ಗುರುವಿನ ಆರಾಧನೆ ಶ್ರೇಷ್ಠ: ಬ್ರಹ್ಮಾನಂದ ಸರಸ್ವತೀ ಶ್ರೀ
Team Udayavani, Jul 17, 2019, 5:18 AM IST
ಬೆಳ್ತಂಗಡಿ: ಅಧ್ಯಾತ್ಮ ಅಂತರಾಳದ ಮೌಲ್ಯವನ್ನು ಉಳಿಸುವವ ಗುರು. ಅಜ್ಞಾನದ ಅಂಧಕಾರವನ್ನು ಹೋಗ ಲಾಡಿಸಿ ಭಗವಂತನ ಆತ್ಮಸಾಕ್ಷಾತ್ಕಾರಕ್ಕಾಗಿ ಚಿತ್ತೈಸುವ ಶಕ್ತಿ ಗುರುವಿನಲ್ಲಿರುವುದರಿಂದ ಗುರುವಿನ ಆರಾಧನೆ ಶ್ರೇಷ್ಠವಾದುದು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಮಂಗಳವಾರ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಪಾದ ಪೂಜೆ, ಗುರುವಂದನೆ ಬಳಿಕ ಸ್ವಾಮೀಜಿ ಆಶೀರ್ವಚನ ನೀಡಿ, ಪಂಚೇಂದ್ರಿಯಗಳನ್ನು ನಿಯಂತ್ರಿಸಿ ಮನಸ್ಸಿಗೆ ವೈರಾಗ್ಯ ಬಂದಾಗ ಸತ್ಯದ ಅರಿವು ನಮಗಾಗುತ್ತದೆ. ಪ್ರಕೃತಿಯೇ ನಮ್ಮ ಗುರು. ಸುಜ್ಞಾನದ ಸುಗಂಧವನ್ನು ಪಸರಿಸಿ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಮಾರ್ಗದರ್ಶನ ನೀಡುವ ಗುರುವಿನ ಅನುಕರಣೆಯಾಗಬೇಕಿದೆ. ಪರಿಶುದ್ಧ ಮನಸ್ಸಿನಿಂದ ಮಾಡಿದ ಜಪ, ತಪ, ಧ್ಯಾನದಿಂದ ಆತ್ಮನೇ ಪರಮಾತ್ಮನಾಗಬಲ್ಲ. ಗುರುಪೂರ್ಣಿಮೆ ಧರ್ಮಜಾಗೃತಿ ಮಾಡುವ ಪರ್ವವಾಗಿದೆ ಎಂದರು.
ಧರ್ಮಸ್ಥಳ ಉಗ್ರಾಣ ಮುತ್ಸದ್ಧಿ ಬಿ. ಭುಜಬಲಿ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಾದ ಸತ್ಯಜಿತ್ ಸುರತ್ಕಲ್, ಸುಜೀತಾ ವಿ. ಬಂಗೇರ, ಪೀತಾಂಬರ ಹೆರಾಜೆ, ಭಗೀರಥ ಜಿ., ಚಿತ್ತರಂಜನ್ ಗರೋಡಿ, ತಿಮ್ಮಪ್ಪ ಗೌಡ ಬೆಳಾಲು, ವಾಮನ ನಾಯ್ಕ ಹೊನ್ನಾವರ, ಜೆ.ಎನ್.ನಾಯ್ಕ, ಬಾಬು ಮಾಸ್ಟರ್, ಎಂ.ಆರ್.ನಾಯ್ಕ, ಕೆ.ಆರ್.ನಾಯ್ಕ, ವೆಂಕಟೇಶ್ ನಾಯ್ಕ, ಶ್ರೀಧರ ನಾಯ್ಕ, ಕರುಣಾಕರ ನಾಯ್ಕ, ಜಯಂತ ಕೋಟ್ಯಾನ್ ಮರೋಡಿ, ಸದಾನಂದ ಪೂಜಾರಿ ಉಂಗಿಲಬೆ„ಲು, ಎಂ.ಜಿ.ನಾಯ್ಕ, ಪಿ.ಟಿ.ನಾಯ್ಕ ಭಟ್ಕಳ, ತಿಮ್ಮಪ್ಪ ಗೌಡ ಬೆಳಾಲು, ಕೃಷ್ಣ ನಾಯ್ಕ, ಶಂಕರ ನಾಯ್ಕ, ಮಳ್ಳ ನಾಯ್ಕ, ಈರಪ್ಪ ನಾಯ್ಕ, ಶೈಲೇಶ್ ಕುಮಾರ್ ಕುರ್ತೋಡಿ, ಸಂತೋಷ್ ಕುಮಾರ್ ಕಾಪಿನಡ್ಕ, ರವಿ ಪೂಜಾರಿ ಬರಮೇಲು, ಕೃಷ್ಣಪ್ಪ ಗುಡಿಗಾರ್, ತುಕಾರಾಮ ಸಾಲ್ಯಾನ್ ಉಪಸ್ಥಿತರಿದ್ದರು. ಪ್ರೊ| ಕೇಶವ ಬಂಗೇರ ಸ್ವಾಗತಿಸಿ, ವಂದಿಸಿದರು.
ಸ್ವಾಮೀಜಿಯವರ ಪಾದಪೂಜೆ
ಭಕ್ತರಿಂದ ಭಜನೆ, ಪ್ರಾರ್ಥನೆ ಬಳಿಕ ನಿತ್ಯಾನಂದ ಸ್ವಾಮಿ ಹಾಗೂ ಆತ್ಮಾನಂದ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ವಾದ್ಯಘೋಷದೊಂದಿಗೆ ಸ್ವಾಮೀಜಿಯವರನ್ನು ಕರೆ ತರಲಾಯಿತು. ಪುರೋಹಿತರಿಂದ ನವಗ್ರಹ ಶಾಂತಿ ಹೋಮ, ಸ್ವಾಮೀಜಿಯವರಿಗೆ ಕಿರೀಟಧಾರಣೆ, ಪಾದ ಪೂಜೆ ನೆರವೇರಿತು. ಮೂಡುಬಿದರೆಯ ಜೋತಿಷಿ ವೆಂಕಟೇಶಕಿಣಿ ಗುರು ಪೂರ್ಣಿಮೆ ಆಚರಣೆ ಮಹತ್ವ ತಿಳಿಸಿದರು.
ಬುದ್ಧಿ, ಚಿಂತನೆ ವೈಶಾಲ್ಯ
ಅಧ್ಯಾತ್ಮ ಚಿಂತನೆಗೆ ಸಮಯ ಮೀಸಲಿಡುವುದರಿಂದ ಅಧ್ಯಯನಶೀಲರಾಗಬಹುದು. ವಿದ್ಯಾರ್ಥಿಗಳು ಎಳವೆಯಿಂದಲೇ ಅಧ್ಯಾತ್ಮ ಚಿಂತನೆಗೆ ಒಳಗಾಗುವುದರಿಂದ
ಬುದ್ಧಿ, ಚಿಂತನೆ ವೈಶಾಲ್ಯ ಪಡೆಯುತ್ತದೆ. ವ್ಯಕ್ತಿ ವಿಕಸನಕ್ಕೆ ಅಧ್ಯಾತ್ಮ ಆರಾಧನೆಯಾಗಬೇಕಿದೆ.
– ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರ