ಮಳೆಗಾಲ: ಇನ್ನು ಕರೆಂಟು ಇರೋದೆ ಡೌಟು!
ಧರಾಶಾಯಿಯಾಗುವ ಮರದ ಕೊಂಬೆಗಳು: ಗ್ರಾಮೀಣ ಬದುಕು ದುಸ್ತರ
Team Udayavani, Jun 14, 2019, 5:00 AM IST
ಸುಬ್ರಹ್ಮಣ್ಯ: ಮಳೆ ಆರಂಭವಾಗಿದೆ. ವಿದ್ಯುತ್ ಕೂಡ ಕೈ ಕೊಡಲಾರಂಭಿಸಿದೆ. ಕೃಷಿಕರಿಗೆ ಬೇಸಗೆಯಲ್ಲಿ ಲೋ ವೋಲ್ಟೆಜ್, ಮಳೆಗಾಲ ಶುರುವಾದರೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯ ಯದ ಸಮಸ್ಯೆ. ಗ್ರಾಮೀಣ ಜನರಿಗೆ ಇನ್ನು ಕರೆಂಟಿನದ್ದೇ ಚಿಂತೆ. ಮಳೆ ತನ್ನ ಪ್ರಲಾಪ ತೋರಿಸಲು ಇನ್ನೂ ಬಾಕಿ ಇದೆ. ಈಗಲೇ ವಿದ್ಯುತ್ ಸಮಸ್ಯೆ ಬಿಗಡಾ ಯಿಸಿದೆ. ಮಾನ್ಸೂನ್ ಪೂರ್ವದಲ್ಲಿ ಮಳೆಗಾಲಕ್ಕೆ ಮೆಸ್ಕಾಂ ಸಿದ್ಧತೆ ನಡೆಸಿದಂತಿಲ್ಲ ಎನ್ನುವುದು ಗ್ರಾಹಕರ ದೂರು.
ಜಂಗಲ್ ಕಟ್ಟಿಂಗ್, ಬ್ರೇಕ್ ಡೌನ್, ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವು, ಹಳೆಯ ಲೈನ್ಗಳ ದುರಸ್ತಿ ಅಥವಾ ಬದಲಾವಣೆ, ತಂತಿಗಳಿಗೆ ತಾಗುತ್ತಿರುವ ಗಿಡಬಳ್ಳಿಗಳ ತೆರವು ಇತ್ಯಾದಿ ಕೆಲಸಗಳನ್ನು ಮಳೆಗಾಲಕ್ಕೂ ಮೊದಲು ಮೆಸ್ಕಾಂ ನಿರ್ವಹಿಸಬೇಕು. ಗ್ರಾಮೀಣ ಭಾಗಗಳಲ್ಲಿ ಈ ಕೆಲಸಗಳು ಇನ್ನೂ ಪೂರ್ತಿಯಾಗಿಲ್ಲ.
ಗುತ್ತಿಗೆ ಕಾರ್ಮಿಕರ ನೇಮಕ
ಸುಬ್ರಹ್ಮಣ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಮಳೆಗಾಲ ತುರ್ತು ನಿರ್ವಹಣೆಗೆ 11 ಗುತ್ತಿಗೆ ಕಾರ್ಮಿಕರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಸುಬ್ರಹ್ಮಣ್ಯ ಕೇಂದ್ರಕ್ಕೆ 4 ಮಂದಿ, ಗುತ್ತಿಗಾರು ಹಾಗೂ ಪಂಜ ಕೇಂದ್ರಗಳಿಗೆ ತಲಾ 3ರಂತೆ ಕರ್ತವ್ಯದಲ್ಲಿದ್ದಾರೆ. ಕಲ್ಮಕಾರು ಮತ್ತು ಹರಿಹರ ಭಾಗದಲ್ಲಿ ಇಬ್ಬರು ಯೇನೆಕಲ್ಲು 3 ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ 4 ಲೈನ್ಮನ್ಗಳು ಕರ್ತವ್ಯದಲ್ಲಿದ್ದಾರೆ.
ಲೈನ್ಮನ್ಗಳ ಕೊರತೆ
ಸುಳ್ಯ ಸೇರಿ ಪಂಜ, ಜಾಲೂರು, ಅರಂತೋಡು, ಬೆಳ್ಳಾರೆ, ಗುತ್ತಿಗಾರು, ಸುಬ್ರಹ್ಮಣ್ಯ ಹೀಗೆ ಏಳು ವಿದ್ಯುತ್ ಸ್ಥಾವರಗಳು (ಸೆಕ್ಷನ್ಗಳು) ತಾಲೂಕಿನಲ್ಲಿವೆ. ಪ್ರತಿ ಸ್ಥಾವರಗಳಿಗೆ ಕನಿಷ್ಠ 25 ಲೈನ್ಮನ್ಗಳು ಇರಬೇಕೆಂದು ನಿಗಮ ಹೇಳುತ್ತದೆ. ಆದರೆ, ಏಳೂ ಶಾಖಾ ಕಚೇರಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಲೈನ್ಮನ್ಗಳಿಲ್ಲ. ಪ್ರತಿ ಸೆಕ್ನ್ಗೆ ಹತ್ತಕ್ಕಿಂತ ಕಡಿಮೆ ಲೈನ್ಮನ್ಗಳು ಇರುವುದರಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ, ತಾತ್ಕಾಲಿಕ ನೆಲೆಯಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದೆ.
ವಿದ್ಯುತ್ ಸರಬರಾಜು ಮಾರ್ಗಗಳ ತಂತಿಗಳಲ್ಲಿÉ ಮಳೆಗಾಲದಲ್ಲಿ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗುಡ್ಡ-ಕಾಡು ಪ್ರದೇಶಗಳಲ್ಲಿ ಈ ತಂತಿಗಳು ಹಾದುಹೋಗಿರುವುದು ಇದಕ್ಕೆ ಕಾರಣ. ಮಳೆಗಾಲದಲ್ಲಿ ಬೀಸುವ ಗಾಳಿ-ಮಳೆಗೆ ಮರ ಹಾಗೂ ಕೊಂಬೆಗಳು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದು ಅವುಗಳು ತುಂಡಾಗಿ ನೆಲಕ್ಕುರುಳುತ್ತವೆ. ಇದರ ದುರಸ್ತಿ ತತ್ಕ್ಷಣಕ್ಕೆ ಈಗ ಇರುವ ಮೆಸ್ಕಾಂ ಸಿಬಂದಿಯಿಂದ ಸಾಧ್ಯವಾಗುತ್ತಿಲ್ಲ.
ಮೊಬೈಲ್ ಸಂಪರ್ಕವೂ ಇಲ್ಲ
ಇರುವ ಲೈನ್ಮನ್ಗಳು ಮಳೆ-ಚಳಿಯಲ್ಲಿ ಹರಸಾಹಸ ಪಟ್ಟು ದುರಸ್ತಿಗೆ ಮುಂದಾದರೂ ಯಥಾಸ್ಥಿತಿಗೆ ಬರಲು ದಿನ ಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಗ್ರಾಮಾಂತರ ಪ್ರದೇಶಗಳ ಜನತೆ ವಾರಗಟ್ಟಲೆ ಕಾಲ ಕತ್ತಲೆಯಲ್ಲಿ ದಿನ ದೂಡುವ ಆತಂಕ ಎದುರಾಗಿದೆ. ಚಂಡಮಾರುತವೂ ಬಂದಿದ್ದರಿಂದ ಮುಂಗಾರು ಮಳೆ ಆರಂಭದಲ್ಲೇ ಅಬ್ಬರಿಸಿದೆ. ಡೀಸೆಲ್ ಖರೀದಿಸಲು ಬಿಎಸ್ಸೆನ್ನೆಲ್ಗೆ ಅನುದಾನ ಬರುತ್ತಿಲ್ಲವಾದ ಕಾರಣ ವಿದ್ಯುತ್ತಿಲ್ಲದಿದ್ದರೆ ಮೊಬೈಲ್ ಟವರ್ಗಳೂ ಸ್ತಬ್ಧವಾಗುತ್ತವೆ. ಹೀಗಾಗಿ, ತುರ್ತು ಸಂದರ್ಭಗಳಲ್ಲಿ ಸಂಪರ್ಕವೂ ಸಾಧ್ಯವಾಗದು.
ಹಲವು ಸವಾಲುಗಳು
ವಿದ್ಯುತ್ ವಿತರಿಸುವ ಸೆಕ್ಷನ್ನಲ್ಲಿ ಇರುವ ಆರೇಳು ಲೈನ್ಮನ್ಗಳು ಇಡೀ ವ್ಯಾಪ್ತಿಯನ್ನು ನಿರ್ವಹಿಸಲು ಅಸಾಧ್ಯ. ಪೂರ್ಣ ಮಳೆಗಾಲದಲ್ಲಿ ಅವಘಡ ಸಂಭವಿಸುವ ಸ್ಥಳಗಳಿಗೆ ಧಾವಿಸಲು ಆಗದ ಮಾತು. 20-25 ಸಿಬಂದಿ ಮಾಡುವ ಕೆಲಸಗಳನ್ನು ಏಳೆಂಟು ಮಂದಿ ನಿಭಾಯಿಸುತ್ತೇವೆಂದು ಲೈನ್ಮನ್ಗಳು ಹೇಳಿದರೂ ದಟ್ಟ ಅರಣ್ಯ ಪ್ರದೇಶ, ಹಳೆಯ ವಿದ್ಯುತ್ ಲೈನ್ ಹಾಗೂ ವಿಸ್ತಾರವಾದ ವ್ಯಾಪ್ತಿ ಇರುವುದರಿಂದ ಅದು ಸಾಧ್ಯವಾಗದ ಮಾತು ಎಂದೇ ಹೇಳಬೇಕು.
ಹೆಲ್ಪರ್ ನೀಡಿದಲ್ಲಿ ಉತ್ತಮ
ಲೈನ್ಮನ್ಗೆ ಸಹಾಯಕರನ್ನು ಕೊಟ್ಟು ಕ್ಷೇತ್ರ ಕಾರ್ಯಕ್ಕೆ ನಿಯೋಜಿಸಬೇಕು. ಆದರೆ ಮೆಸ್ಕಾಂನಲ್ಲಿ ಇದ್ಯಾವುದೂ ನಡೆಯುವುದು ಸದ್ಯಕ್ಕೆ ದೂರದ ಮಾತು. ಈ ಬಾರಿಯೂ ಮಳೆಗಾಲ ವಿದ್ಯುತ್ ವ್ಯತ್ಯಯ ತಪ್ಪಿದ್ದಲ್ಲ .
ಹತೋಟಿ ಹೇಗೆ?
ಕಂಬಗಳ ಅಂತರ ಕಡಿಮೆ ಮಾಡಬೇಕು. ತಂತಿಗಳು ಜೋತು ಬೀಳದಂತೆ ಎಚ್ಚರಿಕೆ ವಹಿಸಬೇಕು. ತಂತಿ ಹಾಗೂ ಕಂಬಗಳ ಮೇಲೆ ಮರ ಬಿದ್ದಾಗ ಸ್ಥಳೀಯರು ಕೊಂಬೆಗಳನ್ನು ಕತ್ತರಿಸಿ, ದುರಸ್ತಿಗೆ ಸಹಕರಿಸಬೇಕು. ಎಂದು ಲೈನ್ಮನ್ಗಳು ಹೇಳುತ್ತಾರೆ.
ನಿಭಾಯಿಸುತ್ತೇವೆ
ಮಾನ್ಸೂನ್ ಎದುರಿಸಲು ಸಿದ್ಧತೆ ನಡೆಸಿದ್ದೇವೆ. ಕಂಬಗಳು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಹೆಚ್ಚುವರಿ ಸಿಬಂದಿಯನ್ನು ತಾತ್ಕಾಲಿಕವಾಗಿ ಪಡೆದುಕೊಂಡಿ ದ್ದೇವೆ. ಸೆಕ್ಷನ್ಗಳಲ್ಲಿ ಇರುವ ಸಿಬಂದಿಯನ್ನು ಬಳಸಿಕೊಂಡು ಮುಂದೆ ಎದುರಾಗಬಹುದಾದ ಸಮಸ್ಯೆ ನಿವಾರಣೆ ದೃಷ್ಟಿಯಿಂದ ಗಮನ ಹರಿಸುತ್ತೇವೆ.
– ಚಿದಾನಂದ ಸ.ಕಾ.ನಿ. ಎಂಜಿನಿಯರ್, ಮೆಸ್ಕಾಂ, ಸುಬ್ರಹ್ಮಣ್ಯ