ಪಾಂಗಳಾಯಿ: ಗುಡ್ಡ ಕುಸಿತ, ತೋಡಿಗೆ ತಡೆ
30 ಮೀ. ಗುಡ್ಡ ಕುಸಿದು ತೋಟ, ಗದ್ದೆಗಳಲ್ಲಿ ನೀರು ನಿಂತು ಸಮಸ್ಯೆ ಸೃಷ್ಟಿ
Team Udayavani, Aug 20, 2019, 5:00 AM IST
ನಗರ: ಇಲ್ಲಿನ ಪಾಂಗಳಾಯಿ ಬೈಲು ಪ್ರದೇಶ ಮತ್ತು ವಸತಿ ಪ್ರದೇಶದಲ್ಲಿ ಗುಡ್ಡ ಕುಸಿತ ಮತ್ತು ತೋಡಿನ ತಡೆಗೋಡೆ ಕುಸಿದ ಘಟನೆ ನಡೆದಿದೆ.
ಘಟನೆಯಿಂದ ತೋಡಿನ ನೀರಿನ ಹರಿಯುವಿಕೆಗೆ ಸಮಸ್ಯೆ ಉಂಟಾಗಿದ್ದು, ಪಕ್ಕದ ಗದ್ದೆ, ತೋಟ ಪ್ರದೇಶಗಳಲ್ಲಿ ನೀರು ನಿಂತಿದೆ.
ಬೈಲು ಪ್ರದೇಶಕ್ಕೆ ದರ್ಬೆ ವೃತ್ತದ ಬಳಿಯಿಂದ ಮತ್ತು ಬೆಥನಿ ಶಾಲೆ ಕಡೆಯಿಂದ ಬರುವ ತೋಡಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಬೈಲಿನ ಉತ್ತರ ಕಡೆಯ ಗುಡ್ಡ 30 ಮೀ.ನಷ್ಟು ಉದ್ದಕ್ಕೆ ಕುಸಿದಿದೆ. ಇದರಿಂದ ತೋಡು ಮುಚ್ಚಿದಂತಾಗಿದ್ದು, ಹಲವು ಮನೆಗಳಿಗೆ ಪತ್ರಾವೋ ಆಸ್ಪತ್ರೆ ಕಡೆಯಿಂದ ಹೋಗುವ ದಾರಿ ಮುಚ್ಚಿದೆ. ನೀರು ಸಂಗ್ರಹಗೊಂಡ ಕಾರಣ ಇಲ್ಲಿನ ಖಾಸಗಿ ಗದ್ದೆ ಕೆರೆಯಂತಾಗಿದೆ.
ಸಂಗ್ರಹಗೊಂಡ ನೀರಿನ ಒತ್ತಡದಿಂದಾಗಿ ಕಣಿಯೊಂದರ ತಡೆಗೋಡೆಯೂ ಕುಸಿದಿದೆ. ಇಲ್ಲಿನ ತೋಡು, ಕಣಿಯ ನೀರು ಮುಂದಕ್ಕೆ ಏಳ್ಮುಡಿ ರಾಜ ಕಾಲುವೆ ಯನ್ನು ಸೇರುತ್ತದೆ. ಈ ಕುರಿತು ಸ್ಥಳೀಯ ನಿವಾಸಿ ಗಳು ನಗರಸಭೆಗೆ ಮನವಿ ಮಾಡಿದ್ದಾರೆ.
ಮುಖ್ಯರಸ್ತೆಯಿಂದ ಬರುವ ಪಾಂಗಲಾಯಿ ರಸ್ತೆಯಲ್ಲಿ ಕವಲೊಡೆದ ಕಾಲುದಾರಿ ಮುಚ್ಚಿ ಹೋಗಿದೆ. ವಿಮಲಾ ಅವರ ಮನೆಗೆ ಅಪಾಯದಲ್ಲಿದೆ. ಇಲ್ಲಿನ ನಾಗ ಸಾನ್ನಿಧ್ಯವೊಂದರ ಪಕ್ಕದ ತಡೆಗೋಡೆ ನಾಶವಾಗಿದೆ. ಈ ಕುರಿತು ತತ್ಕ್ಷಣ ಕ್ರಮ ಕೈಗೊಂಡು ಹೆಚ್ಚಿನ ಹಾನಿಯಾಗದಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.