ಜಿ.ಪಂ. ಎಂಜಿನಿಯರ್ ಪರಿಶೀಲನೆ
Team Udayavani, Jul 20, 2018, 4:03 PM IST
ಸವಣೂರು: ತೀರಾ ಹದೆಗೆಟ್ಟಿರುವ ಬೆಳಂದೂರು ಜಿ.ಪಂ. ವ್ಯಾಪ್ತಿಯ ಅಂಕತ್ತಡ್ಕ-ಮಂಜುನಾಥನಗರ ರಸ್ತೆಯನ್ನು ಜಿ.ಪಂ. ಎಂಜಿಯರ್ ಗೋವರ್ಧನ್ ಪರಿಶೀಲಿಸಿದರು. ನಿರಂತರ ಮಳೆಯಿಂದಾಗಿ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ಅಭಿವೃದ್ಧಿಗಾಗಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಸಿಆರ್ಎಫ್ ನಿಧಿಯಿಂದ 2 ಕೋಟಿ ಅನುದಾನ ಮಂಜೂರುಗೊಳಿಸಿದ್ದು, ಟೆಂಡರ್ ಪ್ರಕ್ರಿಯೆಯ ಬಳಿಕ ಕಾಮಗಾರಿ ಆರಂಭವಾಗಲಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ನಿರಂತರ ಮಳೆಯಿಂದ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು ಕೆಸರಮಯವಾಗಿದ್ದು ಸಂಚಾರಕ್ಕೆ ಆಡಚಣೆಯಾಗಿದೆ.
ಗ್ರಾ.ಪಂ.ನಿಂದ ಸಮಸ್ಯೆ ನಿವಾರಣೆಗೆ ಪ್ರಯತ್ನ
ಮಳೆಗಾಲದಿಂದಾಗಿ ರಸ್ತೆಯು ಸಂಪೂರ್ಣವಾಗಿ ಹದೆಗೆಟ್ಟಿದ್ದು, ಆಲ್ಲದೆ ರಸ್ತೆಯ ಅಭಿವೃದ್ಧಿಗಾಗಿ ಅನದಾನವನ್ನು ಸಂಸದರು ಇಟ್ಟಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕೆಸರು ತುಂಬಿಕೊಂಡಿರುವ ಪ್ರದೇಶಕ್ಕೆ ತಾತ್ಕಾಲಿಕವಾಗಿ ಗ್ರಾ.ಪಂ.ನಿಂದ ಚರಳು (ದಪ್ಪ ಮರಳು) ಹಾಕಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ. ತಿಳಿಸಿದ್ದಾರೆ. ರಸ್ತೆ ಪರಿಶೀಲನೆ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ., ಉಪಾಧ್ಯಕ್ಷ ರವಿಕುಮಾರ್, ಸದಸ್ಯ ಸತೀಶ್ ಅಂಗಡಿಮೂಲೆ, ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ, ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ. ರಮೇಶ್,ಸವಣೂರು ಬೊಳ್ಳಿ-ಬೊಳ್ಪು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಮಂಜುನಾಥನಗರ ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ ಉಪಸ್ಥಿತರಿದ್ದರು.
ಸುದಿನ ವರದಿ ಪ್ರಕಟಿಸಿತ್ತು
ರಸ್ತೆಯ ಅವ್ಯವಸ್ಥೆ ಕುರಿತು ಜೂ.10ರಂದು ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು.