ಅಸಹಾಯಕ ಮಹಿಳೆಯ ಮನೆ ದುರಸ್ತಿಗೆ ನೆರವು
Team Udayavani, Jun 12, 2019, 5:50 AM IST
ಬಂಟ್ವಾಳ: ಬೀಳುವ ಸ್ಥಿತಿಯಲ್ಲಿದ್ದ ಬಡ ವಿಧವೆಯ ಮನೆಯನ್ನು ಸಂಘಟನೆಗಳ ಸದಸ್ಯರು ಸೇರಿ ದುರಸ್ತಿ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಗೋಳ್ತಮಜಲು ಗ್ರಾಮದ ಗಣೇಶ ಕೋಡಿ ನಿವಾಸಿ ವಿಮಲಕ್ಕ ಅವರ ಮನೆಯ ಛಾವಣಿ ಕುಸಿಯುವ ಹಂತದಲ್ಲಿತ್ತು. ಅವರ ಇಬ್ಬರು ಪುಟ್ಟ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಬೀಡಿ ಕಟ್ಟಿ ಗಳಿಸುವ ಸಂಪಾದನೆ ಅವರ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಇವರ ಕಷ್ಟವನ್ನರಿತು ಶ್ರೀ ಗಣೇಶ್ ಗೆಳೆಯರ ಬಳಗ ಗೋಳ್ತಮಜಲು ತಂಡದ ಸದಸ್ಯರ ಮುಂದಾಳತ್ವದಲ್ಲಿ, ಸ್ವಸ್ತಿಕ್ ಫ್ರೆಂಡ್ಸ್ ಅಂಕದಡ್ಕ ಸಹಭಾಗಿತ್ವದಲ್ಲಿ, ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಹಾಗೂ ಸ್ಥಳೀಯ ನಾಗರಿಕರ ಸಹಕಾರ ದೊಂದಿಗೆ ಮನೆಯ ಛಾವಣಿ ದುರಸ್ತಿ ಮಾಡಲಾಗಿದೆ. ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ಛಾವಣಿಯ ಕೆಲಸವನ್ನು ಮಾಡಲಾಗಿದೆ. ಸಂಘಟನೆಗಳ ಯುವಕರು ಶ್ರಮದಾನದ ಮೂಲಕವೇ ಹೆಚ್ಚಿನ ಕೆಲಸ ನಿರ್ವಹಿಸಿದ್ದಾರೆ. ಈ ಕಾರ್ಯವು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.