಿನಲ್ಲಿ ನೀರಿನ ಬರ ಬರಲಾರದು ಎನ್ನುವ ನಿರೀಕ್ಷೆ ನಮ್ಮದು. ಅಂತಹ ಸ್ಥಿತಿ ಬಂದರೆ ಎದುರಿಸಲು ಅಗತ್ಯ ತಯಾರಿ ಕೂಡ ಪ್ರಗತಿಯಲ್ಲಿದೆ.
– ಭವಾನಿಶಂಕರ ಎನ್. ಇಒ, ತಾ.ಪಂ., ಸುಳ್ಯ
ಮುಖ್ಯಾಂಶಗಳು
· ವ್ಯಕ್ತಿಗತ ಬೇಡಿಕೆ: 135 ಲೀ. (ದಿನಕ್ಕೆ)
· ಕೊರತೆ ಪ್ರಮಾಣ: 20ರಿಂದ 25 ಲೀ.
· ನೀರಿನ ಮೂಲ: ಪಯಸ್ವಿನಿ, ಕುಮಾರಾಧಾರಾ, ಬಾವಿ, ಕೆರೆ, ಕೊಳವೆಬಾವಿ, ನಳ್ಳಿ ಸಂಪರ್ಕ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ