ನಾಡಿನೆಲ್ಲೆಡೆ ಸಂಭ್ರಮದ ಮಹಾಶಿವರಾತ್ರಿ
ಭಕ್ತರಿಂದ ಮಹಾದೇವನ ಸ್ಮರಣೆ
Team Udayavani, Feb 21, 2020, 10:27 PM IST
ಬೀದಿ ಮಹಾಲಿಂಗೇಶ್ವರ ದೇವಸ್ಥಾನ.
ಕಾರ್ಕಳ: ಮಹಾಶಿವರಾತ್ರಿ ಹಿಂದೂ ಸಂಸ್ಕೃತಿಯ ಪವಿತ್ರ ಹಬ್ಬಗಳಲ್ಲಿ ಒಂದು. ಹಗಲು ಉಪವಾಸವಿದ್ದು ರಾತ್ರಿ ವೇಳೆ ಜಾಗರಣೆ ಮಾಡಿ ಶಿವಧ್ಯಾನದ ಮೂಲಕ ಶಿವನ ಕೃಪೆಗೆ ಪಾತ್ರರಾಗುವ ಶುಭದಿನ. ಹಾಗೇ ಕಾರ್ಕಳ ತಾಲೂಕಿನಾದ್ಯಂತ ಶುಕ್ರವಾರ ಬೆಳಗ್ಗಿನಿಂದಲೇ ಹಬ್ಬದ ವಾತಾವರಣ ಮನೆಮಾಡಿತ್ತು.
ಮೊದಲಾದ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ಪೂಜಾ ಕೈಂಕರ್ಯಗಳು ಜರಗಿದವು. ಮುಂಜಾನೆಯಿಂದಲ್ಲೇ ಭಕ್ತರು ಶ್ರದ್ಧಾ ಭಕ್ತಿಯಿಂದ ವಿವಿಧ ದೇವಸ್ಥಾನಗಳಿಗೆ ತೆರಳಿ ಬಿಲ್ವಪತ್ರೆ, ಎಳ್ಳೆಣ್ಣೆ ಸೇವೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿ ಶಿವದರ್ಶನ ಪಡೆದು ಪುನೀತರಾದರು.
ಬೈಲೂರು ಬೀದಿ ಮಹಾಲಿಂಗೇಶ್ವರ ದೇಗುಲ
ಅಜೆಕಾರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೀದಿ ಬೈಲೂರುವಿನಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಧ್ವಜಾ ರೋಹಣ ನಡೆಯಿತು. ಪ್ರಯುಕ್ತ ಪಲ್ಲ ಪೂಜೆ, ಸುಹಾಸಿನಿ ಆರಾಧನೆ, ಉತ್ಸವ ಬಲಿ, ವಸಂತ ಪೂಜೆ ನಡೆಯಿತು.
ಹೆಬ್ರಿ ಅರ್ಧನಾರೀಶ್ವರ ದೇಗುಲ
ಹೆಬ್ರಿ ತಾಣ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ಕ್ಷೀರಾಭಿ ಷೇಕ, ಸೀಯಾಳಾಭಿಷೇಕ, ರುದ್ರಾಭಿಷೇಕ ,ರಾತ್ರಿ ಭಜನೆ , ಶಿವರಾತ್ರಿ ವಿಶೇಷ ಪೂಜೆ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇಗುಲ ಪೆರ್ವಾಜೆ
ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನ ಕಾರ್ಯಕ್ರಮ, ರಾತ್ರಿ ರಂಗಪೂಜೆ ನಡೆಯಿತು.
ಪಡುಬೆಳ್ಮಣ್ ಮಹಾಲಿಂಗೇಶ್ವರ ದೇಗುಲ
ಬೆಳ್ಮಣ್: ಪಡುಬೆಳ್ಮಣ್ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಮಹೋತ್ಸವ ಶುಕ್ರವಾರ ದ್ರವ್ಯ ಕಲಶ ಸಹಿತ ಶತರುದ್ರಾಭಿಶೇಕ, ಮಹಾಪೂಜೆ, ಹಾಗೂ ಅನ್ನಸಂತರ್ಪಣೆಯೊಂದಿಗೆ ನಡೆಯಿತು.
ಶ್ರೀಕ್ಷೇತ್ರ ಅಡಪಾಡಿ
ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಮಧ್ಯಾಹ್ನ ಮಹಾಪೂಜೆ, ರಜತ ಪಲ್ಲಕಿ ಉತ್ಸವ, ಪಲ್ಲಪೂಜೆ, ಉಭಯದೇವರುಗಳ ರಥಾರೋಹಣ, ರಥೋತ್ಸವ ನಡೆಯಿತು.