ಕೋಡಿಂಬಾಳ: ಕೋರಿಯಾರ್ನಲ್ಲಿ ಮರಳು ದಂಧೆ
ಸುಬ್ರಹ್ಮಣ್ಯ ಪೊಲೀಸರಿಂದ ಕಾರ್ಯಾಚರಣೆ; ಲಾರಿ ವಶ
Team Udayavani, Jun 12, 2019, 10:44 AM IST
ಕಡಬ: ಕುಮಾರಧಾರಾ ಹೊಳೆಯಿಂದ ಬಳ್ಪ ಗ್ರಾಮದ ಕೇನ್ಯ ಭಾಗದಲ್ಲಿ ಮರಳು ತೆಗೆದು ಕೋಡಿಂಬಾಳದ ಕೋರಿಯಾರ್ ಮೂಲಕ ರಾಜಾರೋಷವಾಗಿ ಅಕ್ರಮ ಮರಳು ದಂಧೆಕೋರರು ಮರಳು ಸಾಗಾಟ ನಡೆಸುತ್ತಿದ್ದರೂ ಯಾವುದೇ ಇಲಾಖೆಗಳೂ ಅಕ್ರಮ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಅಕ್ರಮ ಮರಳುಗಾರಿಕೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದ ಅಕ್ರಮ ಮರಳು ದಂಧೆಕೋರರು ಆ ಬಳಿಕವೂ ಯಾವುದೇ ತೊಡಕಿಲ್ಲದೆ ತಮ್ಮ ದಂಧೆಯನ್ನು ಮುಂದುವರಿಸಿದ್ದಾರೆ. ಮಂಗಳವಾರ ಬೆಳಗ್ಗಿನಿಂದಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಸುದ್ದಿ ತಿಳಿದ ಪತ್ರಕರ್ತರು ಸ್ಥಳಕ್ಕೆ ತೆರಳಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇನ್ಯದಲ್ಲಿ ಮರಳು ತೆಗೆಯಲು ಪಿಡಬುÉ Âಡಿ ಮೂಲಕ ಅನುಮತಿ ಪಡೆದುಕೊಂಡ ಗುತ್ತಿಗೆದಾರರ 1 ಲಾರಿಯನ್ನು ಸಾಗಾಟ ಅನುಮತಿ ಪತ್ರ ಇರಿಸಿಕೊಂಡಿಲ್ಲದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆದರೆ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ನಿರಂತರವಾಗಿ ಮರಳು ಸಾಗಾಟ ಮಾಡುತ್ತಿರುವವರು ಮಾತ್ರ ಯಾವ ಇಲಾಖೆಯವರಿಗೂ ಸಿಕ್ಕಿ ಬೀಳದಿರುವುದು ಸೋಜಿಗದ ಸಂಗತಿಯಾಗಿದೆ.
ಕಾರ್ಯಾಚರಣೆಯ ಬಳಿಕ ಪೊಲೀಸರು ಮತ್ತು ಪತ್ರಕರ್ತರು ಸ್ಥಳದಿಂದ ಹಿಂದಿರುಗಿದ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಅದೇ ಸ್ಥಳದಿಂದ ಮರಳು ತೆಗೆದು ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಪಡೆದ ಪತ್ರಕರ್ತರು ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರ ಜತೆ ಸಂಜೆಯ ತನಕವೂ ಸ್ಥಳದಲ್ಲಿದ್ದು, ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಿದ್ದಾರೆ. ಸೋಮವಾರ ಅಕ್ರಮ ಮರಳು ದಂಧೆಗೆ ಸಂಬಂಧಿಸಿ ಸ್ಥಳೀಯರಿಬ್ಬರು ಹೊಡೆದಾಟ ನಡೆಸಿಕೊಂಡ ಪ್ರಕರಣದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಗಣಿ ಇಲಾಖೆಯವರು ಎಲ್ಲಿ?
ಕೋರಿಯಾರ್ ಮೂಲಕ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆಯವರು, ಕಂದಾಯ ಇಲಾಖೆಯವರು ಈ ಕುರಿತು ತಲೆಕೆಡಿಸಿಕೊಂಡಿಲ್ಲ. ಇಲ್ಲಿ ರಾತ್ರಿ ಹಗಲೆನ್ನದೆ ಪಿಕ್ಪ್, ಮಿನಿ ಲಾರಿ ಸೇರಿದಂತೆ ಸುಮಾರು 25ರಿಂದ 30 ವಾಹನಗಳಲ್ಲಿ ಮರಳು ಸಾಗಿಸಿ ಜನರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಸರಕಾರದ ಅವೈಜ್ಞಾನಿಕ ಮರಳು ನೀತಿಯಿಂದಾಗಿ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿದ್ದು, ಜನರಿಗೆ ಮಾತ್ರ ಮರಳು ಚಿನ್ನದಂತಾಗಿದೆ.
ಅಕ್ರಮಕ್ಕೆ ಸಹಕರಿಸುತ್ತಿರುವ ಕೆಲವು ಇಲಾಖೆಗಳವರು ಹಾಗೂ ಮಧ್ಯವರ್ತಿ ಗಳು ಹಣ ಲೂಟಿ ಹೊಡೆಯುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕಾದವರು ಕಣ್ಮುಚ್ಚಿ ಕುಳಿತಿದ್ದಾರೆ.