ಕಾಬೆಟ್ಟು ಪರಿಸರದ ಚರಂಡಿಗೆ ಆಪತ್ತು ತಂದ ಕೇಬಲ್ ಗುಂಡಿ
ಅಸಮರ್ಪಕ ಕಾಮಾಗಾರಿ ಸಾರ್ವಜನಿಕರಿಗೆ ಕಿರಿಕಿರಿ
Team Udayavani, May 5, 2019, 6:16 AM IST
ಕಾರ್ಕಳ: ಪುರಸಭಾ ವ್ಯಾಪ್ತಿಯ ಕಾಬೆಟ್ಟು ಪರಿಸರದಲ್ಲಿ ಕೇಬಲ್ ಅಳವಡಿಕೆಗಾಗಿ ಗುಂಡಿ ತೋಡಿ, ಬಳಿಕ ಸಮರ್ಪಕವಾದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೆ 2 ಕೀ.ಮೀ. ರಸ್ತೆಯನ್ನು ಹಾಳುಗೆಡವಲಾಗಿದೆ.
ಕಾರ್ಕಳ ಮುಖ್ಯರಸ್ತೆಯಿಂದ ಕಾಬೆಟ್ಟು ಸಂಪರ್ಕಿಸುವ ರಸ್ತೆಯಲ್ಲಿ ಖಾಸಗಿ ದೂರ ಸಂಪರ್ಕ ಕಂಪೆನಿಯವರು ಕೇಬಲ್ ಅಳವಡಿಕೆಗಾಗಿ ರಸ್ತೆ ಬದಿ ಅಗೆದು ಮನಬಂದಂತೆ ಗುಂಡಿ ಮುಚ್ಚಿ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದು ಹೋಗದಂತೆ ಮಾಡಿದ್ದಾರೆ.
ರಸ್ತೆಯೂ ಹಾಳು
ಚರಂಡಿ ತುಂಬಾ ಮಣ್ಣು ತುಂಬಿಕೊಂಡಿದ್ದು, ಸರಿಪಡಿಸದೇ ಹೋದರೆ ನೀರು ರಸ್ತೆಯಲ್ಲೇ ಹರಿಯಲಿದೆ. ಈ ರೀತಿ ಎಲ್ಲೆಡೆ ನೀರು ಹರಿಯುತ್ತಿದ್ದಲ್ಲಿ ವಾಹನ ಚಾಲಕರು, ದ್ವಿಚಕ್ರ ಸವಾರರು ಮಾತ್ರವಲ್ಲದೇ ಪಾದಚಾರಿಗಳನ್ನು ಅಪಾಯಕ್ಕೆ ದೂಡಿದಂತಾಗಲಿದೆ. ಶಾಲಾ ಮಕ್ಕಳು ನಡೆದುಕೊಂಡು ಹೋಗುವಾಗಲೂ ಹೊಂಡ ಗುರುತಿಸಲಾಗದೇ ಅಪಾಯಕ್ಕೀಡಾಗುವ ಪ್ರಮೇಯವೂ ಇಲ್ಲದಿಲ್ಲ.
ಈಗ ಧೂಳಿನ ಗೋಳು
ರಸ್ತೆ ಕಾಮಗಾರಿ ಆದ ತಕ್ಷಣ ಎಲ್ಲೆಡೆ ರಸ್ತೆ ಬದಿ ಅಗೆಯುವುದು, ಧೂಳಿನ ಸಮಸ್ಯೆ ತಂದೊಡ್ಡುವುದ ಸಾಮಾನ್ಯವಾಗಿದೆ. ರಸ್ತೆ ಬದಿಯ ಧೂಳು ದ್ವಿಚಕ್ರ ಸವಾರರು ಮತ್ತು ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು ವ್ಯವಸ್ಥೆಗೆ ಹಿಡಿಶಾಪ ಹಾಕಿಕೊಂಡೇ ಮುಂದೆ ಸಾಗುತ್ತಿದ್ದಾರೆ.
ಎಚ್ಚೆತ್ತುಕೊಳ್ಳಿ
ಒಂದೆಡೆ ರಸ್ತೆ ಹಾಳಾಗುತ್ತಿದ್ದು, ಮತ್ತೂಂದೆಡೆ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದರೂ ಆಡಳಿತ ವರ್ಗ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಮಗಾರಿ ನಡೆಸುವ ವೇಳೆ ಸಂಬಂಧಪಟ್ಟವರು ಅಲ್ಲಿಗಾಗಮಿಸಿ ಮೇಲುಸ್ತುವಾರಿ ವಹಿಸಬೇಕು. ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾಮಗಾರಿ
ನಡೆಸದಿದ್ದಲ್ಲಿ ಜನಪ್ರತಿನಿಧಿ, ಅಧಿಕಾರಿಗಳನ್ನು ಜನರು ಅನುಮಾನದಿಂದಲೇ ನೋಡುತ್ತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ ಬದ್ಧತೆ ತೋರ್ಪಡಿಸಬೇಕಾಗಿದೆ.