ರಸ್ತೆಯ ಅಂಚಿನಲ್ಲೇ ಸಂತೆ ವ್ಯಾಪಾರ!
Team Udayavani, Aug 20, 2019, 5:10 AM IST
ಪುತ್ತೂರು: ನಗರದ ಹೃದಯಭಾಗದಲ್ಲಿರುವ ಸರಕಾರಿ ಕಚೇರಿಗಳನ್ನು ಸಂಪರ್ಕಿಸುವ ರಸ್ತೆಗಳು ಸೋಮವಾರ ಸಂತೆ ಮಾರುಕಟ್ಟೆಗಳಾಗಿ ಪರಿವರ್ತನೆಗೊಂಡಿದ್ದವು. ಕಾರಣ, ಪ್ರತಿ ಸೋಮವಾರ ಸಂತೆ ನಡೆಯುವ ಕಿಲ್ಲೆ ಮೈದಾನ ಗಣೇಶೋತ್ಸವದ ಹಿನ್ನೆಲೆಯಲ್ಲಿ ಸಿದ್ಧಗೊಳ್ಳುತ್ತಿರುವುದು.
ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ವತಿಯಿಂದ ವರ್ಷಂಪ್ರತಿಯಂತೆ ಗಣೇಶೋತ್ಸವ ನಡೆಯುವ ಸಂದರ್ಭದಲ್ಲಿ ಕಿಲ್ಲೆ ಮೈದಾನದ ಸಂತೆ ಪಕ್ಕದ ರಸ್ತೆ ಬದಿಗೆ ವರ್ಗಾವಣೆಯಾಗುತ್ತದೆ. ಪತ್ರಿಕಾ ಭವನದ ಸುತ್ತಲಿನ ನಾಲ್ಕು ರಸ್ತೆಗಳು ಈ ವಾರದ ಸೋಮವಾರದಿಂದ ಮುಂದಿನ ನಾಲ್ಕು ಸೋಮವಾರ ಸಂತೆ ವ್ಯಾಪಾರಿಗಳು, ಗ್ರಾಹಕರಿಂದ ತುಂಬಿರುತ್ತವೆ.
ಸೆ. 2ರಿಂದ 8ರ ತನಕ ಕಿಲ್ಲೆ ಮೈದಾನದಲ್ಲಿ ಮಹಾ ಗಣೇಶೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶೀಟ್ ಅಳವಡಿಸುವುದು ಸಹಿತ ವಿವಿಧ ಸಿದ್ಧತೆಗಳು ನಡೆಯುತ್ತಿವೆ. ಇದರಿಂದ ಪುತ್ತೂರಿನ ಸೋಮವಾರ ಸಂತೆ ವ್ಯಾಪಾರಿಗಳು ಆ. 19ರಿಂದ ಮತ್ತು ಸೆ. 9ರ ತನಕದ ಸೋಮವಾರ ವ್ಯಾಪಾರಕ್ಕಾಗಿ ರಸ್ತೆ ಬದಿಯನ್ನೇ ಅವಲಂಬಿಸಬೇಕಾಗಿದೆ.
ಒಂದು ವರ್ಷ ಇರಲಿಲ್ಲ
ಹಲವು ವರ್ಷಗಳಿಂದ ಗಣೇಶೋತ್ಸವದ ಸಂದರ್ಭ ಬರುವ ಸೋಮವಾರ ಸಂತೆ ಇದೇ ರೀತಿ ಕಿಲ್ಲೆ ಮೈದಾನ ಪರಿಸರದ ರಸ್ತೆ ಬದಿಗಳಲ್ಲೇ ನಡೆಯುತ್ತದೆ. ಒಂದು ವರ್ಷ ಮಾತ್ರ ಸಹಾಯಕ ಆಯುಕ್ತರ ಆದೇಶದಂತೆ ಕಿಲ್ಲೆ ಮೈದಾನದ ಸಂತೆ ಎಪಿಎಂಸಿಗೆ ಸ್ಥಳಾಂತರಗೊಂಡಿದ್ದರಿಂದ ಈ ಪ್ರಮೇಯ ಬಂದಿರಲಿಲ್ಲ. ಈಗ ಸಂತೆ ಮತ್ತೆ ಕಿಲ್ಲೆ ಮೈದಾನಕ್ಕೆ ಬಂದಿರುವುದರಿಂದ ಗಣೇ ಶೋತ್ಸವ ಸಂದರ್ಭದ ಸೋಮವಾರ ಸಂತೆ ರಸ್ತೆ ಬದಿಯಲ್ಲೇ ನಡೆಯಬೇಕು.
ಕಿಲ್ಲೆ ಮೈದಾನದ ಸಂತೆ ವ್ಯಾಪಾರ ರಸ್ತೆ ಬದಿಯಲ್ಲಿ ನಡೆಯುವುದಕ್ಕೆ ಸಾರ್ವಜನಿಕ ವಲಯದಿಂದಲೂ ಆಕ್ಷೇಪ ಇರುವುದಿಲ್ಲ. ಆದರೆ ಸರಕಾರಿ ಕಚೇರಿ, ಸರಕಾರಿ ಆಸ್ಪತ್ರೆಗಳಿಗೆ ಬರುವವರಿಗೆ ಮಾತ್ರ ಒಂದಷ್ಟು ಸಮಸ್ಯೆ ಉಂಟಾಗುತ್ತದೆ.
ಪುತ್ತೂರು ಸಂತೆ ವ್ಯವಹಾರಕ್ಕೆ ಸೂಕ್ತ ಕಟ್ಟೆ ನಿರ್ಮಾಣ ಮಾಡಬೇಕೆಂಬ ಆಗ್ರಹಕ್ಕೆ ಇನ್ನೂ ಬೆಲೆ ಸಿಕ್ಕಿಲ್ಲ. ನಗರಸಭೆಯು ನಗರೋತ್ಥಾನ ಯೋಜನೆಯಲ್ಲಿ 1 ಕೋಟಿ ರೂ. ಅನುದಾನ ಇರಿಸಿದೆ, ಹಳೆಯ ಸಮುದಾಯ ಭವನದ ಬಳಿ ಜಾಗ ಗುರುತಿಸಲಾಗಿದೆ ಎನ್ನುತ್ತಿದೆಯಾದರೂ ಕಟ್ಟೆ ನಿರ್ಮಾಣ ಕಾಮಗಾರಿ ಮಾತ್ರ ಇನ್ನೂ ಆಗಿಲ್ಲ. ಸಾಂಪ್ರದಾಯಿಕವಾಗಿ ಧಾರ್ಮಿಕ ಹಿನ್ನೆಲೆಯೊಂದಿಗೆ ಕಿಲ್ಲೆ ಮೈದಾನದಲ್ಲಿ ಗಣೇಶೋತ್ಸವ ಯಥಾಸ್ಥಿತಿಯಲ್ಲಿ ನಡೆಯಬೇಕು. ಹೀಗಾಗಿ ಪ್ರತ್ಯೇಕ ಕಟ್ಟೆ ಇಲ್ಲದ ಸಂತೆ ಇನ್ನು ಕೆಲವು ಸೋಮವಾರಗಳಲ್ಲಿ ರಸ್ತೆ ಬದಿಯಲ್ಲೇ ನಡೆಯಬೇಕು.