ಬೆಳ್ತಂಗಡಿಯ ವಾರದ ಸಂತೆಗೂ ತಟ್ಟಿದೆ ಬಿಸಿ!
Team Udayavani, Aug 20, 2019, 5:00 AM IST
ಬೆಳ್ತಂಗಡಿ: ಒಂದೆಡೆ ನೆರೆ ಹಾವಳಿಯಿಂದಾಗಿ ಬೆಳ್ತಂಗಡಿ ತಾಲೂಕಿನ ಬಹುತೇಕ ಕೃಷಿ ಪ್ರದೇಶ ಗಳು ಸರ್ವನಾಶವಾಗಿದ್ದರೆ, ಮತ್ತೂಂ ದೆಡೆ ಮಲೆನಾಡು ಜಿಲ್ಲೆಗಳಿಂದ ನಮ್ಮ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಕುಸಿದು ಸಂಪರ್ಕ ಕಡಿತ ಗೊಂಡಿದೆ. ಈ ಎರಡೂ ಘಟನೆಗಳು ಜನಜೀವನದ ಮೇಲೆ ಹೊಡೆತ ನೀಡುವ ಜತೆಗೆ ಬೆಳ್ತಂಗಡಿಯ ಸೋಮವಾರದ ಸಂತೆಗೂ ಹೊಡೆತ ನೀಡಿದೆ.
ಪ್ರಮುಖವಾಗಿ ನೋಡುವುದಾದರೆ ಸಂತೆಗೆ ಆಗಮಿಸುವ ಊರಿನ ತರಕಾರಿ ಗಳು ತಾಲೂಕಿನ ಗ್ರಾಮೀಣ ಭಾಗದಿಂದ ಆಗಮಿಸಿದರೆ, ಘಟ್ಟ ಪ್ರದೇಶದ ತರಕಾರಿಗಳು ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಆಗಮಿಸುತ್ತಿದ್ದವು. ಹೀಗಾಗಿ ಸಂತೆಯಲ್ಲಿರುವ ತರಕಾರಿಗಳು ದುಬಾರಿಯಾದರೆ, ನೆರೆ ಹಾವಳಿಯಿಂದ ಆ ಭಾಗದ ಮಂದಿ ಸಂತೆಯತ್ತ ಮುಖ ಮಾಡದಂತೆ ಮಾಡಿದೆ.
ಪ್ರತಿ ಬಾರಿ ಅಗ್ಗ; ಈಗ ದುಬಾರಿ
ಸಂತೆಯ ವರ್ತಕರು ಅಭಿಪ್ರಾಯಿ ಸುವಂತೆ ಪ್ರತಿವರ್ಷ ಈ ಸಮಯ ತರಕಾರಿ ಕೊಂಚ ಅಗ್ಗದಲ್ಲಿ ಲಭ್ಯ ವಾಗುತ್ತದೆ. ಆದರೆ ಈ ಬಾರಿ ಧಾರಣೆ ದುಬಾರಿಯಾಗಿದ್ದು, ದುಪ್ಪಟ್ಟಾದ ಉದಾಹರಣೆಯೂ ಇದೆ. ಬಹುತೇಕ ಎಲ್ಲ ತರಕಾರಿ ಗಳ ಧಾರಣೆಯೂ 40 ರೂ. ದಾಟಿದೆ. ಅಂದರೆ ಹೆಚ್ಚಿನ ತರಕಾರಿ ಚಿಕ್ಕಮಗಳೂರು ಭಾಗದಿಂದ ಬರು ತ್ತಿದ್ದು, ಪ್ರಸ್ತುತ ಚಾರ್ಮಾಡಿ ಘಾಟ್ ರಸ್ತೆ ಬಂದ್ ಆಗಿದೆ. ಹೀಗಾಗಿ ವರ್ತಕರು ಶಿರಾಡಿ ಘಾಟ್ ರಸ್ತೆಯ ಮೂಲಕ ಆಗಮಿಸಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಸುಮಾರು 80 ಕಿ.ಮೀ.ಗಳಷ್ಟು ಸುತ್ತು ಬಳಸಿ ಬರಬೇಕಿದೆ.
ಬಹುತೇಕ ತರಕಾರಿ ಗಳು ಮಿನಿ ಗೂಡ್ಸ್ ವಾಹನಗಳ ಮೂಲಕ ಬರುವುದರಿಂದ ಅವರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದ್ದು, ಹೀಗಾಗಿ ಈ ಭಾಗಕ್ಕೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಆಗಮಿಸಿದರೂ ದುಬಾರಿ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಸಂತೆಯಲ್ಲಿ ವ್ಯಾಪಾರದ ಅಬ್ಬರಕ್ಕೆ ಹೊಡೆತ ನೀಡಿದೆ.
ಸಂತೆಯಲ್ಲಿ ಜನವೂ ವಿರಳ
ದುಬಾರಿ ಧಾರಣೆ ಜತೆಗೆ ಸಂತೆಯಲ್ಲಿ ಜನರೂ ವಿರಳವಾಗಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮೀಣ ಭಾಗವು ಈ ಬಾರಿ ನೆರೆ ಹಾವಳಿಗೆ ತುತ್ತಾಗಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುವ ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಚಾರ್ಮಾಡಿಯ ಬೊಳ್ಳೂರುಬೈಲು ಪ್ರದೇಶದಲ್ಲಿ ಎಲ್ಲ ರೀತಿಯ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಮುಖ್ಯವಾಗಿ ಸೌತೆಕಾಯಿ ಹಾಗೂ ಬದನೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಪ್ರದೇಶ ಮಾತ್ರವಲ್ಲದೆ ತಾಲೂಕಿನ ನೆರೆ ಹಾವಳಿಗೆ ತುತ್ತಾದ ಬಹುತೇಕ ಪ್ರದೇಶಗಳು ಕೂಡ ತರಕಾರಿ ಬೆಳೆಯುವ ಪ್ರದೇಶಗಳಾಗಿದ್ದು, ಮುಂದಿನ ಒಂದು ತಿಂಗಳ ಬಳಿಕ ಈ ಭಾಗದಿಂದ ಹೆಚ್ಚಿನ ಪ್ರಮಾಣದ ತರಕಾರಿ ಸಂತೆಗೆ ಆಗಮಿಸುವ ಸಮಯವಾಗಿತ್ತು. ಆದರೆ ಈ ಬಾರಿ ಅಲ್ಲಿಂದ ಊರಿನ ತರಕಾರಿಗಳು ಆಗಮಿಸುವುದು ದೂರದ ಮಾತು ಎಂದು ವರ್ತಕರು ವಿವರಿಸುತ್ತಾರೆ.
ಸಾಮಾನ್ಯವಾಗಿ ಸೋಮವಾರದ ದಿನ ತಾಲೂಕಿನ ಗ್ರಾಮೀಣ ಭಾಗದ ಜನತೆ ಸಂತೆಗೆ ಆಗಮಿಸಿ ಒಂದು ವಾರಕ್ಕೆ ಬೇಕಾದ ತರಕಾರಿಗಳ ಜತೆಗೆ ದಿನಸಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು.
ಆದರೆ ಪ್ರಸ್ತುತ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರ ಜೀವನವೇ ಅತಂತ್ರವಾಗಿದ್ದು, ಅವರು ಎಲ್ಲಿಗೂ ಹೋಗುವ ಸ್ಥಿತಿಯಲ್ಲಿಲ್ಲ.