“ರಂಗ ಭೂಮಿ ಸ್ಪರ್ಶದಿಂದ ಕಲ್ಪನೆ ಮೂಡುತ್ತವೆ’
ಕುಸುಮಸಾರಂಗ ರಂಗ ಘಟಕದ "ಅಭಿಯಾನ' ನಾಟಕ ಪ್ರದರ್ಶನ
Team Udayavani, Jun 11, 2019, 5:50 AM IST
ಸುಬ್ರಹ್ಮಣ್ಯ: ಮಕ್ಕಳಲ್ಲಿ ರಂಗಭೂಮಿಯ ಅಭಿರುಚಿ ಹೆಚ್ಚಿಸಬೇಕು. ನಾಟಕಗಳು ಮಕ್ಕಳ ಕ್ರೀಯಾಶೀಲತೆ ಹೆಚ್ಚಿಸುತ್ತದೆ. ಬಾಲ್ಯದ ದಿನಗಳಲ್ಲಿ ಮಕ್ಕಳು ನಾಟಕ ವೀಕ್ಷಿಸುವುದರಿಂದ ಅದು ಅವರ ಮುಂದಿನ ಬೆಳವಣಗೆಗೆ ಹೆಚ್ಚು ಸಹಕಾರಿಯಾಗುತ್ತದೆ. ಅವರಲ್ಲಿ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ ಎಂದು ರಂಗಭೂಮಿ ನಿರ್ದೇಶಕಿ ದಾಕ್ಷಾಯಣಿ ಭಟ್ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ಮಹಾವಿದ್ಯಾಲಯದ ರಂಗ ಘಟಕ ಕುಸುಮ ಸಾರಂಗ ಘಟಕದ ವಿದ್ಯಾರ್ಥಿಗಳು ಕಾಲೇಜು ಸಭಾಂಗಣದಲ್ಲಿ ಸೋಮವಾರ ಪ್ರಸ್ತುತ ಪಡಿಸಿದ 27ನೇ ನಾಟಕ ಅಭಿಯಾನದ ಮೊದಲ ಪ್ರದರ್ಶನದ ವೇಳೆ ಅವರು ವಿದ್ಯಾರ್ಥಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಭೀಷ್ಮ-ಅಂಬೆ ಕಥಾ ಭಾಗವನ್ನು ಹೊಂದಿರುವ ಅಭಿಯಾನ ನಾಟಕವನ್ನು ಡಾ| ಜಯಪ್ರಕಾಶ್ ಮಾವಿನಕುಳಿ ರಚಿಸಿದ್ದು, ದಾಕ್ಷಾಯಿಣಿ ಭಟ್ ನಿರ್ದೇಶನ ನೀಡಿದ್ದಾರೆ. ಕಾಲೇಜಿನ 19 ವಿದ್ಯಾರ್ಥಿಗಳು ನಾಟಕದಲ್ಲಿ ಬಣ್ಣ ಹಚ್ಚಿದ್ದಾರೆ. ಉಪನ್ಯಾಸಕ ಪ್ರೊ| ಗೋವಿಂದ ಎನ್.ಎಸ್. ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಪ್ರದರ್ಶನವನ್ನು ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ವೀಕ್ಷಿಸಿದರು. ಮಧ್ಯಾಹ್ನದ ಬಳಿಕ 2ನೇ ಪ್ರದರ್ಶನ ನಡೆಯಿತು. ಜೂನಿಯರ್ ಕಾಲೇಜು ಉಪನ್ಯಾಸಕ ರಘು ಬಿಜೂರ್ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಉದಯಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಜೂ. 11ರಂದು ಪ್ರದರ್ಶನ ನಡೆಯಲಿದೆ. ಬಳಿಕ ನಾಟಕ ತಂಡವು ತನ್ನ ತಿರುಗಾಟವನ್ನು ನಡೆಸಲಿದೆ. ದೇವಸ್ಥಾನದ ಆಡಳಿತ ಮಂಡಳಿ, ಕಾಲೇಜು ಹಾಗೂ ರಂಗಭೂಮಿ ಆಸಕ್ತರ ಸಹಕಾರದಿಂದ ಕಳೆದ 26 ವರ್ಷಗಳಿಂದ ಕಾಲೇಜಿನ ಕುಸುಮ ಸಾರಂಗ ರಂಗ ಘಟಕ ರಂಗಭೂಮಿಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ.